ವಾಡಿ: ಪಟ್ಟಣದಲ್ಲಿ ಆಕ್ಸಿಜನ್ ಘಟಕ ಸ್ಥಾಪಿಸಬೇಕು ಎಂದು ಎಸಿಸಿ ಕಂಪನಿಯ ಕಾರ್ಮಿಕ ಸಂಘದ ಜಂಟಿ ಕಾರ್ಯದರ್ಶಿ ವಿಶಾಲ ನಂದೂರಕರ ಎಸಿಸಿ ಆಡಳಿತ ಮಂಡಳಿಯನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಎಸಿಸಿ ಕಾರ್ಖಾನೆಯ ಘಟಕ ವ್ಯವಸ್ಥಾಪಕ ಸೀತಾರಾಮುಲು ಅವರೊಂದಿಗೆ ಮಂಗಳವಾರ ಮಾತುಕತೆ ನಡೆಸಿರುವ ಕಾರ್ಮಿಕ ನಾಯಕ ವಿಶಾಲ ನಂದೂರಕರ, ಕೊರೊನಾ ಎಂಬ ಸಾಂಕ್ರಾಮಿಕ ರೋಗ ತಗುಲಿ ಜಿಲ್ಲೆಯಲ್ಲಿ ನೂರಾರು ರೋಗಿಗಳು ಉಸಿರಾಟ ತೊಂದರೆಯಿಂದ ಸಾಯುತ್ತಿದ್ದಾರೆ. ಜಿಲ್ಲೆಯ ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಆಮ್ಲಜನಕ ಲಭ್ಯವಾಗದೆ ರೋಗಿಗಳು ಅನ್ಯಾಯವಾಗಿ ಸಾಯುತ್ತಿದ್ದಾರೆ.
ಕೋವಿಡ್ ಸಂಕಷ್ಟ:ಸರ್ಕಾರದ ಜೊತೆ ಕೈಜೋಡಿಸಲು ಸಂಸದ ಡಾ. ಉಮೇಶ್ ಜಾಧವ್ ಮನವಿ
ಆಕ್ಸಿಜನ್ಗಾಗಿ ಹಾಹಾಕಾರ ಉಂಟಾಗಿದೆ. ಆಸ್ಪತ್ರೆಗಳಲ್ಲಿ ಶವಗಳ ರಾಶಿ ಬಿದ್ದಿವೆ. ಸಂಬಂದಿಕರ ರೋಧನ ಮುಗಿಲುಮುಟ್ಟಿದೆ. ಇದನ್ನೆಲ್ಲ ನೋಡಿಕೊಂಡು ಸುಮ್ಮನೆ ಕೂಡದೆ, ಎಸಿಸಿ ಕಂಪನಿ ಜನರ ನೆರವಿಗೆ ಮುಂದಾಗಬೇಕು. ಕೆಟ್ಟ ಪರಸ್ಥಿತಿಯಿಂದ ಜನರನ್ನು ಪಾರು ಮಾಡಲು ವಾಡಿ ನಗರದಲ್ಲೇ ಆಕ್ಸಿಜನ್ ಘಟಕ ಸ್ಥಾಪಿಸಬೇಕು. ಕೂಡಲೇ ಘಟಕ ಸ್ಥಾಪನೆಯ ಕೆಲಸ ಪ್ರಾರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಹಾಮಾರಿ ಕೊರೊನಾ ಸೋಂಕಿನ ಭೀತಿ ಕಾರ್ಮಿಕರನ್ನು ಕಾಡುತ್ತಿದೆ. ಪರಿಣಾಮ ಸೋಂಕು ತಗ್ಗುವವವರೆಗೂ ಸಿಮೆಂಟ್ ಉತ್ಪಾದನೆಗಾಗಿ ಅಗತ್ಯವಿರುವ ಕೆಲವೇ ಕಾರ್ಮಿಕರನ್ನು ಬಳಸಿಕೊಳ್ಳಬೇಕು. ಉಳಿದ ಕಾರ್ಮಿಕರಿಗೆ ವೇತನಸಹಿತ ರಜೆ ಘೋಷಿಸಬೇಕು. ಜೀವದ ಹಂಗು ತೊರೆದು ದುಡಿಯುತ್ತಿರುವ ಕಾರ್ಮಿಕರ ಸುರಕ್ಷತೆಗಾಗಿ ಕಂಪನಿ ವಿಶೇಷ ಕಾಳಜಿ ಪ್ರದರ್ಶಿಸಬೇಕು. ಯಾವೂದೇ ಕಾರಣಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಂಡು ಸಾಮಾಜಿಕ ಅಂತರ ನಿಯಮವನ್ನು ಉಲ್ಲಂಘಿಸಬಾರದು. ಕಾರ್ಮಿಕರಿಗೆ ನೀಡಬೇಕಾದ ಕೋವಿಡ್ ಲಾಕ್ಡೌನ್ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.