ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಮರ್ಜಾ ಪ್ರಕಾಶನದ ಜಂಟಿ ಆಶ್ರಯದಲ್ಲಿ ಶಿಕ್ಷಕಿ-ಲೇಖಕಿ ಕವಿತಾ ಪಿ ಮೋರಾ ಅವರ ವಿರಚಿತ `ಹೃದಯ ವೀಣೆ’ ಎಂಬ ಚೊಚ್ಚಲ ಕವನ ಸಂಕಲನದ ಜನಾರ್ಪಣೆ ಸಮಾರಂಭವನ್ನು ನಾಳೆ ( ಡಿ.31 ) ಮಧ್ಯಾಹ್ನ 3.30 ಕ್ಕೆ ನಗರದ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕದ ನೆಲ ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಗಳಿಗೆ ವಿಶಿಷ್ಟ ಸೇವೆ ನೀಡುತ್ತಿದೆ. ಇಂದು ಅರಳುವ ಅನೇಕ ಹೊಸ ಪ್ರತಿಭೆಗಳು ಈ ಭಾಗದಲ್ಲಿ ಕಾಣುತ್ತೇವೆ. ಇಲ್ಲಿಯ ನೆಲದ ಸೊಗಡಿನಲ್ಲಿ ಬೆಳೆದು ಸಾಹಿತ್ಯ ಕೃಷಿ ಮಾಡುತ್ತಿರುವ ಕವಯತ್ರಿ ಕವಿತಾ ಮೋರಾ ಅವರ ಚೊಚ್ಚಲ ಕವನ ಸಂಕಲನವಾದ `ಹೃದಯ ವೀಣೆ’ ಎಂಬ ಕೃತಿಯಿಂದ ಹೂವಾಗಿ ಅರಳಿದ್ದಾರೆ. ಬದುಕಿನ ನೋವುಗಳನ್ನು ಅನುಭವಿಸಿ ಆ ಮೂಲಕ ಕಂಡ ಸತ್ಯಗಳನ್ನು ಅಕ್ಷರಗಳ ರೂಪ ನೀಡಿದ್ದಾರೆ.
ಹಿರಿಯ ಸಾಹಿತಿ ಡಾ. ಪದ್ಮಿನಿ ನಾಗರಾಜು ಕೃತಿ ಜನಾರ್ಪಣೆ ಮಾಡಲಿದ್ದು, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ.
ಹಿರಿಯ ಪತ್ರಕರ್ತ-ಸಾಹಿತಿ ಧರ್ಮಣ್ಣಾ ಹೆಚ್ ಧನ್ನಿ ಕೃತಿ ಪರಿಚಯ ಮಾಡಲಿದ್ದು, ಖ್ಯಾತ ವೈದ್ಯೆ ಡಾ. ಪ್ರತಿಮಾ ಎಸ್ ಕಾಮರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಹಂಚನಾಳ, ಕಮಲಾಪೂರ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪರಮೇಶ್ವರ ಓಕಲಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಎಸ್ ಅಂಡಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.