ಕಲಬುರಗಿ: ಸಾರ್ವಜನಿಕರಲ್ಲಿನ ಮೌಢ್ಯತೆಯನ್ನು ನಿವಾರಿಸಿ ವೈಜ್ಞಾನಿಕ ಮನೋಭಾವ ಬೆಳೆಸಲು ಕರ್ನಾಟಕ ಮೌಢ್ಯಮುಕ್ತ ವೈಜ್ಞಾನಿಕ ಅಕಾಡೆಮಿ ಸ್ಥಾಪಿಸಲು ವಿಧಾನಸಭೆಯ ಅಧಿವೇಶನದಲ್ಲಿ ಚರ್ಚಿಸಬೇಕು ಎಂದು ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಘಟಕ ಆಗ್ರಹಿಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಪರಿಷತ್ ವತಿಯಿಂದ ನಡೆಯುವ ವೈಜ್ಞಾನಿಕ ಸಮ್ಮೇಳನಕ್ಕೆ 1 ಕೋಟಿ 50 ಲಕ್ಷ ರೂ.ಅನುದಾನ ನೀಡಬೇಕು, ವಿಜ್ಞಾನ ಸಿರಿ ಮಾಸ ಪತ್ರಿಕೆಯನ್ನು ಗ್ರಾಪಂ, ಶಾಲಾ-ಕಾಲೇಜು, ಗ್ರಂಥಾಲಯಗಳಿಗೆ ಖರೀದಿಸಿ ಹಣ ನೀಡಲು ಶಿಕ್ಷಣ ಇಲಾಖೆಗೆ ಆದೇಶ ಮಾಡಬೇಕು, ಚಿಕ್ಕಬಳ್ಳಾಪುರ ಶೀಡ್ಲಘಟ್ಟದ 10 ಎಕರೆ ಸ್ಥಳದಲ್ಲಿ 55 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ವಿಜ್ಞಾನ ಗ್ರಾಮಕ್ಕೆ ಪ್ರತಿ ವರ್ಷ 10 ಕೋಟಿ ರೂ. ಅನುದಾನ ನೀಡಬೇಕು, ಮೌಢ್ಯಮುಕ್ತ ನಿವಾರಣೆಗೆ ಕಲ್ಯಾಣ ಕರ್ನಾಟಕದಲ್ಲಿ ವೈಜ್ಞಾನಿಕ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ರವೀಂದ್ರ ಶಾಬಾದಿ, ಪ್ರಧಾನ ಕಾರ್ಯದರ್ಶಿ ಡಾ. ಶಿವರಂಜನ ಸತ್ಯಂಪೇಟೆ, ಜಿಲ್ಲಾ ಸಂಚಾಲಕ ಸತೀಶ ಸಜ್ಜನಶೆಟ್ಟಿ, ರಾಜ್ಯ ಸಮಿತಿ ಉಪಾಧ್ಯಕ್ಷ ಶರಣಬಸವ ಕಲ್ಲಾ, ಖಜಾಂಚಿ ಹಣಮಂತರಾಯ ಐನೋಳಿ, ರವಿ ಹರಗಿ, ಬಸವರಾಜ ಧೂಳಾಗುಂಡಿ ಇತರರಿದ್ದರು.