ಕಲಬುರಗಿ: ನಮ್ಮ ದೇಶಕ್ಕೆ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯೊಂದೇ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ನ ಕಲಬುರಗಿ ಜಿಲ್ಲಾ ಕಾರ್ಯದರ್ಶಿಗಳಾದ ಕಾಮ್ರೇಡ್ ಹೆಚ್. ವ್ಹಿ. ದಿವಾಕರ್ ರವರು ನುಡಿದರು.
ಅವರು ಇಂದು ಪಕ್ಷದ ಜಿಲ್ಲಾ ಸಮಿತಿಯಿಂದ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಮಿಕ ವರ್ಗದ ಮಹಾನ್ ನಾಯಕ ಕಾಮ್ರೇಡ್ ಲೆನಿನ್ ರವರ 99 ನೇ ಸ್ಮರಣ ದಿನದ ಸಂದರ್ಭದಲ್ಲಿ ಧ್ವಜಾರೋಹಣ ಮಾಡಿ ನಂತರ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡುತ್ತಾ ಅವರು – ಪ್ರಪಂಚದ ಅತ್ಯಂತ ರೋಗಿಷ್ಟ ರಾಷ್ಟ್ರವಾದ ರಷ್ಯಾದಲ್ಲಿ ತ್ಸಾರ್ ನ ಕ್ರೂರ ಆಳ್ವಿಕೆಯು ನಡೆಯುತ್ತಿತ್ತು. ದೇಶದಲ್ಲಿ ಜಮೀನ್ದಾರರ ಶೋಷಣೆ ಅಟ್ಟಹಾಸದಿಂದ ಮೆರೆದಿತ್ತು. ಅಂತಹ ಸಂದರ್ಭದಲ್ಲಿ ಕಾರ್ಮಿಕ ವರ್ಗಕ್ಕೆ ವಿಮೋಚನೆಯ ಚಿಂತನೆಯನ್ನು ಕೊಟ್ಟ ಮಹಾನ್ ತತ್ವಜ್ಞಾನಿಗಳಾದ ಕಾರ್ಲ್ ಮಾಕ್ರ್ಸ್ ಮತ್ತು ಫೆಡರಿಕ್ ಎಂಗೆಲ್ಸ್ ರವರ ಅಮೂಲ್ಯ ಬೋಧನೆಯನ್ನು ಅರ್ಥ ಮಾಡಿಕೊಂಡು, ಮಾಕ್ರ್ಸ್ವಾದ ಮಾತ್ರವೇ ವಿಶ್ವದ ಶೋಷಿತರ ವಿಮುಕ್ತಿಯನ್ನು ತೋರಿಸಿ ಕೊಡುವ ತತ್ವಶಾಸ್ತ್ರ ಎಂದು ಮನನ ಮಾಡಿಕೊಂಡು ನಂತರ ಆ ತತ್ವಶಾಸ್ತ್ರವನ್ನು ಗುಣಾತ್ಮಕವಾಗಿ ಅಭಿವೃದ್ಧಿ ಪಡಿಸಿ ಒಂದು ಜೈವಿಕ ಆಕಾರವನ್ನು ನೀಡಿದರು. ನಂತರ ವಿಶ್ವದಲ್ಲಿ ಎಂದೂ ಕೇಳಿರದಂತಹ, ಎಂದೂ ಕಂಡಿರದಂತಹ ಕಾರ್ಮಿಕರ ಶೋಷಣಾ ಮುಕ್ತ ಸಮಾಜವನ್ನು ಕಟ್ಟಿದರು. ಶತಶತಮಾನಗಳಿಂದಲೂ ಶೋಷಣೆಯ ಸಂಕೋಲೆಯಲ್ಲಿ ಇರುವ ಕಾರ್ಮಿಕ ವರ್ಗವು ಬಂಧಮುಕ್ತವಾಯಿತು. ಈ ಅಭೂತಪೂರ್ವ ಕ್ರಾಂತಿಯು 1917 ರಲ್ಲಿ ನೆರವೇರಿ ನಂತರ ಇಡೀ ವಿಶ್ವಕ್ಕೆ ಬಲಿಷ್ಠ ರಾಷ್ಟ್ರವಾಗಿ ಬೆಳೆಯಿತು.
ನಮ್ಮ ದೇಶದ ಅಪ್ರತಿಮ ಕ್ರಾಂತಿಕಾರಿಗಳಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಹಾಗೂ ಭಗತ್ ಸಿಂಗ್ ರಂತಹ ಕ್ರಾಂತಿಕಾರಿಗಳೂ ಈ ರಷ್ಯಾದ ಸಮಾಜವಾದಿ ಕ್ರಾಂತಿಯಿಂದ ಪ್ರೇರಿತರಾಗಿ ಭಾರತವೂ ಸಮಾಜವಾದಿ ಕ್ರಾಂತಿಯ್ನು ನೆರವೇರಿಸಬೇಕೆಂದು ಹಂಬಲಿಸಿ ತಮ್ಮ ಹೋರಾಟಗಳನ್ನು ಹರಿತಗೊಳಿಸಿದರು. ದುರದೃಷ್ಟವಶಾತ್ ಅವರ ಕನಸಿನ ಭಾರತವು ಉದಯಿಸಲಿಲ್ಲ. ಈ ಹಿನ್ನೆಲೆಯಲ್ಲಿ ಎಸ್ಯುಸಿಐ (ಸಿ) ಪಕ್ಷದ ಸಂಸ್ಥಾಪಕರು ಹಾಗೂ ಈ ಯುಗದ ಇನ್ನೋರ್ವ ಮಹಾನ್ ಮಾಕ್ರ್ಸ್ವಾದಿ ಚಿಂತಕರಾದ ಕಾಮ್ರೇಡ್ ಶಿವದಾಸ ಘೋಷ್ ರವರು ನಮ್ಮ ದೇಶದ ನವೋದಯದ ಹರಿಕಾರರು ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳ ಕನಸನ್ನು ನನಸು ಮಾಡಲು ಮಾಕ್ರ್ಸ್ವಾದ ಲೆನಿನ್ವಾದವನ್ನು ಅನುಸರಿಸಬೇಕು ಎಂದು ತೋರಿಸಿಕೊಟ್ಟರು.
ಈ ತತ್ವದಿಂದ ರಚಿಸಲ್ಪಟ್ಟ ಎಸ್ಯುಸಿಐ (ಸಿ) ಪಕ್ಷವನ್ನು ಬಲಪಡಿಸಿ ಈ ನೆಲದಲ್ಲಿಯೂ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯನ್ನು ನೆರೆವೇರಿಸಬೇಕು. ಆಗ ಮಾತ್ರವೇ ನಮ್ಮ ದೇಶದಲ್ಲಿ 99% ಜನರನ್ನು ಕ್ರೂರವಾಗಿ ಶೋಷಣೆ ಮಾಡುತ್ತಿರುವ ಬಂಡವಾಳಶಾಹಿಗಳು ಹಾಗೂ ಅವರ ರಕ್ಷಣೆಗಾಗಿ ಏಜಂಟರಂತೆ ಇರುವ ಎಲ್ಲಾ ರಾಜಕೀಯ ಪಕ್ಷಗಳನ್ನು ಸೋಲಿಸಿ ನವ ಸಮಾಜವನ್ನು ಕಟ್ಟಲು ಸಾಧ್ಯ. ಈ ನಿಟ್ಟಿನಲ್ಲಿ ಸಮಾಜವಾದಿ ಕ್ರಾಂತಿಯನ್ನು ನೆರವೇರಿಸಲು ನಮ್ಮ ನೆಲದ ಎಲ್ಲಾ ಕ್ಷೇತ್ರದ ಜನತೆ ಒಂದಾಗಬೇಕೆಂದು ಕರೆ ನೀಡಿದರು.
ಈ ಸಭೆಗೆ ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾದ ಕಾಮ್ರೇಡ್ ವಿ. ನಾಗಮ್ಮಾಳ್ ರವರು ಸಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಸದಸ್ಯರಾದ ಎಸ್. ಎಂ. ಶರ್ಮಾ, ಮಹೇಶ್ ಎಸ್. ಬಿ. ಸದಸ್ಯರಾದ ಗೌರಮ್ಮ ಸಿ.ಕೆ., ರಾಧಾ ಜಿ. ತುಳಜಾರಾಮ್, ಶಿಲ್ಪ ಬಿ.ಕೆ., ವೆಂಕಟೇಶ ದೇವದುರ್ಗ, ಗೋವಿಂದ್, ನಾಗರಾಜ ಹಾಗೂ ಇತರರು ಉಪಸ್ಥತಿತರಿದ್ದರು.