ಆಳಂದ: ಚುನಾವಣೆ ಸಮಯದಲ್ಲಿ ಜನರ ದಿಕ್ಕು ತಪ್ಪಿಸಲು ಮಾಜಿ ಶಾಸಕ ಬಿ ಆರ್ ಪಾಟೀಲ ಪಾದಯಾತ್ರೆ ನಾಟಕ ಶುರು ಮಾಡಿದ್ದಾರೆಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತಡಕಲ ಗ್ರಾ.ಪಂ ವ್ಯಾಪ್ತಿಯಲ್ಲಿ ರೈತರು ತಮ್ಮ ಸ್ವಂತ ಹಣದಿಂದ ತಮ್ಮ ಹೊಲಗಳಿಗೆ ಹೋಗಲು ಜೆಸಿಬಿ ಹಚ್ಚಿ ಕೆಲಸ ಮಾಡಿಕೊಳ್ಳುತ್ತಿದ್ದಾರೆ ಇಲ್ಲಿಯವರೆಗೆ ಗ್ರಾ.ಪಂ ವತಿಯಿಂದ ಜೆಸಿಬಿ ಹಚ್ಚಿರುವುದರ ಕುರಿತು ಹಣವೂ ಪಾವತಿಯಾಗಿರುವುದಿಲ್ಲ ಚುನಾವಣೆ ಹತ್ತಿರ ಬಂದಾಗೊಮ್ಮೆ ಈ ರೀತಿ ಆರೋಪಗಳನ್ನು ಮಾಡುವುದು ನಮ್ಮ ಗೂಬೆ ಕೂರಿಸುವುದು ಅವರ ಚಾಳಿಯಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಆಳಂದ ತಾಲೂಕಿನಲ್ಲಿ ಯಂತ್ರಗಳನ್ನು ಬಳಸಿ ನರೇಗಾ ಯೋಜನೆಯಲ್ಲಿ ಕಾಮಗಾರಿ ಮಾಡಿಸಿರುವುದು ಅವರದೇ ಸ್ವಂತ ಗ್ರಾಮ ಸರಸಂಬಾ ಪಂಚಾಯತಿಯಿಂದಲೇ ಆರಂಭ ಮಾಡಿರುವುದು ತಾಲೂಕಿನ ಜನತೆಗೆ ಗೊತ್ತಿರುವ ವಿಚಾರವೇ ಅಲ್ಲದೇ ಒಂದೇ ದಿನದಲ್ಲಿ ಕೋಟ್ಯಾಂತರ ರೂ, ಹಣ ಡ್ರಾ ಮಾಡಿ ಅದು ಲೋಕಾಯುಕ್ತ ತನಿಖೆಗೂ ಹೋಗಿದ್ದು ಇದೆ. ತಡಕಲ ಗ್ರಾ.ಪಂ ವ್ಯಾಪ್ತಿಯಲ್ಲಿ ಯಾವ ಕಾಮಗಾರಿಯೂ ನಿಯಮ ಮೀರಿ ನಡೆದಿಲ್ಲ ಕೇವಲ ಚುನಾವಣೆ ದೃಷ್ಟಿಯಿಂದ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಾಜಿ ಶಾಸಕ ಬಿ ಆರ್ ಪಾಟೀಲ ಆರೋಪ ಮಾಡುತ್ತಿರುವುದು ನೋಡಿದರೇ ಭೂತದ ಬಾಯಲ್ಲಿ ಭಗ್ವದ್ಗೀತೆ ಕೇಳಿದಂತಾಗುತ್ತಿದೆ ಅಲ್ಲದೇ ಈಗಲೂ ಸರಸಂಬಾ ಪಚಾಯತಿ ವ್ಯಾಪ್ತಿಯಲ್ಲಿ ಯಂತ್ರಗಳನ್ನು ಬಳಸಿಯೇ ಕಾಮಗಾರಿ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.