ಬೀದರ್: ಸುರಪೂರ ತಾಲೂಕಿನ ರುಕ್ಮಾಪುರ ಗ್ರಾಮದ ಶ್ರೀ ಕೊಟ್ಟೂರು ಬಸವೇಶ್ವರ ಶಿಕ್ಷಣ ಸಂಸ್ಥೆಯ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಹಾರಕೂಡ ಹಿರೇಮಠದ ಶ್ರೀ ಚೆನ್ನವೀರಶಿವಾಚಾರ್ಯರು ೫೦ ಸಾವಿರ ರೂ.ಗಳ ಸಹಾಯ ಮಾಡುವುದರ ಮೂಲಕ ಶುಭಾಶೀರ್ವಾದ ಮಾಡಿದರು.
ಸಂಸ್ಥೆಯ ಅಧ್ಯಕ್ಷರೂ ಆದ ನಿವೃತ್ತ ಎಸ್.ಪಿ. ಚಂದ್ರಕಾಂತ ಎನ್. ಭಂಡಾರೆ ಹಾಗೂ ಹಿರಿಯ ಪತ್ರಕರ್ತ ಸುಭಾಷ ಬಣಗಾರ್ ಅವರು ಬುಧವಾರ ಹಾರಕೂಡದಲ್ಲಿ ಶ್ರೀ ಗಳನ್ನು ಭೇಟಿ ಮಾಡಿದಾಗ, ಶ್ರೀ ಕೊಟ್ಟೂರು ಬಸವೇಶ್ವರ ಶಿಕ್ಷಣ ಸಂಸ್ಥೆಯು ಕಳೆದ ೨೫ ವರ್ಷಗಳಿಂದ ರುಕ್ಮಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ರುಕ್ಮಾಪುರ ಗ್ರಾಮಕ್ಕೂ ಹಾರಕೂಡ ಮಠಕ್ಕೂ ಅವಿನಾಭಾವ ಸಂಬಂಧ ಇದೆ. ಹಾರಕೂಡ ಮಠದ ಪರಂಪರೆಯಲ್ಲಿ ಬರುವ ಒಬ್ವ ಶ್ರೀಗಳು ರುಕ್ಮಾಪುರದ ಭಕ್ತರಾದ ಮಿಣಜಗಿ ಅವರ ಮನೆಗೆ ಭೇಟಿ ನೀಡುತ್ತಿದ್ದರು. ಪವಾಡವೆಂಬತೆ ಅವರು ಅಲ್ಲಿಯೇ ಲಿಂಗೈಕ್ಯರಾಗಿದ್ದು, ನಂತರ ಗ್ರಾಮದ ಹಿರೇಮಠದಲ್ಲಿ ಪರಂಪರೆಯಂತೆ ಅಂತ್ಯಕ್ರಿಯೆ ಮಾಡಿ ಗದ್ದುಗೆ ನಿರ್ಮಾಣ ಮಾಡಲಾಯಿತು.
ಆಗಾಗ ಆ ಗ್ರಾಮಕ್ಕೆ ಹೋಗಿ ಅಲ್ಲಿರುವ ಅವರ ಗದ್ದುಗೆ ನಮಸ್ಕರಿಸಿ ಬರುತ್ತೆವೆ. ಗ್ರಾಮದಲ್ಲಿ ನಮ್ಮ ಶ್ರೀಮಠದ ಭಕ್ತರು ಅಪಾರ ಸಂಖ್ಯೆಯಲ್ಲಿ ಇದ್ದಾರೆ. ನಮ್ಮ ೫೯ನೇ ಹುಟ್ಟು ಹಬ್ಬವನ್ನು ಅಲ್ಲಿನ ಗ್ರಾಮಸ್ಥರು ರುಕ್ಮಾಪುರ ಗ್ರಾಮದಲ್ಲಿಯೇ ಮಾಡಿದ್ದಾರೆ ಎಂದು ನೆನಪಿಸಿಕೊಂಡರು.
ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಮಠಗಳ ಕೊಡುಗೆ ಅಪಾರವಾಗಿದೆ. ಅನ್ನ ದಾಸೋಹ, ಜ್ಞಾನ ದಾಸೋಹದೊಂದಿಗೆ ಹಿಂದುಳಿದ, ಬಡವರ ಕಾಳಜಿ ಮಾಡುತ್ತಾ, ಅವರ ಶ್ರೇಯೋಭಿವೃದ್ದಿಗೆ ಮಠಗಳು, ಮಠಾಧೀಶರು ಶ್ರಮಿಸುತ್ತಿದ್ದಾರೆ ಎಂದರು.
ನೂತನ ಶಾಲಾ ಕಟ್ಟಡ ಬೇಗನೆ ಪೂರ್ಣಗೊಂಡು, ಗ್ರಾಮದ ವಿದ್ಯಾರ್ಥಿಗಳ ಹೆಚ್ಚಿನ ಅಭ್ಯಾಸಕ್ಕೆ ಅನುಕೂಲವಾಗಲಿ. ಸಂಸ್ಥೆಯು ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.