ಕಲಬುರಗಿ: ಕವಿರಾಜ ಮಾರ್ಗದ ಮೂಲಕ ಈ ಭಾಗದ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಚರಿತ್ರೆ ಕಟ್ಟಿಕೊಟ್ಟ ಕವಿರಾಜಮಾರ್ಗಕಾರ ಕನ್ನಡ ಸಾಹಿತ್ಯದ ಬೀಜಾರೋಪಣ ಆರಂಭ ಮಾಡಿದರು ಎಂದು ಹಿರಿಯ ಸಂಶೋಧಕ ಡಾ. ಶಾಂತಿನಾಥ ದಿಬ್ಬದ ತಿಳಿಸಿದರು.
ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಗುಲ್ಬರ್ಗ ವಿಶ್ವವಿದ್ಯಾಲಯದ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಹಿತ್ಯ ದರ್ಶನ ಮೊದಲ ಗೋಷ್ಠಿಯಲ್ಲಿ ಆಶಯ ಭಾಷಣ ಮಾಡಿದ ಅವರು, ಈ ಭಾಗದ ಜನಪದ, ಜೈನ, ವಚನ, ದಾಸ ಸಾಹಿತ್ಯ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿವೆ ಎಂದು ತಿಳಿಸಿದರು.
ಇಂತಹ ಶ್ರೀಮಂತವಾದ, ಗಟ್ಟಿಯಾದ ಈ ಭಾಗದ ಸಾಹಿತ್ಯ ಇನ್ನೂ ಹತ್ತು ಹಲವು ಸಂಗತಿಗಳನ್ನು ಒಳಗೊಂಡಿದ್ದು, ನಮ್ಮ ವಿದ್ವಾಂಸರು ಮತ್ತಷ್ಟು ಕ್ಷೇತ್ರ ಕಾರ್ಯ ಮಾಡುವ ಮೂಲಕ ಹೊರ ಹಾಕಬೇಕು ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಪ್ರಾಚೀನ ಕಾವ್ಯಗಳು, ಶರಣ ಸಂಸ್ಕೃತಿ ಹಾಗೂ ದಾಸ ಸಾಹಿತ್ಯ ಕನ್ನಡದ ಕೀರ್ತಿಯನ್ನು ಹೆಚ್ಚಿಸಿವೆ ಎಂದರು.
ಪ್ರಾಚೀನ ಕಾವ್ಯ ದರ್ಶನ ಕುರಿತು ಡಾ. ಕಲ್ಯಾಣರಾವ ಜಿ.ಪಾಟೀಲ, ಶರಣ ಸಂಸ್ಕೃತಿ ದರ್ಶನ ಕುರಿತು ಡಾ. ಕೆ.ರವೀಂದ್ರನಾಥ, ಕೀರ್ತನ ಸಂಸ್ಕೃತಿ ಕುರಿತು ಡಾ. ಶೀಲಾದಾಸ ಪ್ರಬಂಧ ಮಂಡಿಸಿದರು.
ಡಾ. ಪ್ರಕಾಶ ಹಣಮಂತ, ಡಾ.ಶುಲಾಬಾಯಿ ಹಿತವಂತ ನಿರೂಪಿಸಿದರು. ಶರಣರಾಜ ಛಪ್ಪರಬಂದಿ ವಂದಿಸಿದರು.