ಆಳಂದ: ಜಗತ್ತಿನಲ್ಲಿ ಜ್ಞಾನಕ್ಕಿರುವುಷ್ಟು ಬೆಲೆ ಬೇರೆ ಯಾವ ವಸ್ತುವಿಗೂ ಇಲ್ಲ ಎಂದು ಕಲಬುರಗಿ ರಾಜ ಸ್ಪರ್ಧಾ ಪರೀಕ್ಷೆಗಳ ತರಬೇತಿ ಕೇಂದ್ರದ ನಿರ್ದೇಶಕ ರಮೇಶ ಜತ್ತಿ ಅಭಿಪ್ರಾಯಪಟ್ಟರು.
ಶನಿವಾರ ಆಳಂದ ಪಟ್ಟಣದ ಪೂಜ್ಯ ಶ್ರೀ ರಾಜಶೇಖರ ಮಹಾಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ದ್ವೀತಿಯ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ತೀವ್ರವಾಗಿದ್ದರೂ ಅವಕಾಶಗಳು ಹೇರಳವಾಗಿವೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸೂಕ್ತ ಮಾರ್ಗದರ್ಶನ, ತಯಾರಿ ಮಾಡಿಕೊಂಡು ಪರೀಕ್ಷೆಗಳನ್ನು ಎದುರಿಸಲು ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಶಿಕ್ಷಕ ವೃತ್ತಿಯಲ್ಲಿ ಆತ್ಮಸಂತೃಪ್ತಿ ಕಾಣಬಹುದು ಅಲ್ಲದೇ ಸಮಾಜಕ್ಕೆ ಉನ್ನತ ಮಟ್ಟದಲ್ಲಿ ಕಾಣಿಕೆ ನೀಡುವ ಮಹತ್ತರ ಅವಕಾಶ ಒದಗಿ ಬರುತ್ತದೆ ಹೀಗಾಗಿ ವಿದ್ಯಾರ್ಥಿಗಳು ಶಿಕ್ಷಕ ವೃತ್ತಿಯನ್ನು ಅಪಾರವಾಗಿ ಪ್ರೀತಿಸಬೇಕು ಜೊತೆಗೆ ಗೌರವಿಸಬೇಕು ಎಂದು ಕರೆ ನೀಡಿದರು.
ಸಾನಿಧ್ಯ ವಹಿಸಿ ಮಾತನಾಡಿದ ನಂದಗಾಂವನ ರಾಜಶೇಖರ ಮಹಾಸ್ವಾಮೀಜಿ, ಶಿಕ್ಷಕ ವೃತ್ತಿಗೆ ಸಮಾಜದಲ್ಲಿ ಅಪಾರ ಬೇಡಿಕೆಯಿದೆ ಪ್ರಶಿಕ್ಷಣಾರ್ಥಿಗಳು ಕೌಶಲ್ಯ, ಚಟುವಟಿಕೆ ಆಧಾರಿತ ಕಲಿಕಾ ವಿಧಾನಗಳನ್ನು ತರಬೇತಿ ಅವಧಿಯಲ್ಲಿ ಪರಿಪೂರ್ಣವಾಗಿ ಕಲಿಯಬೇಕು ಎಂದು ಆಶೀರ್ವಚನ ನೀಡಿದರು.
ವಿಕೆಜಿ ಪದವಿ ಕಾಲೇಜಿನ ಪ್ರಾಚಾರ್ಯ ಕಲ್ಯಾಣಿ ಸಾವಳಗಿ, ಎಂಪಿಎಂಜಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮಲ್ಲಿನಾಥ ಬುಕ್ಕೆ, ಎಸ್ಆರ್ಜಿ ಆಂಗ್ಲ್ ಮಾಧ್ಯಮ ಶಾಲೆಯ ಪ್ರಾಚಾರ್ಯೆ ಜ್ಯೋತಿ ವಿಶಾಖ, ಕಸಾಪ ಅಧ್ಯಕ್ಷ ಹಣಮಂತ ಶೇರಿ ಖಜೂರಿ, ಸಿದ್ದಪ್ಪ ಫೂಲಾರೆ ವೇದಿಕೆಯ ಮೇಲಿದ್ದರು.
ಶಿವಶರಣಪ್ಪ ಪೂಜಾರಿ, ಅಶೋಕ ಆಳಂದ ಸಂಗೀತ ಸೇವೆ ಸಲ್ಲಿಸಿದರು. ದೀಪಿಕಾ, ಜಮೀಲಾ ಅಫ್ರೀನ್ ನಿರೂಪಿಸಿದರು. ಪ್ರಾಚಾರ್ಯ ಅಶೋಕರೆಡ್ಡಿ ಸ್ವಾಗತಿಸಿದರು.