ರಾಯಚೂರು: ವಿವಿಗೆ ಅನುದಾನ ಬಿಡುಗಡೆ ಮಾಡಿ ವಿವಿ ಬಲಪಡಿಸಬೇಕು, ಬಾಕಿ ಇರುವ ವಿದ್ಯಾರ್ಥಿ ವೇತನ, ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಕೊಡಲೇಬೇಕು ಹಾಗೂ ರಾಜ್ಯದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಇದಕ್ಕಾಗಿ ಹಣ ಮೀಸಲಿಡಬೇಕು ಎಂದು ಎಸ್ಎಫ್ಐ ಜಿಲ್ಲಾ ಸಮಿತಿ ಒತ್ತಾಯಿಸಿದರು.
ಇಂದು ಮುದಗಲ್ ಗೆ ಆಗಮಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿ, ೬ ರಿಂದ ೯ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಮುಚ್ಚಿರುವ ಅವೈಜ್ಞಾನಿಕ ತಿರ್ಮಾನವನ್ನು ಹಿಂಪಡೆದುಕೊಳ್ಳಬೇಕು. 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಪರೀಕ್ಷೆಗಳನ್ನು ನಡೆಸುವುದು ಬೇಡ. ಹಾಗೆಯೇ ಮುಂದಿನ ತರಗತಿಗೆ ಪ್ರಮೋಟ್ ಮಾಡಬೇಕು ಎಂದು ಆಗ್ರಹಿಸಿದರು.
ಸಾರಿಗೆ ನೌಕರರ ಮುಷ್ಕರದ ನೆಪದಲ್ಲಿ ಅಕ್ರಮವಾಗಿ , ಇನ್ಸೂರೆನ್ಸ್ ಹಾಗೂ ಲೈಸೆನ್ಸ್ ಇಲ್ಲದ, ಖಾಸಗಿ ಬಸ್ ಗಳು ಓಡಾಟ ನಡೆಸುತ್ತಿವೆ. ಇವುಗಳಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ, ನಾಗರೀಕರ ಜೀವಕೆ ಯಾವುದೇ ಭದ್ರತೆ ಇಲ್ಲವಾಗಿದೆ. ಆದ್ದರಿಂದ ಸರ್ಕಾರಿ ಸಾರಿಗೆ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ಸರ್ಕಾರ ಖಾಸಗೀಕರಣಗೊಳಿಸುವ ಜನವಿರೋಧಿ ನೀತಿಗಳನ್ನು ಕೈಬಿಡಬೇಕು ಎಂದು ಈ ಸಂದರ್ಭದಲ್ಲಿ ಸಮಿತಿಯ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ಹಾಗೂ ಗ್ರಾಪಂ ಸದಸ್ಯ ರಮೇಶ ವೀರಾಪೂರು, ಎಸ್ಎಫ್ಐ ತಾಲೂಕು ಮುಖಂಡರಾದ ವೀರೇಶ ಎಸ್ ಕುಂಬಾರ್, ಅಮರೇಶ ಈಚನಾಳ, ದೇವರಾಜ್ ಕುಂಬಾರ್, ಶ್ಯಾಮಣ್ಣ, ಡಿವೈಎಫ್ಐ ಮುಖಂಡರಾದ ಶಿವು ಕಪಗಲ್, ಮುತ್ತುರಾಜ್ ಉಪಸ್ಥಿತರಿದ್ದರು.