ಕಲಬುರಗಿ: ಇತ್ತೇಚೆಗೆ ಸುರಿದ ಮಳೆಗೆ ಮೀನು ಹಿಡಿಯಲು ಹೋಗಿ ಕೊಚ್ಚಿ ಹೋದ ಸೇಡಂ ತಾಲೂಕಿನ ಕುರಕುಂಟಾ ಗ್ರಾಮದ ರಾಜು ನಾಮವಾರ್ ಮನೆಗೆ ಮಂಗಳವಾರ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಕಲ್ಲು ಗಣಿಗಾರಿಕೆ ಕಾರ್ಮಿಕನಾಗಿರುವ ರಾಜು ನಾಮವಾರ್ ಶನಿವಾರ ಸಂಜೆ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು, ಇದೂವರೆಗೆ ಪತ್ತೆಯಾಗಿಲ್ಲ. ಹೀಗಾಗಿ ಸಚಿವರು ರಾಜು ನಾಮವಾರ್ ಮನೆಗೆ ಭೇಟಿ ನೀಡಿ ಮಕ್ಕಳ ಶಿಕ್ಣಣಕ್ಕೆ ಎಲ್ಲಾ ರೀತಿಯ ನೆರವು ನೀಡಲಾಗುವುದು. ಧೈರ್ಯ ಬಿಡಬೇಡಿ ಸರ್ಕಾರ ನಿಮ್ಮೊಂದಿಗಿದೆ ಎಂದು ಕುಟುಂಬಸ್ಥರಿಗೆ ಅಭಯ ನೀಡಿದರು.
ಕಳೆದ ನಾಲ್ಕು ದಿನದಿಂದ ಎಸ್.ಡಿ.ಆರ್.ಎಫ್, ಅಗ್ನಿಶಾಮಕ, ಪೊಲೀಸ್ ತಂಡ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಪತ್ತೆಗೆ ಶೋಧ ಕಾರ್ಯ ನಡೆದಿದೆ. ನಿನ್ನೆ ಮಳೆ ಕಡಿಮೆಯಾಗಿದ್ದರಿಂದ ಶೋಧ ಕಾರ್ಯಚರಣೆ ಚುರುಕುಗೊಂಡಿದೆ ಎಂದ ಅವರು ಸರ್ಕಾರದಿಂದ ಸಿಗಬೇಕಾದ ಎಲ್ಲಾ ರೀತಿಯ ಪರಿಹಾರವನ್ನು ಕುಟುಂಬಕ್ಕೆ ಪ್ರಮಾಣಿಕವಾಗಿ ಒದಗಿಸಲಾಗುವುದು ಎಂದರು.
ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಶೀಲ್ದಾರ ಶ್ರೇಯಾಂಕಾ ಧನಶ್ರೀ, ತಾಲೂಕಾ ಪಂಚಾಯತ್ ಇ.ಓ ಚಿನ್ನಪ್ಪ ಸೇರಿದಂತೆ ಅನೇಕ ಅಧಿಕಾರಿಗಳು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಇದ್ದರು.
ಸಚಿವರು ಇದಕ್ಕೂ ಮುನ್ನ ಯಡ್ಡಳ್ಳಿ-ಸಂಗಾವಿ (ಟಿ) ಗ್ರಾಮಗಳ ನಡುವಿನ ಹಳ್ಳದ ಸೇತುವೆಯಿಂದ ಶನಿವಾರ ಸಂಜೆ ಮಳೆಗೆ ಕೊಚ್ಚಿ ಹೋದ ರಾಜು ನಾಮವಾರ ಶವ ಪತ್ತೆಗೆ ನಡೆಯುತ್ತಿರುವ ಎಸ್.ಡಿ.ಆರ್.ಎಫ್. ತಂಡದ ರಕ್ಷಣಾ ಕಾರ್ಯಚರಣೆಯನ್ನು ವೀಕ್ಷಿಸಿದರು.