ಸುರಪುರ: ಕಳೆದ ನಾಲ್ಕು ದಿನಗಳ ಹಿಂದೆ ಆರಂಭಿಸಲಾದ ನಗರದ ರಂಗಂಪೇಟೆಯಲ್ಲಿನ ರಸ್ತೆ ಅಗಲೀಕರಣ ಕಾರ್ಯಾಚರಣೆ ಸೋಮವಾರ ಮತ್ತೆ ಆರಂಭಿಸಲಾಯಿತು.ಅಂಬುರೆ ಮನೆಯ ಸಮೀಪದ ಹನುಮಾನ ದೇವಸ್ಥಾನದ ಬಳಿಯಿಂದ ಮುಂದುವರೆದಿರುವ ರಸ್ತೆ ಅಗಲೀಕರಣ ಕಾರ್ಯಾಚರಣೆ ರಸ್ತೆ ಬದಿಯಲ್ಲಿನ ಅನೇಕ ಮನೆಗಳನ್ನು ತೆರವುಗೊಳಿಸಲಾಯಿತು.
ಈ ಸಂದರ್ಭದಲ್ಲಿ ಅನೇಕ ಜನರು ತಮ್ಮ ಮನೆಗಳು ಹೋಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿ,ನಾವು ಬಡವರು ಚಿಕ್ಕ ಚಿಕ್ಕ ಕೋಣೆಗಳ ಮನೆ ಕಟ್ಟಿಕೊಂಡಿದ್ದೇವೆ,ಆದರೆ ಈಗ ಇರುವ ಒಂದೊಂದು ಕೋಣೆಯನ್ನು ಈಗ ಹೊಡೆದು ಹಾಕಲಾಗುತ್ತಿದೆ ಮುಂದೆ ನಾವು ಎಲ್ಲಿ ಇರಬೇಕೆಂಬುದು ತಿಳಿಯುತ್ತಿಲ್ಲ.ನಗರಸಭೆಯಿಂದ ಮನೆಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ ಆದರೆ ಇದುವೆರಗೂ ನಮಗೆ ಯಾರೂ ನಮ್ಮ ಸಮಸ್ಯೆಗಳನ್ನು ಕೇಳಿಲ್ಲ,ಅಲ್ಲದೆ ನಮಗೆ ಯಾವ ಭರವಸೆಯನ್ನೂ ನೀಡುತ್ತಿಲ್ಲ ಇದರಿಂದಾಗಿ ಸದ್ಯ ನಾವು ಉಳಿದುಕೊಳ್ಳುವ ಅತಂತ್ರ ಸ್ಥಿತಿಗೆ ಬರುವಂತಾಗಿದೆ,ಆದ್ದರಿಂದ ನಗರಸಭೆಯಿಂದ ಆದಷ್ಟು ಬೇಗ ನಮಗೆ ಮನೆಗಳನ್ನು ವದಗಿಸಿಕೊಡಬೇಕೆಂದು ವಿನಂತಿಸುತ್ತಿದ್ದಾರೆ.
ಒಟ್ಟು ೪೦ ಅಡಿಯ ಅಗಲೀಕರಣದಲ್ಲಿ ಆಟೋ ನಿಲ್ದಾಣದಿಂದ ತಿಮ್ಮಾಪುರ ವರೆಗೆ ಸುಮಾರು ಐವತ್ತಕ್ಕೂ ಹೆಚ್ಚು ಮನೆಗಳು ತೆರವುಗೊಳ್ಳುವ ಸಾಧ್ಯತೆ ಇದ್ದು,ನಗರಸಭೆ ೪೨ ಮನೆಗಳ ಬಡ ಕುಟುಂಬಗಳಿಗೆ ಮನೆಗಳನ್ನು ವದಗಿಸುವ ಭರವಸೆ ನೀಡಿದ್ದಾರೆ,ಆದರೆ ಯಾವಾಗ ಎನ್ನುವುದು ತಿಳಿಸದ ಕಾರಣ ಸದ್ಯ ಮನೆಗಳನ್ನು ಕಳೆದುಕೊಳ್ಳುತ್ತಿರುವ ಜನರು ಯಾವುದೇ ಭರವಸೆ ಇಲ್ಲದೆ ಚಿಂತೆಗೀಡಾಗಿದ್ದಾರೆ.