ಕಲಬುರಗಿ: ನ್ಯಾ. ಎ.ಜೆ.ಸದಾಶಿವ ಆಯೋಗದ ವರದಿ ಬಗ್ಗೆ ಮನವರಿಕೆ ಮಾಡಿಕೊಡಲು ಮೀಸಲಾತಿಯಲ್ಲಿ ಒಳಮೀಸಲು ನಮ್ಮ ಜನ್ಮಸಿದ್ಧ ಹಕ್ಕು ಎಂಬ ಜನಾಂದೋಲನ ರೂಪಿಸಲಾಗುವುದು ಎಂದು ನ್ಯಾಯಮೂರ್ತಿ ಎ.ಜ.ಸದಾಶಿವ ಆಯೋಗದ ವರದಿ ಜಾರಿ ಹೋರಾಟ ಸಮನ್ವಯ ಸಮಿತಿ ರಾಜ್ಯಧ್ಯಕ್ಷ ಮುತ್ತಣ ವೈ.ಬೆಣ್ಣೂರ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ , ರಾಜ್ಯದ 224 ಕ್ಷೇತ್ರದಲ್ಲಿ ಸಂಚರಿಸಿ ವರದಿ ಬಗ್ಗೆ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಲಿದ್ದೇವೆ. ಆದರೆ ಈ ಬಗ್ಗೆ ಯಾವ ಜನಪ್ರತಿನಿಧಿಗಳು ನಿರ್ಲಕ್ಷ್ಯ , ಉದಾಸೀನತೆ ತೋರುತ್ತಾರೆ ಅಂತಹವರನ್ನು ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿಸುವ ನಿರ್ಣಯಕ್ಕೆ ಬರಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬರುವ ಡಿ 11 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದ್ದು , ಎಲ್ಲ ಶೋಷಿತ ಜಾತಿಗಳ ಶಕ್ತಿ ಪ್ರದರ್ಶನಕ್ಕೆ ಪೂರ್ವಸಿದ್ದತೆ ನಡೆದಿದೆ. ರಾಜ್ಯದ ಪರಿಶಿಷ್ಟ ಜಾತಿಗಳ ಆಂತರಿಕ ಸಮಸ್ಯೆಯನ್ನು ಬಗೆಹರಿಸಲು ಬಿಜೆಪಿ ಸರಕಾರ ತನ್ನ ಬದ್ದತೆ ಪ್ರದರ್ಶಿಸಬೇಕು. ಕೂಡಲೇ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ವರದಿ ಜಾರಿ ಬಗ್ಗೆ ಶಿಫಾರಸು ಮಾಡಬೇಕು. ವರದಿಗೆ ವಿರೋಧ ವ್ಯಕ್ತಪಡಿಸುವವರು ಸಂವಿಧಾನ ವಿರೋಧಿಗಳಾಗಲಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುರಾಜ ಭಂಢಾರಿ, ನರೇಶ ಕಟ್ಟೆ, ಶ್ರೀಶೈಲ ಎಂ.ಜೆ, ಬಸವರಾಜ ಜವಳಿ , ಅಶೋಕ ಕಟ್ಟೆ, ಕಾಶೀರಾಯ ನಂದೂರಕರ್, ರಾಮಚಂದ್ರ ಕಾಂಬಳೆ, ರವಿ ಅರವಿಂದ, ಆನಂದ ತೆಗನೂರ ಇದ್ದರು.