ವಾಡಿ: ಪಟ್ಟಣ ವ್ಯಾಪ್ತಿಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಮುಗಿಬಿದ್ದು ಕೊಠಡಿ ಪ್ರವೇಶ ಮಾಡುವ ಮೂಲಕ ಕೊರೊನಾ ಸಾಂಕ್ರಾಮಿಕ ರೋಗದ ಸಾಮಾಜಿಕ ಅಂತರ ನಿಯಮಕ್ಕೆ ಧಿಕ್ಕಾರ ಹೇಳಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯ ನಿಮಗಳಂತೆ ಪರಸ್ಪರ ಅಂತರ ಕಾಯ್ದುಕೊಳ್ಳಬೇಕಾದ ಪರೀಕ್ಷಾರ್ಥಿಗಳು, ಕೇಂದ್ರದ ಪ್ರವೇಶ ದ್ವಾರದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರುವ ಮೂಲಕ ಒಬ್ಬರ ಮೇಲೊಬ್ಬರು ಮುಗಿಬಿದ್ದು ಆತಂಕ ಮೂಡಿದರು. ಒಳಗೆ ಅಂತರ ಕಾಯ್ದುಕೊಂಡು ಕೋವಿಡ್ ನಿಯಮಗಳಡಿ ಪರೀಕ್ಷೆ ಬರೆದ ಪ್ರಸಂಗ ಕಂಡು ಬಂದಿತು.
ಪಟ್ಟಣದ ಸಂತ ಅಂಬ್ರೂಸ್ ಕಾನ್ವೆಂಟ್ ಶಾಲೆಯಲ್ಲಿ ಎರಡು ಪರೀಕ್ಷಾ ಕೇಂದ್ರಗಳಿದ್ದರೆ, ಡಿಎವಿ ಪಬ್ಲಿಕ್ ಶಾಲೆ, ನಾಲವಾರ, ಕೊಂಚೂರಿನ ಏಕಲವ್ಯ ವಸತಿ ಶಾಲೆ, ರಾವೂರಿನ ಸರಕಾರಿ ಪ್ರಾಥಮಿಕ ಹಾಗೂ ಪ್ರೌಡ ಶಾಲೆಯಲ್ಲಿ ಪ್ರತ್ಯೇಕ ಕೇಂದ್ರಗಳನ್ನು ಸ್ಥಾಪಿಸಿ ಮಕ್ಕಳನ್ನು ಸೋಂಕಿನಿಂದ ರಕ್ಷಿಸಲಾಯಿತು. ಪ್ರವೇಶಕ್ಕೆ ಮುಂದಾದ ವಿದ್ಯಾರ್ಥಿಗಳ ಕೈಗೆ ಸ್ಯಾನಿಟೈಸರ್ ಹಾಕಿ ಥರ್ಮಲ್ ಸ್ಕ್ರೀನ್ ಮಾಡಲಾಯಿತು.
ಮಹಾಮಾರಿ ಕೊರೊನಾ ಸೊಂಕಿನ ಕುರಿತು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಲ್ಲಿ ಜಾಗೃತಿ ಮೂಡಿಸಿರುವಾಗಲೂ ಶಿಕ್ಷಕರು ಮಕ್ಕಳ ಸಾಮಾಜಿಕ ಅಂತರ ಕೈಗೊಳ್ಳಲು ಹರಸಾಹಸ ಪಡುವಂತಾಯಿತು. ಕೇಂದ್ರಗಳಿಗೆ ಭೇಟಿ ನೀಡಿದ ಪಿಎಸ್ಐ ವಿಜಯಕುಮಾರ ಭಾವಗಿ ಅವರು ಮಕ್ಕಳ ಸುರಕ್ಷತೆಯನ್ನು ಪರಿಶೀಲಿಸಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿದರು.