ವಾಡಿ: ಚಿತ್ತಾಪುರ ವಿಧಾನಸಭಾ ಮೀಸಲು ಮತಕ್ಷೇತ್ರದಲ್ಲಿ ಮಾದಿಗ ದಂಡೋರಾ ಮೀಸಲಾತಿ ಹೋರಾಟ ಸಮಿತಿಯು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರನ್ನು ಬೆಂಬಲಿಸುತ್ತದೆ ಎಂದು ಮಾದಿಗ ದಂಡೋರಾ ಮೀಸಲಾತಿ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷ ಗುರುನಾಥ ಮಣಿಗಿರಿ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡುವ ಮೂಲಕ ತಮ್ಮ ನಿಲುವು ಸ್ಪಷ್ಟಪಡಿಸಿರುವ ಗುರುನಾಥ ಮಣಿಗಿರಿ, ದೇಶದಲ್ಲಿ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ಕೋಮುವಾದ ತಾಂಡವಾಡಲು ಬಿಜೆಪಿ ಸರ್ಕಾರ ಕಾರಣವಾಗಿದೆ. ಚಿತ್ತಾಪುರ ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವ ಸೃಷ್ಠಿಯಾಗಲು ಪ್ರಿಯಾಂಕ್ ಖರ್ಗೆ ಅವರ ಜನಪರ ಕಾಳಜಿ ಕಾರಣವಾಗಿದೆ. ಖರ್ಗೆ ಯಾವತ್ತೂ ಜಾತಿ ರಾಜಕಾರಣ, ದ್ವೇಷ ರಾಜಕಾರಣ ಮಾಡಿದವರಲ್ಲ. ಕೋಮುವಾದವನ್ನು ಪೋಷಿಸಿದವರಲ್ಲ.
ಜನರ ಕಣ್ಣು ಕುಕ್ಕುವಂತೆ ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ್ದಾರೆ. ಇದನ್ನು ಸಹಿಸದ ಬಿಜೆಪಿಯವರು ಓರ್ವ ಪ್ರಜ್ಞಾವಂತ, ಪ್ರಾಮಾಣಿಕ, ಜನ ಸೇವಕ ಪ್ರಿಯಾಂಕ್ ಖರ್ಗೆಯವರನ್ನು ಸೋಲಿಸಲು ತಂತ್ರಗಳನ್ನು ಹಣೆಯುತ್ತಿದ್ದಾರೆ. ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಹರಿಬಿಟ್ಟು ಜನರ ದಿಕ್ಕು ತಪ್ಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಪ್ರಗತಿಪರ ಚಿಂತಕ ಪ್ರಿಯಾಂಕ್ ಖರ್ಗೆ ಅವರ ಬೆಂಬಲಕ್ಕೆ ಮಾದಿಗ ದಂಡೋರಾ ಮೀಸಲಾತಿ ಹೋರಾಟ ಸಮಿತಿ ನಿಂತಿದೆ. ಬಿಜೆಪಿಯಲ್ಲಿರುವ ಕೆಲ ಮಾದಿಗ ಸಮುದಾಯದ ನಾಯಕರು ಸಮಾಜದ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಇದನ್ನು ಮಾದಿಗ ಸಮುದಾಯ ನಂಬಬಾರದು. ಈ ಸಲವೂ ಪ್ರಿಯಾಂಕ್ ಖರ್ಗೆಯವರೇ ಗೆಲ್ಲುವುದು ನೂರಕ್ಕೆ ನೂರು ಖಚಿತ ಎಂದು ತಿಳಿಸಿದ್ದಾರೆ.