ಕಲಬುರಗಿ: 2022-23ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯು ಶುಕ್ರವಾರದಿಂದ ಪ್ರಾರಂಭಗೊಂಡಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಡಿ. ಬದೋಲೆ ಅವರು ಕಲಬುರಗಿ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಾದ ಸೆಂಟ್ ಮೇರಿ ಪ್ರೌಢ ಶಾಲೆ, ವಿಜಯ ವಿದ್ಯಾಲಯ ಪ್ರೌಢಶಾಲೆ, ಅವರಾದ (ಬಿ) ಸರಕಾರಿ ಪ್ರೌಢ ಶಾಲೆ ಹಾಗೂ ಅಂಬಿಕಾ ನಗರದಲ್ಲಿರುವ ವಿನಾಯಕ ಶಾಲೆಯಲ್ಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಲಬುರಗಿಯ ಅಂಬಿಕಾ ನಗರದಲ್ಲಿರುವ ವಿನಾಯಕ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಕ್ಕೆ ಅವರು ಭೇಟಿ ನೀಡಿದಾಗ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಬೇಕಾದ ವಿದ್ಯಾರ್ಥಿಯ ಬದಲಾಗಿ ಬೇರೆ ವಿದ್ಯಾರ್ಥಿಯು ಪರೀಕ್ಷೆ ಬರೆಯುತ್ತಿರುವುದು ಕಂಡು ಬಂದಿರುತ್ತದೆ. ಕೂಡಲೇ ಈ ಅಭ್ಯರ್ಥಿಯನ್ನು ಡಿಬಾರ್ ಮಾಡಿ ಬದಲಿ ಪರೀಕ್ಷೆಯನ್ನು ಬರೆಯುತ್ತಿರುವ ಅಭ್ಯರ್ಥಿ ಹಾಗೂ ಪರೀಕ್ಷೆಗೆ ನೋಂದಣಿಯಾದ ಅಭ್ಯರ್ಥಿಯ ವಿರುದ್ಧ ಸಂಬಂಧಪಟ್ಟ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕೆಂದು ಅಲ್ಲೇ ಹಾಜರಿದ್ದ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ಇತರೆ ಅಧಿಕಾರಿಗಳು ಇನ್ನು ಬಾಕಿ ಉಳಿದ ವಿವಿಧ ವಿಷಯಗಳ ಎಸ್.ಎಸ್.ಎಲ್.ಸಿ. ಪರೀಕ್ಷೆ ಸಂದರ್ಭದಲ್ಲಿ ಈ ರೀತಿ ಪ್ರಕರಣವು ಮರುಕಳಿಸದಂತೆ ಮುಂಜಾಗೃತ ಕ್ರಮ ಕೈಗೊಳ್ಳಬೇಕೆಂದು ಅವರು ಸೂಚಿಸಿದರು.
ಫ್ರೆಶರ್ಸ್ ಹಾಗೂ ರಿಪೀಟರ್ಸ್ ಹಾಗೂ ಪ್ರಾವೇಟ್ ಸೇರಿ ಒಟ್ಟು 45151 ವಿದ್ಯಾರ್ಥಿಗಳಲ್ಲಿ 1990 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, ಒಟ್ಟು 43161 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದೇರ್ಶಕರು ತಿಳಿಸಿದ್ದಾರೆ.