ಶಹಾಬಾದ: ಕರ್ನಾಟಕ ಸರಕಾರ ಜುಲೈ ಒಂದರಿಂದ ಎಲ್ಲ ಬಿಪಿಎಲ್, ಅಂತ್ಯೋದಯ ಕಾರ್ಡದಾರರಿಗೆ ಈಗ ನೀಡಲಾಗುತ್ತಿದ್ದ 5 ಕೆ. ಜಿ ಅಕ್ಕಿಯನ್ನು ಹೆಚ್ಚಿಸಿ ತಲಾ 10 ಕೆ.ಜಿ ಅಕ್ಕಿ ಅಥವಾ ಆಹಾರಧಾನ್ಯ ನೀಡಲು ನಿರ್ಧರಿಸಿ ಪ್ರಕಟಿಸಿದ್ದು ಸ್ವಾಗತಾರ್ಹವಾಗಿದೆ.
ಆದರೇ ಒಕ್ಕೂಟ ಸರಕಾರವು ರಾಜ್ಯಕ್ಕೆ ಹೆಚ್ಚುವರಿ ಆಹಾರಧಾನ್ಯ ನೀಡುವಲ್ಲಿ ಸಂಕುಚಿತ ರಾಜಕೀಯ ಮಾಡುತ್ತಿರುವುದು ತೀವ್ರ ಖಂಡನೀಯವಾಗಿದೆ ಎಂದು ಸಿಪಿಐ (ಎಮ) ತಾಲೂಕ ಸಮಿತಿಯ ಸದಸ್ಯ ರಾಯಪ್ಪ ಹುರಮುಂಜಿ ಮಾತನಾಡಿದರು.
ರಾಜ್ಯ ಸರಕಾರದ ಮನವಿ ಸಕಾರಾತ್ಮಕವಾಗಿ ಸ್ಪಂದಿಸಿ ಹೆಚ್ಚುವರಿ ಆಹಾರಧಾನ್ಯ ನೀಡಲು ಭಾರತ ಆಹಾರ ನಿಗಮದ ಸಧಿಕಾರಿಗಳು ಒಪ್ಪಿದ್ದರೂ ಒಕ್ಕೂಟ ಸರಕಾರ ಬಡವರ ವಿರೋಧಿಯಾಗಿ ನಿಂತಿರುವುದು ಅಕ್ಷಮ್ಯವಾಗಿದೆ ಬಿಜೆಪಿ ಮತ್ತು ಒಕ್ಕೂಟ ಸರಕಾರ ತಮ್ಮ ಸಂಕುಚಿತ ಜನ ವಿರೋದಿ ರಾಜಕಾರಣವನ್ನು ಕೈ ಬಿಟ್ಟು ಈ ಕೂಡಲೇ ಒಪ್ಪಂದದಂತೆ ಭಾರತ ಆಹಾರ ನಿಗಮದ ಮೂಲಕ ಆಹಾರ ಧಾನ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ ) ಒಕ್ಕೂಟದ ಸರಕಾರವನ್ನು ಒತ್ತಾಯಿಸಿದರು.
ಸಿಪಿಐಎಂ ಕಾರ್ಯದರ್ಶಿ ಶೇಕಮ್ಮ ಕುರಿ ಮಾತನಾಡಿ ಇಥೆನಾಲ್ ಬಳಕೆಗೆ ಅಕ್ಕಿ ಬಳಸುವುದನ್ನು ಬಿಟ್ಟು ಮನುಷ್ಯರ ಹಸಿವು ನೀಗಿಸುವುದು ಸರಕಾರಕ್ಕೆ ಆದ್ಯತೆಯಾಗಬೇಕು. ರಾಜ್ಯ ಸರಕಾರ ಈ ಯೋಜನೆಯು ಬಡವರ ಹಸಿವು ನೀಗಿಸಲು ನೆರವಾಗುವ ಯೋಜನೆಯಾಗಿದ್ದು ಇದು ಹಸಿವಿನ ಸೂಚ್ಯಂಕದಲ್ಲಿ ಅತ್ಯಂತ ತಳ ಮಟ್ಟದಲ್ಲಿರುವ ನಮ್ಮ ದೇಶವನ್ನು ಸ್ವಲ್ಪವಾದರೂ ಮೇಲೆತ್ತುವ ಯೋಜನೆ ಎಂಬುವದನ್ನು ಒಕ್ಕೂಟ ಸರಕಾರ ಅರಿಯ ಬೇಕು. ಜನರಿಗೆ ಆಹಾರಧಾನ್ಯದ ಬದಲು ನಗದು ವರ್ಗಾವಣೆ ಮಾಡುವಂತೆ ಸೂಚಿಸುವ ಬಿಜೆಪಿ ಧೋರಣೆಯು ಬಡವರ ಪರವಾಗಿರದೇ ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರವಾದ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕೂಟ ಸರಕಾರದ ಈ ಜನ ವಿರೋಧಿ ನೀತಿಯನ್ನು ಖಂಡಿಸಿ ಶಹಾಬಾದ ತಹಶೀಲ್ದಾರ್ ಕಛೇರಿ ಎದುರು ಒಕ್ಕೂಟ ಸರಕಾರದ ವಿರುದ್ಧ ತೀವ್ರ ಪ್ರತಿಭಟನಾ ಪ್ರದರ್ಶನ ನಡೆಸಿ ಮಾನ್ಯ ತಹಶೀಲ್ದಾರ್ ರ ಮೂಲಕ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ತಿಪ್ಪಣ್ಣಾ ಇಂಗಿನಕೇರಿ, ಮಲ್ಲಮ್ಮಾ ಶಂಕಾ, ಚಂದ್ರಶೇಖರ ಬಡಿಗೇರ, ಮೈಹೆಬೂಬ, ದೌಲಷಾ, ಚಾಂದಷಾ ಇತರರು ಇದ್ದರು.