ಕಲಬುರಗಿ: ವಿಶ್ವವಿದ್ಯಾಲಯದಲ್ಲಿ ನಡೆಯುವ ಪ್ರತಿಯೊಂದು ಕಾರ್ಯವು ಕೂಡ ಭ್ರಷ್ಟಾಚಾರ ರಹಿತವಾಗಿರಬೇಕು ಎನ್ನುವ ಮನೋಭಾವ ಹೊಂದಿ ಕೆಲಸ ಮಾಡುತ್ತಿದ್ದೇನೆ ಎಂದು ಗುಲಬರ್ಗಾ ವಿವಿ ಸಿಂಡಿಕೇಟ್ ಸದಸ್ಯ ರಾಘವೇಂದ್ರ ಭೈರಪ್ಪ ಅಭಿಪ್ರಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸೋಮವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ವಿಶ್ವವಿದ್ಯಾಲಯದಲ್ಲಿ ನಡೆಯುವ ಪ್ರತಿಯೊಂದು ಕಾರ್ಯವೂ ಕೂಡ ವಿದ್ಯಾರ್ಥಿಗಳ ಪರವಾಗಿರಬೇಕು. ವಿಶ್ವವಿದ್ಯಾಲಯದಲ್ಲಿನ ವಿದ್ಯಾರ್ಥಿಗಳಿಗೆ ಸಮಸ್ಯೆಯಾದರೆ ನಾನು ಸದಾ ಅವರ ಧ್ವನಿಯಾಗಿ ನಿಲ್ಲುತ್ತೇನೆ. ವಿಶ್ವವಿದ್ಯಾಲಯಗಳು ಪಾರದರ್ಶಕವಾಗಿ ಮತ್ತು ಭ್ರಷ್ಟಾಚಾರ ರಹಿತ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ನಂತರ ಮಾತನಾಡಿದ ಉಪನ್ಯಾಸಕ ನಿಜಲಿಂಗ ದೊಡ್ಮನಿ ದೇಶದಲ್ಲಿ ಮಹಿಳೆಯರ ಶಿಕ್ಷಣಕ್ಕಾಗಿ ದುಡಿದ ಸಾವಿತ್ರಿಭಾಯಿ ಫುಲೆ ಮತ್ತು ಜ್ಯೋತಿಭಾ ಫುಲೆ ಅವರಿಗೆ ಭಾರತರತ್ನ ಪ್ರಶಸ್ತಿ ಕೊಡಬೇಕು. ಈ ದೇಶವನ್ನು ಸದ್ರಢವಾಗಿ ಮಾಡಲು ಶಿಕ್ಷಕˌ ಸೈನಿಕ ಮತ್ತು ರೈತರ ಶ್ರಮ ಸಾಕಷ್ಟಿದೆ. ಆದರೆ ದುರಾದ್ರಷ್ಟಾವಶಾತ್ ಇವರನ್ನು ಕೇವಲ ಹೊಗಳಿಕೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಹಿಂದುಳಿದ ಸಮುದಾಯದಲ್ಲಿ ಜನಿಸಿದ ಸಾವಿತ್ರಿಬಾಯಿ ಫುಲೆ ಅವರ ಹೆಸರಿನಲ್ಲಿ ಮಹಾರಾಷ್ರ್ಟ ಸರಕಾರ ವಿವಿ ಸ್ಥಾಪನೆ ಮಾಡಿದೆ. ಅದರಂತೆ ಇಡೀ ದೇಶ ಫುಲೆ ದಂಪತಿಯನ್ನು ಸ್ಮರಿಸಬೇಕು ಎಂದರು.
ಸರ್ವಪಲ್ಲಿ ರಾಧಾಕ್ರಷ್ಣನ್ ಕೂಡ ಉತ್ತಮ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. ದೇಶದ ದೊಡ್ಡ ಹುದ್ದೆಗೆ ಶಿಕ್ಷಕರು ಕೂಡ ಹೋಗಬಹುದು ಎಂದು ಅವರು ರಾಷ್ರ್ಟಪತಿಯಾಗಿ ಮಾಡಿ ತೋರಿಸಿದ್ದಾರೆ ಎಂದರು. ಅಲ್ಲದೆ ಇಂದಿನ ಯುವಕರು ಸಾಧನೆಯ ಕಡೆಗೆ ತುಡಿತ ಹೊಂದಿರಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ತಮ್ಮದೆ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಮೂಲಕ ವಿಭಾಗದ ಹೆಸರು ತರಬೇಕು ಎಂದರು.
ಈ ವೇಳೆ ಡಾ.ಅಶೋಕ ಶರಣಪ್ಪˌ ಡಾ.ರಾಜಕುಮಾರ ದಣ್ಣೂರˌ ಡಾ.ಸೈಬಣ್ಣ ಗೂಡೂಬˌ ಡಾ.ತೀರ್ಥಕುಮಾರ ಬೆಳಕೋಟ ಸೇರಿದಂತೆ ಹಲವರು ಇದ್ದರು.