ಶಹಾಬಾದ: ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ ಅವರು ದೇಶದ ದಲಿತ ಸಮುದಾಯದ ಕಣ್ಣಾಗಿ ಆ ವರ್ಗಗಳ ಅಭಿವೃದ್ಧಿಗೆ ಹೋರಾಟ ಮಾಡಿದ ಮಹಾನ್ ವ್ಯಕ್ತಿಗಳು ಎಂದು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.
ಅವರು ಬುಧವಾರ ನಗರಸಭೆಯಿಂದ ಆಯೋಜಿಸಲಾದ ಡಾ.ಬಾಬು ಜಗಜೀವನರಾಮ ಅವರ ಪುಣ್ಯಸ್ಮರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ಬಾಬು ಜಗಜೀವನರಾಮ ಅವರು ಜಾರಿಗೆ ತಂದ ಹಲವಾರು ಕಾರ್ಯಕ್ರಮಗಳು ಇಂದಿಗೂ ಜನಪರವಾಗಿವೆ. ದೇಶದ ಆಹಾರ ಕೊರತೆ ನೀಗಿಸುವಲ್ಲಿ ರೈತರಿಗೆ ಹಸಿರು ಕ್ರಾಂತಿ ಮಂತ್ರ ಹೇಳಿಕೊಡುವ ಮೂಲಕ ದಲಿತ ಕುಟುಂಬದಲ್ಲಿ ಜನಿಸಿದ ಡಾ.ಬಾಬು ಜಗಜೀವನ ರಾಮ ದೇಶದ ಬಹು ದೊಡ್ಡ ಶಕ್ತಿಯಾಗಿದ್ದರು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್ ಮಾತನಾಡಿ, ಯಾವುದೇ ಪ್ರಭಾವವಿಲ್ಲದೇ ತಾವು ಪಡೆದ ಶಿಕ್ಷಣದಿಂದಲೇ ಮಾತ್ರ ಉನ್ನತ ಹುದ್ದೆಗಳನ್ನು ಪಡೆಯಬಹುದು ಎಂಬುದನ್ನು ತೋರಿಸಿಕೊಟ್ಟವರು ಜಗಜೀವನರಾಮ ಅವರು. ದಲಿತ ಸಮುದಾಯದ ಇಂದಿನ ಬದಲಾವಣೆಗೆ ಮತ್ತು ಸ್ಥಿತಿಗತಿಗಳ ಬದಲಾವಣೆಗೆ ಜಗಜೀವನರಾಮ ಕಾರಣರು. ಅನೇಕ ಹುದ್ದೆಗಳನ್ನು ಪಡೆದ ಇವರು ಪ್ರಜಾಪ್ರಭುತ್ವದ ಮೂಲ ತತ್ವಗಳನ್ನು ಎತ್ತಿ ಹಿಡಿದು ಸಂವಿಧಾನದಲ್ಲಿ ಸಾಮಾಜಿಕ ನ್ಯಾಯವನ್ನು ರೂಪಿಸಿದ ಕೀರ್ತಿ ಇವರಿಗೆ ಸಲ್ಲಬೇಕು.ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ಬಾಬು ಜಗಜೀವನ್ರಾಮ ಅವರು ದೇಶದ ಉಪಪ್ರಧಾನಿಗಳಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಹಲವಾರು ಕಾರ್ಯಕ್ರಮಗಳು ಇಂದಿಗೂ ಜನಪರವಾಗಿವೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ, ಎಇಇ ಮುಜಾಮಿಲ್ ಅಲಂ, ನಗರಸಭೆಯ ಸದಸ್ಯೆ ಪಾರ್ವತಿ ಪವಾರ, ನೈರ್ಮಲ್ಯ ನಿರೀಕ್ಷಕ ಶಿವರಾಜಕುಮಾರ, ಪ್ರವೀಣ ಸೇರಿದಂತೆ ಅನೇಕರು ಹಾಜರಿದ್ದರು.