ವಾಡಿ: ಮತ ಕೇಳಲು ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರ ನಾಯಕರು ನಿರಂತರವಾಗಿ ಚಿತ್ತಾಪುರಕ್ಕೆ ಬರುತ್ತಿದ್ದಾರೆ. ಚಿತ್ತಾಪುರದ ಜನರು ಪ್ರವಾಹ, ಬರ, ಕೋರೊನಾ ಕಷ್ಟ ಎದುರಿಸುತ್ತಿದ್ದಾಗ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಎಲ್ಲಿದ್ದರು? ಆಗೇಕೆ ನಾಗಾವಿ ನಾಡಿನ ಜನರ ಮೇಲೆ ಕನಿಕರ ಹುಟ್ಟಲಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹರಿಹಾಯ್ದರು.
ಕಮರವಾಡಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್, ಕೊರೊನಾ ಹೊಡೆತಕ್ಕೆ ಸಿಲುಕಿ ಮಹಾರಾಷ್ಟ್ರದಲ್ಲಿ ತೊಂದರೆ ಅನುಭವಿಸುತ್ತಿದ್ದ ತಾಲೂಕಿನ ಸಾವಿರಾರು ಜನ ವಲಸೆ ಕುಟುಂಬಗಳನ್ನು ಸುರಕ್ಷಿತವಾಗಿ ವಾಪಸ್ ಕರೆಯಿಸಿಕೊಂಡಿದ್ದು ನಾನು. ಕೋವಿಡ್ ಕೇಂದ್ರಗಳನ್ನು ಸ್ಥಾಪಿಸಿ ಆರೋಗ್ಯ ಕಾಪಾಡುವ ಮೂಲಕ ಧೈರ್ಯ ಹೇಳಿದ್ದು ನಾನು. ಸಾವಿರಾರು ಜನರಿಗೆ ಕ್ವಾರಂಟೈನ್ ಕೇಂದ್ರಗಳನ್ನು ಸ್ಥಾಪಿಸಿದ್ದು ನಾನು. ಪ್ರವಾಹ ಬಂದಾಗ ಜನರ ನೆರವಿಗೆ ನಿಂತಿದ್ದು ನಾನು. ಆದರೆ ಅಂದು ಈ ಬಿಜೆಪಿ ನಾಯಕರು ಒಬ್ಬರೂ ಇರಲಿಲ್ಲ. ಈಗ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಎನ್ನಲು ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.
ಚಿತ್ತಾಪುರದ ಶಾಸಕನಾಗುವ ಕನಸು ಕಾಣುತ್ತಿರುವ ಬಿಜೆಪಿ ಅಭ್ಯರ್ಥಿಯ ವ್ಯಕ್ತಿತ್ವವನ್ನು ಮತದಾರರು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯಗಳ ಠಾಣೆಗಳಲ್ಲೂ ಅನ್ನಭಾಗ್ಯದ ಅಕ್ಕಿ ಮತ್ತು ಕ್ಷೀರ ಭಾಗ್ಯದ ಹಾಲಿನ ಪೌಡರ್ ಕಳ್ಳ ಸಾಗಾಣಿಕೆಗೆ ಸಂಬಂದಿಸಿದಂತೆ ಮಣಿಕಂಠ ರಾಠೋಡ ವಿರುದ್ಧ 46 ಪ್ರಕರಣಗಳಿವೆ. ಇಂಥವರು ಗೆದ್ದರೆ ಚಿತ್ತಾಪುರ ಅಭಿವೃದ್ಧಿಯಾಗಲ್ಲ. ಗೂಂಡಾ ರಾಜ್ ಆಗುತ್ತದೆ. ಒಮ್ಮೆ ಈ ಕ್ಷೇತ್ರ ಇಂಥಹ ಕಳ್ಳರ ಕೈಗೆ ಹೋದರೆ ಮತ್ತೆ ಸುಧಾರಣೆ ಕಾಣುವುದು ಕಷ್ಟ. ಹೀಗಾಗಿ ಮತದಾರರು ಯೋಚಿಸಿ ಮತದಾನ ಮಾಡಬೇಕು. ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆಯಿದ್ದು, ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರ ಬರೋದು ಖಚಿತ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಸಾಹೇಬ, ಯುವ ಕಾಂಗ್ರೆಸ್ ಅಧ್ಯಕ್ಷ ಶರಣು ವಾರದ್, ಮುಖಂಡರಾದ ನಾಗರೆಡ್ಡಿಗೌಡ ಪಾಟೀಲ ಕರದಾಳ, ಭೀಮಣ್ಣ ಸಾಲಿ, ಇಸ್ಮಾಯಿಲ್ ಸಾಬ ಮುಲ್ಲಾ, ಶಿವಶರಣಪ್ಪ ಯರಗಲ್, ದ್ಯಾವಣ್ಣ ತಳವಾರ, ಭೀಮರಾಯ ಗಂಗಾನೋರ, ರಹೆಮಾನಸಾಬ ಬಾಂಬೆ, ಸಿದ್ದು ತಳವಾರ, ಪ್ರೇಮನಾಥ ದಿವಾಕರ, ಹೀರಾ ಚವ್ಹಾಣ, ಹರಿಸಿಂಗ್ ಚವ್ಹಾಣ, ಕುಮಾರ ಚವ್ಹಾಣ, ಚಂದ್ರಪ್ಪ ಕೊಟಗಾರ, ಸಿದ್ದಣ್ಣ ಪೂಜಾರಿ, ಖದೀರ ಮುಲ್ಲಾ, ಮಹೆಬೂಬ ಮುಲ್ಲಾ ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.