ನಾಳೆಯಿಂದ “ಐ ನೋ ಮೈ ಬೂತ್” ವಿಭಿನ್ನ ಅಭಿಯಾನಕ್ಕೆ ಕಲಬುರಗಿ ಡಿಸಿ ಕರೆ

0
23

ಕಲಬುರಗಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಲು ಇದೇ ಏಪ್ರಿಲ್ 29 ಮತ್ತು 30 ರಂದು ಜಿಲ್ಲೆಯಲ್ಲಿ ಸ್ವೀಪ್ ಜಾಗೃತಿಯ ವಿಶೇಷ ಕಾರ್ಯಕ್ರಮಗಳು ಆಯೋಜಿಸಿದ್ದು, ಏಪ್ರಿಲ್ 29 ರಂದು ಮತಗಟ್ಟೆಗೆ ಹೋಗಿ ಸೆಲ್ಫಿಗಳನ್ನು ತೆಗೆದುಕೊಂಡು #ಐ ನೋ ಮೈ ಬೂತ್ (ನನ್ನ ಮತಗಟ್ಟೆ ನನಗೆ ಗೊತ್ತು) ಹ್ಯಾಶಟ್ಯಾಗ್‍ನೊಂದಿಗೆ ಟ್ವಿಟರ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ಮತದಾನ ಜಾಗೃತಿಗೆ ಸಹಕರಿಸುವಂತೆ ಯುವ ಮತ್ತು ಮಹಿಳಾ ಮತದಾರರಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಕರೆ ನೀಡಿದ್ದಾರೆ.

ಶುಕ್ರವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮತದಾನ ದಿನದಂದು ವಿಶೇಷವಾಗಿ ಯುವ ಸಮೂಹ, ಮಹಿಳೆಯರು ಮತದಾನ ಕೇಂದ್ರದ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲದೆ ಮತ ಚಲಾಯಿಸುವುದಿಲ್ಲ್ಲ. ಇದನ್ನು ತಪ್ಪಿಸಲು ಮತದಾನ ದಿನದ ಮುನ್ನವೆ ಮತಗಟ್ಟೆ ಹೋಗಿ ದೃಢೀಕರಿಸಿಕೊಳ್ಳುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ಶನಿವಾರ ಜಿಲ್ಲೆಯ ಎಲ್ಲಾ ಮತಗಟ್ಟೆಗಳು ತೆರೆದಿರಲಿವೆ. ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಎಲ್ಲರು ಸಡಗರದಿಂದ ಭಾಗವಹಿಸಬೇಕು ಮತ್ತು ಮತದಾನವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

Contact Your\'s Advertisement; 9902492681

ಈ ಬಾರಿ ಮತದಾನ ದಿನದಂದು ಮತಗಟ್ಟೆಯಲ್ಲಿ ಕುಡಿಯುವ ನೀರು, ವಾಹನ ಪಾರ್ಕಿಂಗ್, ನೆರಳು, ಮೂಲಸೌಕರ್ಯ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿಶೇಷಚೇತನರಿಗೆ ರ್ಯಾಂಪ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

72 ಆಕರ್ಷಕ ಮತಗಟ್ಟೆಗಳು: ಮಹಿಳೆಯರು, ವಿಶೇಷಚೇತನರು ಹಾಗೂ ಯುವ ಸಮೂಹವನ್ನು ಮತಗಟ್ಟೆಯತ್ತ ಆಕರ್ಷಿಸಲು ಜಿಲ್ಲೆಯಾದ್ಯಂತ 72 ಮತಗಟ್ಟೆಗಳು ವಿವಿಧ ಬಣ್ಣಗಳಿಂದ ಸಿಂಗಾರಗೊಳ್ಳುತ್ತಿವೆ. ವಾಲ್ ಪೇಂಟಿಂಗ್ ಕಾರ್ಯ ಸಹ ನಡೆದಿದೆ. ವಿಶೇಷವಾಗಿ ಮಹಿಳಾ ಮತದಾರರನ್ನು ಆಕರ್ಷಿಸಲು ಪ್ರತಿ ವಿಧಾನಸಬಾ ಕ್ಷೇತ್ರಕ್ಕೆ 5 ರಂತೆ ಜಿಲ್ಲೆಯಾದ್ಯಂತ 45 ಮಹಿಳಾ ಸಖಿ ಪಿಂಕ್ ಬೂತ್ ಸ್ಥಾಪಿಸಲಾಗುತ್ತಿದ್ದು, ಇಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗಳು ಮಹಿಳೆಯರು ಇರಲಿದ್ದಾರೆ. ಅದೇ ರೀತಿ ಜಿಲ್ಲೆಯ ಪ್ರತಿ ವಿಧಾನಸಭೆಗೆ ತಲಾ ಒಂದರಂತೆ ಯುವ ಬೂತ್, ವಿಶೇಷಚೇತನ ಬೂತ್ ಹಾಗೂ ಸ್ಥಳೀಯ ಇತಿಹಾಸ ಸಾರುವ ವಿಶೇಷ ಬೂತ್‍ಗಳು ಇರಲಿವೆ.

1,300 ಜನ ಹಿರಿಯ ಜೀವಿಗಳು ಮನೆಯಿಂದಲೆ ಮತದಾನ: ಜಿಲ್ಲೆಯಾದ್ಯಂತ 80 ವರ್ಷ ಮೇಲ್ಪಟ್ಟ 1,300 ಜನ ಮನೆಯಿಂದಲೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಲು ಇಚ್ಚಿಸಿದ್ದು, ಅವರಿಗಾಗಿ 69 ತಂಡ ರಚಿಸಲಾಗಿದೆ. ಈ ತಂಡ ಪೋಲಿಂಗ್ ಏಜೆಂಟ್‍ರೊಂದಿಗೆ ಮತದಾರರ ಮನೆಗೆ ಹೋಗಿ ಅವರಿಂದ ಪೋಸ್ಟಲ್ ಬ್ಯಾಲೆಟ್ ಮತ ಪಡೆಯಲಿದ್ದಾರೆ.

ಜಿಲ್ಲೆಯಾದ್ಯಂತ 22,18,055 ಮತದಾರರು: ಕಲಬುರಗಿ ಜಿಲ್ಲೆಯಾದ್ಯಂತ 2,383 ಮತದಾನ ಕೇಂದ್ರ ಸ್ಥಾಪಿಸಲಾಗಿದ್ದು, 11,21,972 ಪುರುಷರು, 10,95,754 ಮಹಿಳೆಯರು ಹಾಗೂ ಇತರೆ 329 ಸೇರಿ 22,18,055 ಮತದಾರರು ಮತ ಚಲಾಯಿಸಲು ಅರ್ಹರಿದ್ದಾರೆ. ಕಳೆದ ಜನವರಿಯಲ್ಲಿ ಪ್ರಕಟಗೊಂಡ ಅಂತಿಮ ಮತದಾರರ ಪಟ್ಟಿಯಲ್ಲಿ ಜಿಲ್ಲೆಯಾದ್ಯಂತ 21,71,211 ಮತದಾರರಿದ್ದರು. ವಿಧಾನಸಭೆ ಚುನಾವಣೆ ಘೋಷಣೆ ನಂತರ ಏಪ್ರಿಲ್ 10ರ ವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ನೀಡಿದ್ದರಿಂದ 46,844 ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ ಎಂದು ಡಿ.ಸಿ. ಯಶವಂತ ವಿ. ಗುರುಕರ್ ಮಾಹಿತಿ ನೀಡಿದರು.

ಸ್ವೀಪ್ ಜಾಗೃತಿ ವೈವಿಧ್ಯಮಯ ಕಾರ್ಯಕ್ರಮಗಳು: ಸ್ವೀಪ್ ಜಾಗೃತಿ ಅಭಿಯಾನ ಅಂಗವಾಗಿ ಏಪ್ರಿಲ್ 29 ಮತ್ತು 30 ರಂದು ಜಿಲ್ಲೆಯ ಎಲ್ಲಾ ಮತಗಟ್ಟೆಗಳು ತೆರೆದಿರಲಿವೆ. ಮತದಾರ ಮತಗಟ್ಟೆಗೆ ಹೋಗಿ ಮತದಾನ ಕೇಂದ್ರ ದೃಢೀಕರಿಸಿಕೊಳ್ಳಬೇಕು. ಇದಕ್ಕಾಗಿ ಶಾಲಾ ಮತಗಟ್ಟೆಗಳಿರುವ ಶಾಲೆಗಳ ಮಕ್ಕಳಿಗೆ ತಮ್ಮ ಪೋಷಕರನ್ನು ಮತ್ತು ಸಂಬಂಧಿಗಳನ್ನು ಮತಗಟ್ಟೆಗೆ ಕರೆತರುವಂತೆ ಕೋರಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಮತ್ತು ಸ್ವೀಪ್ ನೋಡಲ್ ಅಧಿಕಾರಿ ಡಾ.ಗಿರೀಶ್ ಡಿ. ಬದೋಲೆ ಹೇಳಿದರು.

ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿ, ಅಂಗನವಾಡಿ-ಆಶಾ ಕಾರ್ಯಕರ್ತೆಯರು, ಎನ್.ಆರ್.ಎಲ್. ಎಂ. ಸದಸ್ಯರು ಮತ್ತು ನಗರ ಪ್ರದೇಶದಲ್ಲಿ ಕಂದಾಯ ನಿರೀಕ್ಷಕರು, ಪೌರ ಸಂಸ್ಥೆ ಸಿಬ್ಬಂದಿ, ಎಸ್.ಎಚ್.ಜಿ ಸದಸ್ಯರು ಮತದಾರರನ್ನು ಮತಗಟ್ಟೆಗೆ ಕರೆತರಲಿದ್ದಾರೆ.

ಇನ್ನು ಏಪ್ರಿಲ್ 30 ರಂದು ಮತಗಟ್ಟೆ ಹಂತದಲ್ಲಿ ಮತದಾನ ಮಾಹಿತಿ, ಟೋಲ್ ಫ್ರೀ ಸಂ. 1950, ವೋಟರ್ ಹೆಲ್ಪ್‍ಲೈನ್, ಸಕ್ಷಮ್, ಸಿ-ವಿಜಿಲ್ ತಂತ್ರಾಂಶಗಳ ಪರಿಚಯ, ಧ್ವಜಾರೋಹಣ, ಸಹಿ ಅಭಿಯಾನ ನಡೆಯಲಿದೆ. ಗ್ರಾಮ ಪಂಚಾಯತ ಹಂತದಲ್ಲಿ ಜಾಥಾ, ಪ್ರಭಾತ್ ಫೇರಿ, ರಂಗೋಲಿ ಮತ್ತು ಮೆಹಂದಿ ಸ್ಪರ್ಧೇ, ಮನೆ-ಮನೆಗೆ ಭೇಟಿ ನೀಡಿ ಮತದಾನ ಜಾಗೃತಿ ಮೂಡಿಸಲಾಗುತ್ತದೆ. ತಾಲೂಕಾ ಹಂತದಲ್ಲಿ ವಿಶೇಷಚೇತನರಿಂದ ಸೈಕಲ್-ಬೈಕ್ ರ್ಯಾಲಿ, ವಾಕಥಾನ್, ರಂಗೋಲಿ ಸ್ಪರ್ಧೇ ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸ್ವೀಪ್ ರಾಯಭಾರಿ ಇಂದುಮತಿ ಸಾಲಿಮಠ್ ಅವರೊಂದಿಗೆ ರೈಲು, ಬಸ್ ನಿಲ್ದಾಣದಲ್ಲಿ ಜಾಗೃತಿ ಕಾರ್ಯಕ್ರಮ, ಎಲ್.ಇ.ಡಿ. ಡಿಸ್ಪ್ಲೆ, ಜಾಥಾ, ಕಾಲೇಜು ವಿದ್ಯಾರ್ಥಿಗಳಿಂದ ಫ್ಲ್ಯಾಶ್ ಮಾಬ್ ಡ್ಯಾನ್ಸ್, ಕಲಾ ತಂಡಗಳಿಂದ ಬೀದಿ ನಾಟಕ ಮತ್ತು ಜಾನಪದ ಸಂಗೀತ, ಸೈಕಲ್ ಮತ್ತು ಬೈಕ್ ರ್ಯಾಲಿ, ರಂಗೋಲಿ ಸ್ಪರ್ಧೇ ಆಯೋಜಿಸಿ ಕೊನೆಯದಾಗಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಮತದಾನ ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮಗಳು ಜರುಗಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here