ಶಹಾಬಾದ : ಇತ್ತಿಚ್ಚಿಗೆ ಬಿಟ್ಟು ಬಿಡದೇ ಸುರಿದ ಮಳೆಯಿಂದ ಬಿತ್ತಿ ಬೆಳೆದ ರೈತನ ಬೆಳೆ ನೀರಿನಿಂದ ಜಲಾವೃತಗೊಂಡು ಅಪಾರ ಹಾನಿಯನ್ನುಂಟು ಮಾಡಿದೆ.ತಾಲೂಕಿನ ಸುತ್ತಮುತ್ತಲಿನ ಹೊಲದಲ್ಲಿ ಬೆಳೆದ ಬೆಳೆ ಸಂಪೂರ್ಣವಾಗಿ ನಾಶವಾದ ಪರಿಣಾಮ ರೈತರು ಸಂಕಷ್ಟ ಅನುಭವಿಸುವಂತಾಗಿದೆ.
ಜೂನ್ ತಿಂಗಳಲ್ಲಿ ಭೂಮಿಯಲ್ಲಿ ಬೀಜ ಬಿತ್ತಿದ ನಂತರ ಮಳೆ ಬಾರದೇ ಸಂಕಷ್ಟದಲ್ಲಿದ್ದರು. ನಂತರ ಸುರಿದ ಅಲ್ಪ ಮಳೆಗೆ ಮೊಳಕೆ ಒಡೆದು ಬಂದ ಬೆಳೆ ಬಾಡುವ ಹೊತ್ತಿಗೆ ಮಳೆ ಬಂದಿದ್ದರಿಂದ ತುಸು ಬೆಳೆಗಳಿಗೆ ಜೀವ ಬಂದಿತು. ಆದರೆ ಕಳೆದ ಹದಿನೈದು ದಿನಗಳ ಹಿಂದಷ್ಟೇ ಬಿಟ್ಟು ಬಿಡದೇ ದಿನಾಲೂ ಸುರಿದ ಮಳೆಯಿಂದ ತಾಲೂಕಿನ ಬಹುತೇಖ ಮುತ್ತಗಿ,ಮರತೂರ, ಭಂಕೂರ, ತೊನಸನಹಳ್ಳಿ, ಗೋಆ(ಕೆ), ಶಂಕರವಾಡಿ, ಹೊನಗುಂಟಾ ಗ್ರಾಮದ ರೈತರು ಬೆಳೆದ ಬೆಳೆ ನಾಶವಾಗಿ ರೈತ ಕಣ್ಣೀರು ಸುರಿಸುವಂತಾಗಿದೆ. ಸಾಲ ಮಾಡಿ ಬೀಜ,ಗೊಬ್ಬರ್ ಹಾಗೂ ಕ್ರಿಮಿನಾಶಕ ಖರೀದಿಸಿದ ರೈತ ಬೆಳೆ ಬಾರದಿರುವುದರಿಂದ ಸಾಲ ಸೂಳಿಯಲ್ಲಿ ಸಿಲುಕಿದಂತಾಗಿದೆ. ಜೂನ್ ತಿಂಗಳಿನಿಂದ ನಿರಂತರವಾಗಿ ಮಳೆ ಬಂದ ಪರಿಣಾಮ ಬಿತ್ತನೆ ಮಾಡಲು ಅವಕಾಶ ಸಿಗಲಿಲ್ಲ.
ಹೊಲದಲ್ಲಿ ನೀರು ನಿಂತು ಬಿತ್ತನೆಗೂ ತೊಂದರೆಯಾಗಿತ್ತು.ಇದರಿಂದ ಮುಂಗಾರು ಬೆಳೆಗಳಾದ ಹೆಸರು, ಉದ್ದು ಸಂಪೂರ್ಣ ಬಿತ್ತಲಾರದೇ ತೊಂದರೆಗೆ ರೈತರು ಒಳಗಾದರು. ಆದರೆ ಜುಲೈ ತಿಂಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ, ಹೊಲ ಗಾಳಿಯಾಡಿದ್ದರಿಂದ ರೈತರು ತೊಗರಿ ಬಿತ್ತನೆ ಮಾಡಿದರು.
ಅಲ್ಲದೇ ಬೀಜವೂ ಮೊಳಕೆಯೊಡೆದು ಎರಡು ಎಲೆ ಬಿಟ್ಟಿದ್ದ ಬೆಳೆಯನ್ನು ಕಂಡು ರೈತರು ಸಂತಸದಲ್ಲಿದ್ದರು.ಆದರೆ ಮತ್ತೆ ಸುರಿದ ನಿರಂತರ ಮಳೆಯಿಂದ ರೈತರ ಹೊಲಗಳಲ್ಲಿ ನೀರು ಜಮಾವಣೆಗೊಂಡು ಅಲ್ಪಸ್ವಲ್ಪ ಉಳಿದ ಬೆಳೆಗಳ ಬೇರು ಕೊಳೆತು ನಾಶವಾಗಿದೆ.ಅಲ್ಲದೇ ತೇವಾಂಶ ಹೆಚ್ಚಾಗಿ ತೊಗರಿ, ಹತ್ತಿ, ಸಂಪರ್ಣ ಹಾಳಾಗಿದೆ. ಇದರಿಂದ ರೈತ ಆರ್ಥಿಕ ಸಂಕಷ್ಟದಲ್ಲಿ ತೊಳಲಾಡುತ್ತಿದ್ದಾನೆ.ಅವನ ನೆರವಿಗೆ ಸರಕಾರ ಬರಬೇಕಿದೆ. ಇತ್ತ ಸಂಬಂಧಪಟ್ಟ ಅಧಿಕಾರಿಗಳು ಧಾವಿಸಿ ಹಾನಿಯಾದ ಬೆಳೆಗಳ ಸಮೀಕ್ಷೆ ನಡೆಸಬೇಕು.ಅಲ್ಲದೇ ಹಾನಿಯಾದ ರೈತರಿಗೆ ಪರಿಹಾರ ಧನ ನೀಡಬೇಕು ಎಂಬುದು ಹೊನಗುಂಟಾ ರೈತ ರಾಜೇಶ ಯನಗುಂಟಿಕರ್ ಆಗ್ರಹಿಸಿದ್ದಾರೆ.