ಸುರಪುರ: ನಗರ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸುರಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳ ಅಪೌಷ್ಠಿಕತೆ ತಪಾಸಣೆ ಮತ್ತು ವಿಕಲಚೇತನ ವಿದ್ಯಾರ್ಥಿಗಳ ವಿಕಲಾಂಗತೆ ಪರೀಕ್ಷೆ ಶಿಬಿರವನ್ನು ನಡೆಸಲಾಯಿತು.
ಶಿಬಿರಕ್ಕೆ ನೂರಾರು ಸಂಖ್ಯೆಯ ಮಕ್ಕಳನ್ನು ಕರೆದುಕೊಂಡು ಬಂದ ಪೋಷಕರು ತಮ್ಮ ಮಕ್ಕಳ ಅಪೌಷ್ಠಿಕತೆಯ ಪ್ರಮಾಣದ ತಪಾಸಣೆ ಮಾಡಿಸಿದರು.ಅಲ್ಲದೆ ಅನೇಕ ಜನ ವಿಕಲಚೇತನ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು ವಿಕಲಾಂಗದ ಪ್ರಮಾಣದ ಪರೀಕ್ಷೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಬಿಆರ್ಸಿ ಕಚೇರಿಯ ಬಿಇಆರ್ಟಿ ರಾಜಶೇಖರ ದೇಸಾಯಿ ಮಾತನಾಡಿ,ಸರಕಾರ ಮಕ್ಕಳ ಅಪೌಷ್ಠಿಕತೆಯ ತಪಾಸಣೆಯನ್ನು ನಡೆಸಿ ಮಕ್ಕಳ ಅಪೌಷ್ಠಿಕತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಯೋಜನೆ ಜಾರಿಗೊಳಿಸಲಿದೆ.ಅದೇರೀತಿ ವಿಕಲಚೇತನ ಮಕ್ಕಳ ಪರೀಕ್ಷೆ ನಡೆಸಿ ವರದಿ ನೀಡಿದಲ್ಲಿ,ಆ ವಿದ್ಯಾರ್ಥಿಯ ವಿಕಲಾಂಗತೆಯ ಪ್ರಮಾಣದ ಆಧಾರದ ಮೇಲೆ ಅವರಿಗೆ ನೀಡಬೇಕಾದ ಸೌಲಭ್ಯವನ್ನು ನೀಡಲಿದೆ.ಆದ್ದರಿಂದ ಇದೊಂದು ಉಪಯುಕ್ತವಾದ ಶಿಬಿರವಾಗಿದ್ದು ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ತಪಾಸಣೆ ಮಾಡಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ: ಪ್ರಕಾಶ,ಮೆಡಿಕಲ್ ಆಫಿಸರ್ ಪಾರ್ವತಿ ಆರ್.ಬಿ.ಎಸ್, ಮಲಕಮ್ಮ ಹಿರೇಮಠ,ಭುವನೇಶ್ವರಿ,ಚೈತ್ರ,ಡಿಇಐಸಿ ವ್ಯವಸ್ಥಾಪಕ ಶಿವಲಿಂಗ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಪದ್ಮಾವತಿ ನಾಯಕ,ಜಯಶ್ರೀ ಬಿರಾದಾರ,ಶಶಿಕಲಾ ಗಾಳಿ,ಶರಣಮ್ಮ ದೇಸಾಯಿ ಇತರರಿದ್ದರು.