ಕಲಬುರಗಿ: ಸಿಪಿಐ (ಎಂ) ಪಕ್ಷದ ರಾಜಕೀಯ ಸಮಾವೇಶ ಬುಧವಾರ ನಗರದ ಕೋಸಗಿ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಕಲಬುರಗಿ ಗ್ರಾಮೀಣ ಮತಕ್ಷೇತ್ರದಿಂದ ಪಕ್ಷದ ಹುರಿಯಾಳು ಆಗಿ ನಾಮ ಪತ್ರ ಸಲ್ಲಿಸಿದ ಕಾಮ್ರೇಡ್ ಪಾಂಡುರಂಗ ಮಾವಿನಕರ್ ಪರವಾಗಿ ಮತ ಯಾಚಿಸುತ್ತ ಸಿಪಿಐ ಎಂ ಪಕ್ಷದ ಪಾಲಿಟ್ ಬ್ಯೂರೋ ಸದಸ್ಯರು ಮತ್ತು ಅಖಿಲ ಭಾರತ ಕಿಸಾನ್ ಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಕಾಮ್ರೇಡ್ ಅಶೋಕ ಧಾವಳೆಯವರು ಮಾತನಾಡುತ್ತ ಬಿಜೆಪಿ ಸರಕಾರದ ವೈಫಲ್ಯ ವನ್ನು ಬಿಚ್ಚಿಟ್ಟರು.
ಅವರು ಮಾತನಾಡುತ್ತ ಬಿಜೆಪಿ ಆಡಳಿತದಲ್ಲಿ ಎಲ್ಲ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿದೆ. 2014 ರಲ್ಲಿ ಅಡಿಗೆ ಗ್ಯಾಸ್ ಸಿಲಿಂಡರ್ ಒಂದಕ್ಕೆ 450 ರೂಪಾಯಿ ಇದ್ದದ್ದು ಇಂದು 1150 ರೂಪಾಯಿ ಆಗಿದೆ. ಇದರಂತೆ ಎಲ್ಲ ಬೆಲೆಗಳು ಎಷ್ಟು ಏರಿದೆ ಎಂಬುದು ವಿವರಿಸಿ ಹೇಳಬೇಕಿಲ್ಲ ತಾನೇ ಮೋದಿ ಮಹಾಶಯರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಹೇಳಿದ್ದಾನೆ. ಅದರ ಲೆಕ್ಕದಲ್ಲಿ ಹದಿನೆಂಟು ಕೋಟಿ ಉದ್ಯೋಗ ದೊರೆಯಬೇಕಿತ್ತು. ಆದರೆ ವರ್ಷಕ್ಕೆ ಲಕ್ಷಾಂತರ ಕೆಲಸಗಳು ಕಳೆದು ಹೋಗಿವೆ. ಲಕ್ಷಾಂತರ ಜನರು ಇದ್ದ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಬಿಜೆಪಿ ನಾಯಕರು ಇನ್ನಿಲ್ಲದ ಭ್ರಷ್ಟಾಚಾರದಲ್ಲಿ ತೊಡಗಿ ಕರ್ನಾಟಕ ಸರಕಾರ 40% ಲಂಚ ತಿನ್ನುತ್ತಿರುವುದು ಜಗಜ್ಜಾಹೀರು ಆಗಿದೆ. ಮೇಲಾಗಿ ನಾಡಿನಲ್ಲಿ ಕೋಮುದ್ವೇಷದ ಬೆಂಕಿ ಹಚ್ಚುವಲ್ಲಿ ನಿರತರಾಗಿದ್ದಾರೆ. ಇಂಥ ಭ್ರಷ್ಠ ಸರಕಾರ ಹಿಂದೆಂದೂ ಇರಲಿಲ್ಲ. ನೀವು ಕರ್ನಾಟಕದವರ ಕಡೆ ಇಡೀ ದೇಶ ನೋಡುತ್ತಿದೆ. ದಯವಿಟ್ಟು ಈ ಕೋಮುವಾದಿಗಳನ್ನು ಕಿತ್ತು ಎಸೆಯಿರಿ. ದೇಶ ನಿಮಗೆ ಸದಾ ಋಣಿಯಾಗಿರುತ್ತದೆ. ದೇಶದ ಒಳಿತಿಗಾಗಿ ಕರ್ನಾಟಕದವರು ಬಿಜೆಪಿಯನ್ನು ಸೋಲಿಸಬೇಕು ಎಂದರು.
ಪ್ರಾರಂಭದಲ್ಲಿ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ನೀಲಾ ಅವರು ಪ್ರಾಸ್ತಾವಿಕ ಮಾತುಗಳನ್ನು ಆಡುತ್ತ ನಮ್ಮದು ಸೌಹಾರ್ದ ನಾಡು. ದುಡಿಯುವ ಜನತೆಯ ನಾಡು . ಇಂಥ ನಾಡಿನ ಸಾಮರಸ್ಯವನ್ನು ಕೆಡಿಸಲು, ಬಡತನವನ್ನು ಇನ್ನಷ್ಟು ಹೆಚ್ಚು ಮಾಡಲು ಬಿಜೆಪಿ ಸತತ ಪ್ರಯತ್ನ ಪಡುತ್ತಿದೆ. ಮನುವಾದಿ ತತ್ವಗಳನ್ನೇ ಹಾಸು ಹೊದ್ದುಕೊಂಡಿರುವ ಸಂಘ ಪರಿವಾರ ಜಾತಿ ವ್ಯವಸ್ಥೆ ಯನ್ನು ಮರು ಸ್ಥಾಪಿಸಲು ಹೊರಟಿದೆ. ಆದ್ದರಿಂದ ಬಾಬಾ ಸಾಹೇಬರ ಸಂವಿಧಾನ ದಲ್ಲಿ ನಂಬಿಕೆ ಹೊಂದಿರುವ ಪ್ರತಿಯೊಬ್ಬರು ಬಿಜೆಪಿಯನ್ನು ಸೋಲಿಸಿ ಕಮ್ಯುನಿಸ್ಟ್ ಪಕ್ಷದ ಪ್ರಾಮಾಣಿಕ ಅಭ್ಯರ್ಥಿ ಪಾಂಡುರಂಗ ಮಾವಿನಕರ್ ಅವರನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.
ಸಿಪಿಐ ಎಂ ಪಕ್ಷದ ಯಾದಗಿರಿ ಜಿಲ್ಲಾ ಕಾರ್ಯದರ್ಶಿ ಚೆನ್ನಪ್ಪ ಆನೆಗುಂದಿಯವರು ಮಾತನಾಡುತ್ತ ಈ ಬಿಜೆಪಿ, ಕಾಂಗ್ರೆಸ್ ಇತ್ಯಾದಿ ಪಕ್ಷಗಳು ಕಾರ್ಮಿಕ ವಿರೋಧಿ , ರೈತ ವಿರೋಧಿಯಾಗಿವೆ. ಸ್ವದೇಶಿ ಮಂತ್ರ ಜಪಿಸುತ್ತ ಬಿಜೆಪಿ ಇಡೀ ದೇಶವನ್ನು ಮಾರಿಬಿಟ್ಟಿದೆ. ನಮ್ಮ ದೇಶವನ್ನು ನಾವು ಮರಳಿ ಪಡೆಯಬೇಕಾದರೆ ಬಿಜೆಪಿಯನ್ನು ಕಸದ ಬುಟ್ಟಿಗೆ ಎಸೆಯಬೇಕಾಗಿದೆ. ಎಂದು ಕರೆ ಕೊಟ್ಟರು. ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಪಕ್ಷದ ಅಭ್ಯರ್ಥಿಯಾಗಿ ಪಾಂಡುರಂಗ ಅವರು ಮತ ಯಾಚಿಸುತ್ತ ನಾನೊಬ್ಬ ಸಾದಾಸೀದಾ ಹೋರಾಟಗಾರ. ಎಲ್ಲ ದುಡಿಯುವ ಜನತೆಯ ಪರ ಒಳಗೆ ಹೋರಾಟ ಮಾಡಲು ನನಗೆ ಒಳಗೆ ಕಳಿಸಿರಿ. ನಾನು ಗೆದ್ದರೂ ನಿಮ್ಮೊಂದಿಗೆ ಸೋತರು ನಿಮ್ಮೊಂದಿಗೆ. ನನಗೆ ಯಾವ ಅಂತಸ್ತು, ಆಸ್ತಿ, ಪದವಿಗಳ ಬಯಕೆ ಇಲ್ಲ ಎಂದರು.
ಕೊನೆಯದಾಗಿ ಸಭೆಯ ಅಧ್ಯಕ್ಷರಾದ ಕಾಮ್ರೇಡ್ ಎಂ ಬಿ ಸಜ್ಜನವರು ಮಾತನಾಡುತ್ತ ಬಿಜೆಪಿಯು ಯಾವತ್ತೂ ಜನಪರ ಕೆಲಸ ಮಾಡಿಲ್ಲ. ಶಿಕ್ಷಣ,ಆರೋಗ್ಯ, ಕೃಷಿ, ಉದ್ಯಮ ಎಲ್ಲವುಗಳನ್ನು ದಿವಾಳಿ ಮಾಡಿದೆ. ದೇಶವನ್ನು ಧರ್ಮ,ಜಾತಿ,ಭಾಷೆಗಳ ಅಡಿಯಲ್ಲಿ ಒಡೆದು ಛಿದ್ರ ಮಾಡಿದೆ. ನಮ್ಮ ಬದುಕು ಸುರಕ್ಷಿತವಾಗಿ ಉಳಿಯಬೇಕಾದರೆ ಕೋಮುವಾದಿ ಪಕ್ಷವನ್ನು ಸೋಲಿಸಲೇಬೇಕು ಎಂದರು.
ಕ್ರಾಂತಿಗೀತೆಯೊಂದಿಗೆ ಸಭೆ ಮುಕ್ತಾಯ ಮಾಡಲಾಯಿತು. ವೇದಿಕೆ ಯ ಮೇಲೆ ಪಕ್ಷದ ಮುಖಂಡರಾದ ಭೀಮಶೆಟ್ಟಿ ಯಂಪಳ್ಳಿ , ಮೇಘರಾಜ ಕಠಾರೆ, ಪ್ರಭು ಖಾನಾಪೂರೆ, ಸುಧಾಮ ಧನ್ನಿ, ಶ್ರೀಮಂತ ಬಿರಾದಾರ, ಚಂದಮ್ಮ ಗೋಳಾ, ಸಿದ್ದು ಹರವಾಳ, ಡಾ.ಸಾಯಿಬಣ್ಣ ಗುಡುಬಾ, ಬಾಬು ಹೀರಮಶೆಟ್ಟಿ, ವಿರುಪಾಕ್ಷಪ್ಪ ತಡಕಲ್, ಗುಂಡಪ್ಪ ಕಲಬುರಗಿ, ಜಗನ್ನಾಥ ಹೊಡಲ್, ದಿಲೀಪ್ ನಾಗುರೆ, ರಾಯಪ್ಪ, ಕಾಶೀನಾಥ ಬಂಡಿ ಮತ್ತು ಜನವಾದಿಯ ರಾಜ್ಯಧ್ಯಕ್ಷೆ ಮೀನಾಕ್ಷಿ ಬಾಳಿ ಇದ್ದರು. ಮೆಹಬೂಬ ಷಾ ಅವರು ವಂದನಾರ್ಪಣೆ ಮಾಡಿದರು.