ಕಲಬುರಗಿ: ಯಡ್ರಾಮಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ವಿವಿಧ ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಯನ್ನು ಪೋಲಿಸರು ಬಂಧಿಸಿ ಆತನಿಂದ ಸುಮಾರು 4.31.500 ರೂ.ಗಳ ಮೌಲ್ಯದ ನಗ, ನಾಣ್ಯ ಜಪ್ತಿ ಮಾಡಿದ್ದಾರೆ.
ಬಂಧಿತನಿಗೆ ಯಡ್ರಾಮಿ ತಾಂಡಾದ ನಿವಾಸಿ ಸುನೀಲ್ ತಂದೆ ಪರಶುರಾಮ್ ಪವಾರ್ (24) ಎಂದು ಗುರುತಿಸಲಾಗಿದೆ. ಬಂಧಿತನು ಯಡ್ರಾಮಿ ಠಾಣೆಯ ಐದು ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ತನಿಖೆಯ ವೇಳೆ ಒಪ್ಪಿದ್ದಾನೆ. ಬಂಧಿತನಿಂದ ಸುಮಾರು 4.25 ಲಕ್ಷ ರೂ.ಗಳ ಮೌಲ್ಯದ 85 ಗ್ರಾಮ್ ತೂಕದ ಚಿನ್ನಾಭರಣಗಳು ಹಾಗೂ 6,500ರೂ.ಗಳ ನಗದು ಸೇರಿ ಒಟ್ಟು 4,31,500ರೂ.ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಯಡ್ರಾಮಿಯ ಮುರಗರಾಜೇಂದ್ರ ಅಲಿಯಾಸ್ ಪ್ರಭು ತಂದೆ ಲಿಂಗಣ್ಣಗೌಡ ಪೋಲಿಸ್ ಪಾಟೀಲ್ ಅವರು ಕಳೆದ 12ರಂದು ಠಾಣೆಗೆ ದೂರು ಸಲ್ಲಿಸಿ, ತಮ್ಮ ಮನೆಯ ಬೀಗ ಹಾಕಿಕೊಂಡು ಹೋದ ಸಂದರ್ಭದಲ್ಲಿ ಅಲಮಾರಿಯಲ್ಲಿ ಇಟ್ಟಿದ್ದ ನಗದು 52000ರೂ.ಗಳು, 25000ರೂ.ಗಳ ಮೌಲ್ಯದ ಅರ್ಧ ತೊಲೆ ಚಿನ್ನದ ಉಂಗುರ, 48,000ರೂ.ಗಳ ಮೌಲ್ಯದ ಒಂದು ತೊಲೆ ಬಂಗಾರದ ನೆಕ್ಲೇಸ್ ಕಳ್ಳತನವಾಗಿದ ಕುರಿತು ತಿಳಿಸಿದ್ದರು. ಅದೇ ರೀತಿ ಯಡ್ರಾಮಿ ಪಟ್ಟಣದಲ್ಲಿಯೂ ಸಹ ವಿವಿಧ ಮನೆಗಳ ಕಳ್ಳತನ ಪ್ರಕರಣಗಳು ಸಹ ವರದಿಯಾಗಿದ್ದವು.
ಪಿಎಸ್ಐಗಳಾದ ಸುಖಾನಂದ್ ಸಿಂಗೆ, ರಾಜಶೇಖರ್ ಗಡ್ಡದ್ ಅವರ ನೇತೃತ್ವದಲ್ಲಿ ಎಎಸ್ಐಗಳಾದ ಚಂದ್ರಕಾಂತ್, ಸುರೇಶಕುಮಾರ್, ಸಿಬ್ಬಂದಿಗಳಾದ ದೊಡ್ಡಬಸಪ್ಪ, ಉಮೇಶ್, ಶಂಕ್ರಣ್ಣ, ಮೌಲಪ್ಪ, ಬಸಲಿಂಗ್, ಸಿದ್ದಣ್ಣ, ಚಂದ್ರಾಮ್ ಹಾಗೂ ಪಿಎಸ್ಐ ಶ್ರೀಮತಿ ಪದ್ಮಾ ಹಾಗೂ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಕಾರ್ಯಾಚರಣೆಯನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಶ್ಲಾಘಿಸಿದ್ದಾರೆ.