ಕಲಬುರಗಿ: ಬಾಬಾ ಸಾಹೇಬ ಡಾ.ಅಂಬೇಡ್ಕರ್ ಅವರು ಜಾತಿ ಧರ್ಮವನ್ನು ಮೀರಿದ ವಿಶ್ವದ ಜ್ಞಾನ ಬಂಡಾರವಾಗಿದ್ದಾರೆ ಎಂದು ಉಪನ್ಯಾಸಕ ನಿಜಲಿಂಗ ದೊಡ್ಮನಿ ಅಭಿಪ್ರಾಯಪಟ್ಟರು.
ನಗರದ ಎಂಜಿನಿಯರಿಂಗ್ ಕಾಲೇಜು ವಸತಿ ನಿಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 132ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
ಡಾ.ಅಂಬೇಡ್ಕರ್ ಅವರು 3ಜನ ಗುರುಗಳನ್ನು ಹೊಂದಿದ್ದರು. ಬುದ್ಧˌ ಪೇರಿಯಾರ ಹಾಗೂ ಜ್ಯೋತಿಭಾಪುಲೆಯಂತವರ ತತ್ವಗಳನ್ನು ಆಳವಡಿಸಿಕೊಂಡಿದ್ದರು. ತಮ್ಮ ಜೀವನದ ಕೊನೆಯವರೆಗೂ ಕೂಡ ಆದರ್ಶಮಯವಾಗಿ ಬದುಕಿದರು ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಉಪನ್ಯಾಸಕ ಯಲ್ಲಪ್ಪ ಸುಭೇದಾರˌ ಕತ್ತಿ ಬರ್ಚಿಯಿಂದ ಸಮಾಜವನ್ನು ಬದಲಾವಣೆ ಮಾಡದೆˌ ಕೇವಲ ಪೆನ್ನಿನ ಮೂಲಕ ಶೋಷಿತರನ್ನು ಮೇಲಕ್ಕೆತ್ತಿದ ಕೀರ್ತಿ ಬಾಬಾ ಸಾಹೇಬರಿಗೆ ಸಲ್ಲುತ್ತದೆ ಎಂದರು. ಈ ಸಂದರ್ಭದಲ್ಲಿ ಮೇಲ್ವಚಾರಕ ಕೆಂಚಪ್ಪ ವಂದಗನೂರˌ ಡಾ.ಅಶೋಕ ದೊಡ್ಮನಿ ಸೇರಿದಂತೆ ಅನೇಕರು ಇದ್ದರು.