ಕಲಬುರಗಿ; ಚಿತ್ತಾಪುರದ ನಾಗಾವಿ ಪ್ರದೇಶದ 4 ಸ್ಮಾರಕಗಳ ಅಭಿವೃದ್ದಿಗೆ ಬೆಂಗಳೂರು ಮೂಲದ ಯುನೈಟೆಡ್ ವೇ ಆಫ್ ಬೆಂಗಳೂರು ಎನ್ನುವ ಸಂಸ್ಥೆ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ಪ್ರವಾಸೋದ್ಯಮ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಮ್ಮುಖದಲ್ಲಿ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದರು.
ನಮ್ಮ ಸ್ಮಾರಕ ದರ್ಶನ ಮತ್ತು ಸಂಸರಕ್ಷಣೆಗಾಗಿ ಪ್ರವಾಸ ಕಾರ್ಯಕ್ರಮದಡಿಯಲ್ಲಿ ಕೈಗೊಂಡಿದ್ದ ಸಮಾರಂಭದ ಸಂದರ್ಭದಲ್ಲಿ ಈ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಯಿತು.
ಆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಚ್ ಕೆ ಪಾಟೀಲ್ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರ ಒತ್ತಾಸೆಯಿಂದಾಗಿ ಚಿತ್ತಾಪುರ ತಾಲೂಕಿನ ಸ್ಮಾರಕಗಳ ರಕ್ಷಣೆಗೆ ತಾವು ಮುಂದಾಗಿದ್ದು ಯುನೈಟೆಡ್ ವೇ ಆಫ್ ಬೆಂಗಳೂರು ಸಂಸ್ಥೆಯೊಂದಿಗೆ ಮಾತನಾಡಲಾಯಿತು.
ಪರಿಣಾಮವಾಗಿ ಸಂಸ್ಥೆ ನಾಗಾವಿಯ ಘಟಿಕ ಸ್ಮಾರಕ 60 ಕಂಬಗಳ ದೇವಾಲಯವನ್ನು ದತ್ತು ತೆಗೆದುಕೊಳ್ಳುವುದರ ಜೊತೆಗೆ ನಾಗಾವಿ ಸುಮ್ಮಮುತ್ತಲಿನ ಒಟ್ಟು 12 ಸ್ಮಾರಕಗಳ ಪೈಕಿ ಸಧ್ಯಕ್ಕೆ 4 ಸ್ಮಾರಕಗಳ ಸಂರಕ್ಷಣೆ ಹಾಗೂ ಅಭಿವೃದ್ದಿಗೊಳಿಸಲು ಮುಂದೆ ಬಂದು ಮೂರು ವಾರಗಳ ಅವಧಿಯಲ್ಲಿ ವಿಸ್ತ್ರತ ವರದಿ ( ಡಿಪಿಆರ್ ) ಯನ್ನು ಸಲ್ಲಿಸಲಿದೆ. ಆ ನಂತರ ಅಭಿವೃದ್ದಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು.
ರಾಜ್ಯದಲ್ಲಿ ಒಟ್ಟು 25,000 ಸ್ಮಾರಕಗಳಿವೆ ಅವುಗಳ ಪೈಕಿ ಮೊದಲ ಹಂತದಲ್ಲಿ ಸುಮಾರು 5,000 ಸ್ಮಾರಕಗಳನ್ನು ರಕ್ಷಿಸಿ ಅವುಗಳ ಅಭಿವೃದ್ದಿಗೆ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಂತಹಂತವಾಗಿ ಕ್ರಮ ಕೈಗೊಳ್ಳಲಿದೆ ಎಂದರು.
ನಂತರ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಚಿತ್ತಾಪುರದ ನಾಗಾವಿ ನಾಡು ಐತಿಹಾಸಿಕ ಹಿನ್ನೆಲೆ ಹೊಂದಿದೆ. ಇಲ್ಲಿ ಅಪರೂಪದ ಸ್ಮಾರಕಗಳಿವೆ ಅವುಗಳ ರಕ್ಷಣೆ ಮಾಡುವ ಜವಾಬ್ದಾರಿ ಇದ್ದು ಹಿರಿಯ ಸಚಿವರಾದ ಎಚ್ ಕೆ ಪಾಟೀಲ್ ಅವರೊಂದಿಗೆ ಚರ್ಚಿಸಲಾಗಿದೆ. ಅದರಂತೆ ಸ್ಮಾರಕಗಳ ರಕ್ಷಣೆಗೆ ಬೇಕಾಗುವ ಅಗತ್ಯ ಕ್ರಮಗಳ ಬಗ್ಗೆ ಯುನೈಟೆಡ್ ವೇ ಆಫ್ ಬೆಂಗಳೂರು ಸಂಸ್ಥೆಯೊಂದಿಗೆ ಚರ್ಚಿಸಲಾಗಿದೆ. ಸಚಿವರ ಸಕರಾತ್ಮಕ ಸ್ಪಂದನೆಯಿಂದಾಗಿ ಐತಿಹಾಸಿಕ ನಾಡು ನಾಗಾವಿ ಮುಂದೊಂದು ದಿನ ಸಂರಕ್ಷಿತ ಪ್ರದೇಶವಾಗಲಿ ಎಂದು ಆಶಯ ವ್ಯಕ್ತಪಡಿಸಿದ್ದರು.
ಈ ಸಂದರ್ಭದಲ್ಲಿ ಇತಿಹಾಸಕಾರರು ಸಚಿವದ್ವಯರಿಗೆ ಚಿತ್ತಾಪುರ ತಾಲೂಕಿನ ಐತಿಹಾಸಿ ಹಿನ್ನೆಲೆ ಪರಂಪರೆಯನ್ನು ಕೇಳಿ ತಿಳಿದುಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನೂಮ್, ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಜಗದೇವ್ ಗುತ್ತೇದಾರ್ ಸೇರಿದಂತೆ ಹಲವರು ಇದ್ದರು.