‘ಜೈ ಮೋದಿ’ ಎಂದ ವಿಚಾರವಾದಿ ಭಗವಾನ್ ಸಂದರ್ಶನ : eXclusive

0
473

ಮೋದಿ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ಸಂವಿಧಾನ ಬದ್ಧ ವಿಶೇಷ ಸ್ಥಾನಮಾನ ಆರ್ಟಿಕಲ್ 370 ಹಾಗೂ 35A ಅನ್ನು ರದ್ದು ಮಾಡಿದ ಕುರಿತು ನಾಡಿನ ವಿಚಾರವಾದಿ, ಚಿಂತಕ ಹಾಗೂ ಬರಹಗಾರರಾದ ಪ್ರೊಫೆಸರ್ ಕೆಎಸ್ ಭಗವಾನ್ ಅವರು ಮೋದಿಯ ಈ ನಡೆ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದ್ದರು.‌ ಈ ಕುರಿತು ಭಗವಾನರು ಬರೆದಿದ್ದಾರೆ ಎನ್ನುವ ‘ಜೈ ಮೋದಿ’ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿತ್ತು. ಅಲ್ದೆ ದೊಡ್ಡ ಮಟ್ಟದಲ್ಲೇ ಚರ್ಚೆಗೂ ಗ್ರಾಸವಾಗಿತ್ತು.

ಹಿಂದೂ ರಾಷ್ಟ್ರದ ಪರಿಕಲ್ಪನೆಯ ಹಿಂದುತ್ವದ ಅಜೆಂಡಾದೊಂದಿಗೆ ದೇಶವನ್ನು ಕೇಸರೀಕರಣಗೊಳಿಸಲು ಮುಂದಾಗಿರುವ ಬಿಜೆಪಿ ಹಾಗೂ ಮೋದಿ ಕುರಿತು ಇದ್ದಕಿದ್ದ ಹಾಗೆ ವಿಚಾರವಾದಿ ಭಗವಾನ್ ಅವರು ಶ್ಲಾಘಿಸಿರೋದು ಹಲವು ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದೆ. ತೀಕ್ಷ್ಣವಾಗಿ ಬಲಪಂಥೀಯ ಆಲೋಚನೆಗಳನ್ನ ವಿರೋಧಿಸುತ್ತಲೇ ಬರುತ್ತಿರುವ ಭಗವಾನ್ ಅವರು ದಿಢೀರನೇ ಈ ರೀತಿಯೊಂದು ನಿರ್ಧಾರಕ್ಕೆ ಬಂದಿರೋದು ಈಗ ನೆಟ್ಟಿಗರ ನಡುವೆ ಸೈದ್ಧಾಂತಿಕ ಜಗಳಕ್ಕೆ ಮುನ್ನುಡಿ ಬರೆದಿದೆ. ವಾಸ್ತವದಲ್ಲಿ 370 ಹಾಗೂ 35A ಆರ್ಟಿಕಲ್ ಅನ್ನು ರದ್ದು ಮಾಡಿದ ಮೋದಿ ಸರ್ಕಾರದ ಕುರಿತು ಭಗವಾನ್ ‘ಜೈ ಮೋದಿ’ ಎಂದು ಹೋಗಳಿರೋದ್ರೆ ಹಿಂದಿರುವ ಹುರುಳೇನು..? ನಿಜಕ್ಕೂ ಅದು ಅವರದ್ದೇ ಬರಹವೇ..? ಎಡಪಂಥೀಯರಲ್ಲಿ‌ ಕೆಲವರು ಹೇಳುವ ಹಾಗೆ ಭಗವಾನ್ ಅವರು ‘ಯೂಟರ್ನ್’ ಹೊಡೆದರೆ..? ಆಗಿದ್ದೇ ಆದಲ್ಲಿ ಏನು ಭಗವಾನ್ ಈ ಬಗ್ಗೆ ಕೊಡುವ ಸ್ಪಷ್ಟನೆ..? ಈ ಕುರಿತು ‘ಈ ಮೀಡಿಯಾ ಲೈನ್’ ಖುದ್ದಾಗಿ ಭಗವಾನ್ ರನ್ನ ಭೇಟಿಯಾಗಿ ಸಂದರ್ಶನ ನಡೆಸಿದೆ. ಈ ವೇಳೆ ಅವರು ಹೇಳಿದ್ದರ ಸಂಪೂರ್ಣ ಸಾರಾಂಶ ಇಲ್ಲಿದೆ ಓದಿ.

Contact Your\'s Advertisement; 9902492681

ಜಮ್ಮು‌ ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ್ದು ಒಳ್ಳೆಯದ್ದೇ ಆಯ್ತು ಅಂತ ಹೇಳಿದ್ದೀರಿ. ಅದು ಹೇಗೆ..?

72 ವರ್ಷದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಯುತ ವಾತಾವರಣ ನೆಲೆಸಿಲ್ಲ. ಕಣಿವೆ ರಾಜ್ಯದಲ್ಲಿ ಜೀವಹಾನಿ, ಧನವ್ಯಯ ಸಾಕಷ್ಟು ಪ್ರಮಾಣದಲ್ಲಿ ಆಗಿದೆ. ನೆರೆ ರಾಷ್ಟ್ರದಿಂದಲೂ ಕೂಡ ಹಲವು ಜನರು ಅಲ್ಲಿಗೆ ಬಂದು‌ ನೆಲೆಸುತ್ತಿದ್ದಾರೆ.‌ ಪರಿಣಾಮ ಅಲ್ಲಿನ ಶಾಂತಿ ಹದಗೆಡಲು ಕಾರಣವಾಗಿದೆ. ಕಣಿವೆ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ಕೊಟ್ಟಿರೋದು ಈ ದೃಷ್ಟಿಯಲ್ಲಿ ದುರ್ಬಳಕೆ ಆಗುತ್ತಿತ್ತು. ಶಾಂತಿ ಮತ್ತು ಸುವ್ಯಸ್ಥೆ ಕಾಪಾಡಲು ಕೇಂದ್ರ ಸರ್ಕಾರ ಅಲ್ಲಿನ ಸರ್ಕಾರದ ಜೊತೆ ಒಂದು ರೀತಿಯ ಕಾಂಪ್ರಮೈಸ್ ಗೆ ಬರೋ ಅಗತ್ಯವಿತ್ತು. ಹೀಗಾಗಿ ಉಗ್ರ ಚಟುವಟಿಕೆಗಳಿಗೆ ಕಡಿವಾಣ ಹಾಕೋದು ಅಷ್ಟು ಸುಲಭದ ಮಾತಾಗಿರಲಿಲ್ಲ. ಆದ್ರೀಗ ಆರ್ಟಿಕಲ್ 370 ಹಾಗೂ 35A ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಕೊಟ್ಟಿರುವ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿರೋದ್ರಿಂದ ಕೇಂದ್ರ ಹಾಗೂ ಮಿಲಿಟರಿಗೆ ಹೆಚ್ಚಿನ ಅಧಿಕಾರ ಸಿಗಲಿದೆ. ಇದು ದೇಶದ ಮುಕುಟ ರಾಜ್ಯದಲ್ಲಿ ಶಾಂತಿ ಕಾಪಾಡಲು ಸಹಕಾರಿಯಾಗಿದೆ.

ಪ್ರಖರವಾಗಿ ಬಿಜೆಪಿ ಹಾಗೂ ಬಲಪಂಥೀಯ ವಾದವನ್ನ ಟೀಕಿಸುವ ನೀವು ಇದ್ದಕ್ಕಿದ್ದ ಹಾಗೆ ಮೋದಿಗೆ ಜೈ ಅಂದಿದ್ದೀರಾ. ಏನು ಇದರ ಒಳ‌ ಮರ್ಮ..?

ಯಾವ ಪಕ್ಷವೇ ಆಗಿರಲಿ. ಯಾರೇ ಆಗಿರಲಿ‌ ಒಳ್ಳೆಯದ್ದು ಮಾಡಿದರೆ ಅದನ್ನ ಶ್ಲಾಘಿಸಬೇಕು. ಈಗ ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಮೋದಿ ಅವರು ಒಳ್ಳೆಯದ್ದು ಮಾಡಿದ್ದಾರೆ. ರಾಷ್ಟ್ರದ ಏಳಿಗೆ ಹಾಗೂ ಐಕ್ಯತೆಯ ವಿಚಾರ ಬಂದಾಗ ಯಾವ ಪಕ್ಷವನ್ನೂ ನೋಡಲ್ಲ. ಯಾವ ವ್ಯಕ್ತಿಯನ್ನೂ ನೋಡಲ್ಲ. ಈ ನಿಟ್ಟಿನಲ್ಲಿ ಮೋದಿ ಸರ್ಕಾರದ ಈ ತೀರ್ಮಾನ ಪ್ರಶಂಸನೀಯ. ಇದರಲ್ಲಿ ಬೇರೆ ಒಳ ಮರ್ಮವೇನು ಇಲ್ಲ.

ಮೋದಿಯ ಕಟ್ಟಾ ಸೈದ್ಧಾಂಥಿಕ ವಿರೋಧಿ ಎನಿಸಿಕೊಂಡಿರುವ ನೀವು ಆರ್ಟಿಕಲ್ 370 ಹಾಗೂ 35A ರದ್ದು ಮಾಡಿದ ಒಂದೇ ಇಂದು ಕಾರಣಕ್ಕೆ ‘ಮೋದಿಗೆ ಜೈ’ ಅಂದಿರೋದು ಎಷ್ಟು ಸರಿ..?

ಆರ್ಟಿಕಲ್ 35A ವಿಧಿಯ ಮೂರನೇ ಕಾಲಂನಲ್ಲಿ ಈ ಬಗ್ಗೆ ಉಲ್ಲೇಖವಿದೆ. ಅಗತ್ಯ ಬಿದ್ದಲ್ಲಿ ಈ ವಿಶೇಷ ಸ್ಥಾನಮಾವನ್ನ ರದ್ದುಗೊಳಿಸಬಹುದು ಅಂತ ಸ್ಪಷ್ಟವಾಗಿ ಮೂರನೇ ಕಾಲಂನಲ್ಲಿ ಹೇಳಲಾಗಿದೆ. ಈಗ ಅದರ ಅಗತ್ಯ ಇದೆ ಅನ್ನೋದಾಗಿದೆ ನನ್ನ ಅಭಿಪ್ರಾಯ. ಇದೊಂದು ಅಸಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿ ನಡೆ ಎನ್ನಲಾಗದು. ಯಾಕಂದ್ರೆ ಈ ವಿಶೇಷ ಸ್ಥಾನಮಾನ ಕೊಟ್ಟ ಸಂವಿಧಾನವೇ ಅದನ್ನ ರದ್ದು ಪಡಿಸೋ ಬಗ್ಗೆಯೂ ಸ್ಪಷ್ಟವಾಗಿ ಹೇಳಿದೆ ಆ ಕೆಲಸವನ್ನು ಈಗ ಮೋದಿ ಮಾಡಿದ್ದಾರೆ. ಆ ಬಗ್ಗೆ ನನ್ನ ಮೆಚ್ಚುಗೆ ಇದೆ.

ಹಾಗಾದ್ರೆ ‘ಜೈ ಮೋದಿ’ ಅನ್ನುವ ಮೂಲಕ ನೀವು ಮೋದಿಯನ್ನ ಹಾಗೂ ಅವರ ಎಲ್ಲಾ ನಿಲುವುಗಳನ್ನ ಒಪ್ಪಿಕೊಂಡಿರಲ್ಲವೇ..?

ಖಂಡಿತ ಇಲ್ಲ. ‌ಮೋದಿಯನ್ನ ನಾನು‌ ಒಪ್ಪಿಕೊಂಡಿಲ್ಲ. ಆದರೆ ಜಮ್ಮು ಮತ್ತು ಕಾಶ್ಮೀರದ ವಿಚಾರವಾಗಿ ಮೋದಿ ತೆಗೆದುಕೊಂಡ ನಿರ್ಧಾರವನ್ನಷ್ಟೇ ನಾನು ಒಪ್ಪಿಕೊಂಡಿರೋದು. ಅದು ಈ ಕಾಲದ ಬೇಡಿಕೆಯೂ ಆಗಿತ್ತು. ಅದಕ್ಕೆ ನಾನು ಜೈ ಮೋದಿ ಎಂದೆಯಷ್ಟೇ. ಈ ಮೂಲಕ ನಾನು‌ ಮೋದಿಯ ಎಲ್ಲಾ ನಿಲುವುಗಳನ್ನ ಒಪ್ಪಿಕೊಂಡಿಲ್ಲ. ಹಾಗೆಂದು ಭಾವಿಸಬೇಡಿ.

‘ಜೈ ಮೋದಿ’ ಎಂದ ಭಗವಾನ್ ಅವರು ‘ಯೂಟರ್ನ್’ ಹೊಡೀತಿದ್ದಾರೆ, ‘ಸೇಫ್ ಗೇಮ್’ ಆಡ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತದೆ. ಈ ಬಗ್ಗೆ ಏನ್ ಹೇಳ್ತೀರಾ..?

ನಾನೇನು ಸೇಫ್ ಗೇಮ್ ಆಡ್ತಿಲ್ಲ. ನಾನು ಯೂಟರ್ನ್ ಕೂಡ ಹೊಡೆದಿಲ್ಲ. ನನ್ನ ನಿಲುವು ಸ್ಪಷ್ಟ. ಜನತೆಗೆ ಯಾವುದು ಅತ್ಯುತ್ತಮವಾದದ್ದು, ದೇಶಕ್ಕೆ ಹಿತವಾದದ್ದು. ಅದನ್ನಷ್ಟೇ ನಾನು ಗಮನದಲ್ಲಿಟ್ಟುಕೊಂಡಿದ್ದೇನೆ. ನಾನು ಯಾವುದೇ ಪಂಥಕ್ಕೆ ಅಂಟಿಕೊಳ್ಳದೇನೆ ದೇಶಕ್ಕೆ ಯಾವುದು ಹಿತವೋ ಅದಕ್ಕಷ್ಟೇ ನನ್ನ ಬೆಂಬಲ.

ನಿಮಗೆ ಜೀವ ಬೆದರಿಕೆ ಇರೋದರಿಂದಲೇ ಈ ರೀತಿ ಹೇಳಿದ್ದೀರಿ. ಬಲಪಂಥೀಯರ ಮನವೊಲಿಸಲು ಹೊರಟ್ಟೀದ್ದೀರಿ ನೀವು..?

ಇಲ್ಲ.. ಇಲ್ಲ.. ಖಂಡಿತ ಇಲ್ಲ. ನನಗೆ ಜೀವ ಬೆದರಿಕೆ ಇರೋದು ನಿಜ. ಆದರೆ ನಾನು ಯಾವುದಕ್ಕೂ ಭಯ ಪಟ್ಟಿಲ್ಲ. ಯೂಟರ್ನ್ ಕೂಡ ಹೊಡೆಯಲ್ಲ. ನನ್ನದ್ದು ಏನಿದ್ರು ‘ಸ್ಟ್ರೈಟ್ ಟರ್ನ್’ ಮತ್ತು ‘ಸ್ಟ್ರೈಟ್ ಹಿಟ್’. ಮುಲಾಜೇ ಇಲ್ಲ.

ಕಳೆದ ಐದು ವರ್ಷದ ಮೋದಿ ಆಡಳಿತದ ಬಗ್ಗೆ ನಿಮ್ಮ ಅಭಿಪ್ರಾಯವೇನು..?

ಕಳೆದ ಅವಧಿಯಲ್ಲಿ ಕೇವಲ ಆಶ್ವಾಸನೆ ಕೊಟ್ಟಿದ್ದರೇ ಹೊರತು ಯಾವುದನ್ನೂ ಈಡೇರಿಸಿಲ್ಲ. ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಇದ್ದ ಉದ್ಯೋಗಗಳನ್ನೂ ಕಸಿದುಕೊಂಡಿದ್ದಾರೆ. ರೈತ ವಿರೋಧಿ ನಿರ್ಧಾರಗಳನ್ನ ತೆಗೆದುಕೊಂಡಿದ್ದಾರೆ. ದೇಶದಲ್ಲಿ ವ್ಯವಹಾರಿಕವಾಗಿ ಆಡಳಿತ ಇತ್ತೇ ಹೊರತು, ಬೇರೆ ಯಾವ ಲಾಭವೂ ದೇಶಕ್ಕೆ ಆಗಿಲ್ಲ. ಇನ್ನು ಮೋದಿಯವರು ಇತರೆ ರಾಷ್ಟ್ರಗಳೊಂದಿಗೆ ಉತ್ತಮ ನಂಟು ಬೆಳೆಸಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ಭಾರತಕ್ಕೆ ಹೊಸ ಹೊಸ ಅವಕಾಶಗಳನ್ನ ಕಲ್ಪಿಸಲಿದೆ. ಆದರೆ ಆಂತರಿಕ (ದೇಶದಲ್ಲಿ) ಪ್ರಗತಿಯ ವಿಚಾರದಲ್ಲಿ ಅವರು ಸೋತಿದ್ದಾರೆ.

ನಿಜಕ್ಕೂ ನೀವೇ ‘ಜೈ ಮೋದಿ’ ಎಂದು ಬರೆದ್ರಾ..? ಅಥವಾ ಬೇರೆ ಅವರ ಕೈಯಲ್ಲಿ ಬರೆಸಿದ್ರಾ..?

ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪತ್ರ ನನ್ನದೇ. ನಾನೇ ಬರೆದಿರುವ ಪತ್ರ ಅದು. ಮೋದಿಗೆ ಜೈ ಎಂದು ಬರೆದಿದ್ದು ನಾನೇ. ಪತ್ರದ ಕೆಳಗೆ ನನ್ನ ಸಹಿಯೂ ಇದೆ.

ಓವರ್ ಆಲ್ ಮೋದಿಗೆ out of 10ರಲ್ಲಿ ಎಷ್ಟು ಅಂಕ ನೀಡುತ್ತೀರಿ..?

4 ಕೊಡಬಹುದಷ್ಟೇ. ಯಾಕಂದ್ರೆ ಹಿಂದುತ್ವವನ್ನೇ ಅಜೆಂಡವಾಗಿಸಿಕೊಂಡು ಕೇಸರೀಕರಣ ಮಾಡಲು ಹೊರಟ ಬಿಜೆಪಿ ಮತ್ತು ಸಂಘಪರಿವಾರದಿಂದ ದೇಶದಲ್ಲಿ ಭಿನ್ನಹಗಳು ಉಂಟಾಗಿವೆ. ಜತೆಗೆ ದೇಶದ ಆರ್ಥಿಕ ಬಿಕ್ಕಟ್ಟೂ ಏರ್ಪಟ್ಟಿದೆ. ಆದರೂ ಕಳೆದ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನ ಮೋದಿ ಗೆದ್ದಿದ್ದಾರೆ. ಆ ನಿಟ್ಟಿನಲ್ಲಿ 4 ಅಂಕ ಕೊಡಬಹುದಷ್ಟೇ.

ಹೀಗೆ ನಾಡಿನ ವಿಚಾರವಾದಿ ಕೆಎಸ್ ಭಗವಾನ್ “ನಾನು ಎಲ್ಲವನ್ನೂ ವಿರೋಧಿಸುವ ವಿರೋಧ ಪಕ್ಷವಲ್ಲ. ಸರಿಯಾಗಿ ಇರುವ ಕೆಲಸವನ್ನು ಮಾಡಿದಾಗ ಜೈಕಾರ ಹಾಕುತ್ತೇನೆ. ತಪ್ಪು ಮಾಡಿದಾಗ ಕಟುವಾಗಿಯೇ ವಿರೋಧಿಸುತ್ತೇನೆ. ಅದು ಯಾವುದೇ ಪಂಥವಾಗಿದ್ದರೂ ಸರಿ. ನಾನು ಹಿಂದುತ್ವವನ್ನು ವಿರೋಧಿಸುವುದನ್ನೂ ಕೂಡ ಖಂಡಿತ ನಿಲ್ಲಿಸಲ್ಲ.” ಎನ್ನುತ್ತಲೇ ತಾನು ಮೋದಿಗೆ ಜೈಕಾರ ಹಾಕಿರೋದ್ರ ಬಗ್ಗೆ ಸಮರ್ಥಿಸಿಕೊಂಡರು.

ನಿರೂಪಣೆ : ಹರ್ಷಕ್ ಪಡ್ಡಾಯಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here