ಶಹಾಬಾದ: ಕೊವಿಡ್ನ ಇಂತಹ ಸಂಕಷ್ಟ ಸಮಯದಲ್ಲಿ ಆಕ್ಸಿಜನ್ ನೀಡುವ ಗಿಡ ಮರಗಳ ಮಹತ್ವ ಮನದಟ್ಟು ಮಾಡಿಸಿ ಮಾನವ ಕುಲಕ್ಕೆ ಕೊರೊನಾ ಹೊಸ ಪಾಠ ಕಲಿಸಿದೆ ಎಂದು ಮರತೂರ ಗ್ರಾಪಂ ಸದಸ್ಯರಾದ ಅಜಿತ್ಕುಮಾರ ಪಾಟೀಲ ಹೇಳಿದರು.
ಅವರು ಮಂಗಳವಾರ ಮರತೂರ ಗ್ರಾಮದಲ್ಲಿ ಆಯೋಜಿಸಲಾದ ಸಸಿ ನೆಡುವ ಹಾಗೂ ಸಸಿಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೊರೊನಾ ವೈರಸ್ ಕಳೆದ ಒಂದುವರೆ ವರ್ಷದಿಂದ ಜಗತ್ತನ್ನೇ ಕಾಡುತ್ತಿದೆ.ಸಂಕ್ರಮಿತ ವ್ಯಕ್ತಿಗಳಿಗೆ ಉಸಿರಾಟದ ತೊಂದರೆಯಾದಾಗ ಆಕ್ಸಿಜನ್ ಸಿಲಿಂಡರ್ ಸಿಗದೇ ಪರದಾಡಿದಂತಹ ಪರಿಸ್ಥಿತಿ ನಾವೆಲ್ಲಾ ಕಂಡಿದ್ದೆವೆ.ಅಲ್ಲದೇ ಆಕ್ಸಿಜನ್ ಕೊರತೆಯಿಂದ ಸಾವಿರಾರು ಜನರು ಪ್ರಾಣವನ್ನು ಬಿಟ್ಟಿದ್ದಾರೆ.ಆದರೆ ನಮ್ಮ ಜೀವಿತಾ ಅವದಿಯ ಉದಕ್ಕೂ ಉಚಿತವಾಗಿ ಆಕ್ಸಿಜನ್ ಪೂರೈಕೆ ಮಾಡುತ್ತಿರುವ ಗಿಡಮರಗಳ ಮಹತ್ವ ಅರಿಯದ ಮೂಢ ಜನರಿಗೆ ಅರಿವು ಮೂಡಿದಂತಾಗಿದೆ.ಈಗಲಾದರೂ ಪ್ರತಿಯೊಬ್ಬರೂ ಕಡ್ಡಾಯವಾಗಿ ಒಂದಾದರೂ ಸಸಿಯನ್ನು ನೆಟ್ಟು ಪೋಷಿಸಬೇಕೆಂದು ಹೇಳಿದರು.
ಪಿ.ಕೆ.ಪಿ.ಎಸ್.ಎನ್ ಅಧ್ಯಕ್ಷ ರವಿ ನರೋಣಿ, ಮಾತನಾಡಿ,ಅರಣ್ಯ ನಾಶದಿಂದ ಪರಿಸರದ ತಾಪಮಾನ ಹೆಚ್ಚಾಗಿ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಆದ್ದರಿಂದ ಈ ತಾಪಮಾನವನ್ನು ತಡೆಯಲು ಮರಗಳನ್ನು ಬೆಳೆಸಬೇಕೆಂದು ಹೇಳಿದರು.
ಗ್ರಾಮ ಪಂಚಾಯತ ಅಧ್ಯಕ್ಷ ಗುರುನಾಥ ಕಂಬಾ, ಗ್ರಾಪಂ ಸದಸ್ಯರಾದ ಸಿದ್ರಾಮಪ್ಪಗೌಡ ಮಾಲಿ ಪಾಟೀಲ, ಶ್ಯಾಮರಾಯ ಸುಣಗಾರ, ಶೌಕತ್ ಅಲಿ,ಪರಶುರಾಮ, ಗೌರಿಶಂಕರ ಪಾಟೀಲ, ಶರಣಬಸಪ್ಪ ಪಾಟೀಲ,ಸಂಗಣ್ಣ ಮೈನಾಳ, ಗ್ರಾಪಂ ಕಾರ್ಯದರ್ಶಿ ಅಣ್ಣಾಸಾಬ ಪಾಟೀಲ, ಭೀಮಾಶಂಕರ ನರೋಣಿ, ಉಪಸ್ಥಿತರಿದ್ದರು.