ಸುರಪುರ: ಸಾಮೂಹಿಕ ದಲಿತ ಸಂಘಟನೆಗಳಿಂದ ನಗರದ ಡಾ:ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಇತ್ತೀಚೆಗೆ ಅಗಲಿದ ದಲಿತ ಕವಿ ಡಾ:ಸಿದ್ದಲಿಂಗಯ್ಯ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ನಡೆಸಲಾಯಿತು.ಆರಂಭದಲ್ಲಿ ಸಿದ್ದಲಿಂಗಯ್ಯನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮೇಣದ ಬತ್ತಿ ಬೆಳಗಿ ಎರಡು ನಿಮಿಷಗಳ ಮೌನಾಚರಣೆಯನ್ನು ನಡೆಸಲಾಯಿತು.
ನಂತರ ಮುಖಂಡ ನಾಗಣ್ಣ ಕಲ್ಲದೇವನಹಳ್ಳಿ ಮಾತನಾಡಿ, ದಲಿತ ಕವಿಗಳೆಂದೆ ಹೆಸರಾಗಿದ್ದ ಕವಿ ಸಿದ್ದಲಿಂಗಯ್ಯನವರು ದಲಿತರ ಧ್ವನಿಯಾಗಿದ್ದರು.ಅವರು ಬರೆದ ಇಕ್ಕರ್ಲಾ ಒದಿರ್ಲಾ ಎನ್ನುವ ಹಾಡು ದಲಿತರ ಹೋರಾಟಕ್ಕೆ ಶಕ್ತಿಯನ್ನು ತುಂಬಿತ್ತು,ಅವರು ಇಡೀ ಬದುಕಿನುದ್ದಕ್ಕೂ ದಲಿತ ಶೋಷಿತರ ಏಳಿಗೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ಇಂದು ನಮ್ಮನ್ನೆಲ್ಲ ಅಗಲಿರುವುದು ತುಂಬಾ ನೋವಿನ ಸಂಗತಿ,ಈ ಸಂದರ್ಭದಲ್ಲಿ ಅವರನ್ನು ನೆನೆಯುತ್ತಾ ಆತ್ಮಕ್ಕೆ ಶಾಂತಿ ಕೋರುವುದಾಗಿ ತಿಳಿಸಿದರು.
ಖ್ಯಾತ ಹಿಂದುಸ್ಥಾನಿ ಗಾಯಕಿ ನಿರ್ಮಲಾ ರಾಜಗುರುಗೆ ಕಸಾಪ ಅಧ್ಯಕ್ಷರ ಸನ್ಮಾನ
ಮತ್ತೋರ್ವ ಮುಖಂಡ ರಾಹುಲ್ ಹುಲಿಮನಿ ಮಾತನಾಡಿ,ಈ ನಾಡಿನ ಬಹುದೊಡ್ಡ ಸಾಹಿತಿಯಾಗಿದ್ದ ಡಾ: ಸಿದ್ದಲಿಂಗಯ್ಯ ಅವರನ್ನು ಎಲ್ಲರು ದಲಿತ ಕವಿ ಎಂದೇ ಕರೆಯುತ್ತಿದ್ದರು,ನಾಡಿನಲ್ಲಿಯ ದಲಿತ ಶೋಷಿತರ ಧ್ವನಿಯಾಗಿ ಅನೇಕ ಸಂಘಟನೆಗಳೊಂದಿಗೆ ಒಡನಾಟವಿದ್ದು ಬದುಕಿನುದ್ದಕ್ಕೂ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದವರು.ಅಲ್ಲದೆ ಅವರು ಬರೆದ ಹಾಡು ಯಾರಿಗೆ ಎಲ್ಲಿಗೆ ಬಂತು ೪೭ರ ಸ್ವಾತಂತ್ರ್ಯ ಎನ್ನುವಂತದ್ದು ಎಲ್ಲರಲ್ಲಿ ಹೋರಾಟದ ಕೆಚ್ಚನ್ನು ಮೂಡಿಸಿದೆ,ಅವರೊಬ್ಬ ಬಂಡಾಯ ದಲಿತ ಸಾಹಿತಿ ಮಾತ್ರವಲ್ಲದೆ ಪ್ರೇಮ ಕವಿಯು ಆಗಿದ್ದರು ಎನ್ನುವುದು ಅವರ ಅನೇಕ ಹಾಡುಗಳು ಚಲನಚಿತ್ರ ಗೀತೆಗಳಾಗಿರುವುದು ಸಾಕ್ಷಿಯಾಗಿದೆ.ಇಂತಹ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡು ದಲಿತ ಸಮುದಾಯಕ್ಕೆ ದೊಡ್ಡ ನಷ್ಟವುಂಟಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ ಹೊಸ್ಮನಿ ಭೀಮರಾಯ ಸಿಂದಗೇರಿ ಮಾಳಪ್ಪ ಕಿರದಹಳ್ಳಿ ಪತ್ರಕರ್ತ ರಾಜು ಕುಂಬಾರ ರಾಜು ಕಟ್ಟಿಮನಿ ಚಂದಪ್ಪ ಪಂಚಮ್ ಶ್ರೀಮಂತ ಚಲುವಾದಿ ಜಗದೀಶ ಶಾಖನವರ ಗೌತಮ್ ತೇಲ್ಕರ್ ಗುರು ಹುಲಿಕಲ್ ಇತರರಿದ್ದರು.