ಕಲಬುರಗಿ: ನಾಡು-ನುಡಿ, ನೆಲ-ಜಲದ ಜೊತೆಗೆ ಇಂದಿನ ದಿನಮಾನದಲ್ಲಿ ಪರಿಸರ ಸ್ವಚ್ಛತೆಯೂ ಸೇರಿದಂತೆ ಆಮ್ಲಜನಕದ ಕೊರತೆ ನೀಗಿಸಲು ಗಿಡ ನೆಟ್ಟು ಅವುಗಳ ಪಾಲನೆಗೂ ಮುಂದಾಗಬೇಕು ಎಂದು ಮಹಾ ನಗರ ಪಾಲಿಕೆ ಮಾಜಿ ಸದಸ್ಯ ಗಣೇಶ ವಳಕೇರಿ ಅಭಿಪ್ರಾಯ ಪಟ್ಟರು.
ನಗರದ ಗಾಜಿಪುರ ಬಡಾವಣೆಯ ಮಹಾವೀರ ಚೌಕ್ ಸೇರಿದಂತೆ ಹಲವೆಡೆ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರೋನಾ ಎರಡನೇ ಅಲೆಯಲ್ಲಿ ಆಕ್ಸಿಜನ್ ಸಿಗದೇ ಪರದಾಡಿದ ಹಲವಾರು ಜನರು ಪರಿತಪಿಸಿದ್ದಾರೆ. ಸಾವು- ನೋವುಗಳೂ ಸಂಭವಿಸಿದ ಹೃದಯವಿದ್ರಾವಕ ಘಟನೆಗಳನ್ನು ಎಲ್ಲರೂ ಕಂಡಿದ್ದಾರೆ. ಮನೆಗೊಂದು ಮಗು, ಮಗುವಿಗೊಂದು ಮರ ಎಂಬ ಧ್ಯೇಯ ವಾಕ್ಯ ಎಲ್ಲ ಮನೆಗಳಿಗೂ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಎಚ್.ಶಿವರಾಮೇಗೌಡರ ಕರವೇ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ಮಾತನಾಡಿ, ಹಸಿರೆ ಉಸಿರು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೂ ಪ್ರಪಂಚದಾದ್ಯಂತ ಪರಿಸರವನ್ನು ನಾಶಮಾಡಿ ಕಾಂಕ್ರೀಟ್ ಹಾಸಿಗೆಯನ್ನು ಹಾಕುತ್ತಿರುವುದರಿಂದ,ನಾವು ಕೆಲವೇ ವರ್ಷಗಳಲ್ಲಿ ವಿನಾಶದ ಹಾದಿಯನ್ನು ತುಳಿಯುತ್ತಿದ್ದೇವೆ. ಪ್ರಸ್ತುತ ಜಗತ್ತಿನಲ್ಲಿ ಆಧುನಿಕತೆ, ನಗರೀಕರಣ, ಕೈಗಾರೀಕರಣ, ವಿಜ್ಞಾನ, ತಂತ್ರಜ್ಞಾನ ಅಭಿವೃದ್ಧಿ ಎಂಬ ಹತ್ತು ಹಲವು ಕಾರಣಗಳಿಂದ ಪರಿಸರದಲ್ಲಿ ವಾಯುಮಾಲಿನ್ಯ, ಜಲಮಾಲಿನ್ಯ, ಭೂ ಮಾಲಿನ್ಯ, ಶಬ್ದ ಮಾಲಿನ್ಯ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕರಾದ ನಾಗರಾಜ ಸೊಲ್ಲಾಪುರ, ರಾಘವೇಂದ್ರ ಹೆಬ್ಬಾಳಕರ್, ದೀಪಕ ಹೊಡಲ್, ಸಂತೋಷ, ಶಂಕರ ನಾಟೀಕಾರ ಸೇರಿದಂತೆ ಇನ್ನಿತರರಿದ್ದರು.