ಬೆಂಗಳೂರು; ಭಾರತ ಚುನಾವಣಾ ಆಯೋಗ ರಾಜ್ಯಸಭೆಯ 56 ಸ್ಥಾನಗಳಿಗೆ ಇಂದು ಚುನಾವಣೆಯನ್ನು ಘೋಷಿಸಿದ್ದು, ಅದರಲ್ಲಿ ಕರ್ನಾಟಕ ರಾಜ್ಯದ ನಾಲ್ಕು ಸ್ಥಾನಗಳು ಸಹ ಒಳಗೊಂಡಿವೆ.
ರಾಜ್ಯಸಭೆಯ ಈ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ರಾಜ್ಯ ವಿಧಾನಸಭೆಯ 224 ಶಾಸಕರು ಮತದಾರರಾಗಿದ್ದು, ಫೆಬ್ರವರಿ 27 ರಂದು ವಿಧಾನಸೌಧದಲ್ಲಿ ಬೆಳಿಗ್ಗೆ 9:00 ರಿಂದ ಸಂಜೆ 4:00 ಗಂಟೆಯವರೆಗೆ ಮತದಾನ ನಡೆಯಲಿದ್ದು, ಅಂದು ಸಂಜೆ 5:00 ಗಂಟೆಗೆ ಅಲ್ಲಿಯೇ ಮತ ಎಣಿಕೆ ಕಾರ್ಯ ಆರಂಭವಾಗಲಿದೆ.
ಪ್ರಸ್ತುತ ರಾಜ್ಯದಿಂದ ರಾಜ್ಯಸಭೆಯ ಪ್ರತಿನಿಧಿಗಳಾಗಿರುವ ರಾಜೀವ್ ಚಂದ್ರಶೇಖರ್, ಜಿ.ಸಿ ಚಂದ್ರಶೇಖರ್, ಡಾ.ಎಲ್.ಹನುಮಂತಯ್ಯ ಹಾಗೂ ಸೈಯದ್ ನಾಸಿರ್ ಹುಸೇನ್ ಅವರ ಅಧಿಕಾರ ಅವಧಿ ದಿನಾಂಕ: 02-04-2024 ಕ್ಕೆ ಕೊನೆಗೊಳ್ಳಲಿದ್ದು, ಇವರುಗಳಿಂದ ತೆರವಾಗಲಿರುವ 4 ಸ್ಥಾನಗಳಿಗೆ ಈ ಚುನಾವಣೆ ನಡೆಯಲಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತ ಚುನಾವಣಾ ಆಯೋಗ ಘೋಷಿಸಿರುವ ರಾಜ್ಯಸಭೆಯ ಸ್ಥಾನಗಳ ಚುನಾವಣಾ ವೇಳಾಪಟ್ಟಿ ಅಧಿಸೂಚನೆಯ ದಿನಾಂಕ 08 ಫೆಬ್ರವರಿ 2024 (ಗುರುವಾರ), ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ 15 ಫೆಬ್ರವರಿ 2024 (ಗುರುವಾರ), ನಾಮಪತ್ರಗಳ ಪರಿಶೀಲನೆ ದಿನಾಂಕ 16 ಫೆಬ್ರವರಿ2024 (ಶುಕ್ರವಾರ), ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನಾಂಕ 20 ಫೆಬ್ರವರಿ 2024 (ಮಂಗಳವಾರ), ಮತದಾನದ ದಿನಾಂಕ 27 ಫೆಬ್ರವರಿ 2024 (ಮಂಗಳವಾರ), ಸಮಯ ಬೆಳಿಗ್ಗೆ 9:00 ರಿಂದ ಸಂಜೆ 4:00 ಗಂಟೆ, ಮತ ಎಣಿಕೆ ದಿನಾಂಕ 27 ಫೆಬ್ರವರಿ 2024 (ಮಂಗಳವಾರ) ಸಮಯ ಸಂಜೆ 5:00 ಗಂಟೆಯಿಂದ ಪ್ರಾರಂಭವಾಗಲಿದೆ. ದಿನಾಂಕ 29 ಫೆಬ್ರವರಿ 2024 (ಗುರುವಾರ) ಚುನಾವಣಾ ಪ್ರಕ್ರಿಯೆ ಕೊನೆಗೊಳ್ಳಲಿದೆ.