ಸುರಪುರ: ಕೃಷ್ಣಾ ನದಿಗೆ ೪ ಲಕ್ಷ ಕ್ಯೂಸೆಕ್ಗಿಂತಲೂ ಅಧಿಕ ಪ್ರಮಾಣದಲ್ಲಿ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಮುಳುಗಡೆಯಾಗಿರುವ ದೇವಾಪುರ ಶೆಳ್ಳಗಿ ಕರ್ನಾಳ ಮತ್ತತರೆ ಪ್ರವಾಹ ಸ್ಥಳಗಳಿಗೆ ಶನಿವಾರ ಸಂಜೆ ಶಾಸಕ ನರಸಿಂಹ ನಾಯಕ (ರಾಜುಗೌಡ) ಹಾಗು ಜಿಲ್ಲಾಧಿಕಾರಿ ಡಾ: ರಾಗಪ್ರಿಯ ಆರ್,ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ಶಿಲ್ಪಾ ಶರ್ಮಾ ಸೇರಿದಂತೆ ಅನೇಕ ಜನ ಅಧಿಕಾರಿಗಳು ಭೇಟಿ ನೀಡಿ ವೀಕ್ಷಿಸಿದರು.
ಶಾಸಕ ರಾಜುಗೌಡಗೆ ಸಚಿವ ಸ್ಥಾನ ನೀಡಲು ಅನೇಕ ಮುಖಂಡರ ಮನವಿ
ಈ ಸಂದರ್ಭದಲ್ಲಿ ಶಾಸಕ ರಾಜುಗೌಡರನ್ನು ಭೇಟಿ ಮಾಡಿದ ಅನೇಕ ಜನ ರೈತರು ತಮ್ಮ ಜಮೀನು ಮುಳುಗಡೆಯಾದ ಬಗ್ಗೆ ಹಾಗು ಕಳೆದ ವರ್ಷವು ಪರಿಹಾರ ಬಾರದಿರುವ ಬಗ್ಗೆ ಗಮನ ಸೆಳೆದರು.ಈ ಎಲ್ಲಾ ರೈತರನ್ನುದ್ದೇಶಿಸಿ ಶಾಸಕ ರಾಜುಗೌಡ ಮಾತನಾಡಿ,ಹಿಂದೆ ನೆರೆ ಪರಿಹಾರ ವಿತರಣೆಯಲ್ಲಿ ಸ್ವಲ್ಪ ಲೋಪವಾಗಿದೆ.ಆದರೆ ಈಬಾರಿ ಆರೀತಿಯ ಯಾವುದೇ ಲೋಪವಾಗದಂತೆ ಕ್ರಮವಹಿಸುವುದಾಗಿ ತಿಳಿಸಿದರು.
ಅಲ್ಲದೆ ಈಗಾಗಲೇ ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯತಿ ಸಿಇಒ ಅವರು ಮತ್ತು ತಹಸೀಲ್ದಾರರು ಹಾಗು ಕಂದಾಯ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ನಿರಂತರವಾಗಿ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಕ್ರಮ ಕೈಗೊಳ್ಳುತ್ತಿದ್ದಾರೆ.ರೈತರು ಯಾವುದೇ ರೀತಿಯಲ್ಲಿ ಚಿಂತೆ ಮಾಡಬೇಕಿಲ್ಲ ಈಬಾರಿ ಎಲ್ಲ ರೀತಿಯ ನೆರವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ನಂತರ ತಾಲೂಕಿನ ಶೆಳ್ಳಗಿ ಕರ್ನಾಳ ಗ್ರಾಮಗಳಲ್ಲಿ ಮುಳುಗಡೆಯಾಗಿರುವ ರೈತರ ಜಮೀನುಗಳ ವೀಕ್ಷಣೆಯನ್ನು ನಡೆಸಿದರು.ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪ್ರಶಾಂತ ಅನಗಂಡಿ,ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ,ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ಸೇರಿದಂತೆ ಅನೇಕ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿದ್ದರು.