ಪ್ರತಿ ಗ್ರಾಮ ಪಂಚಾಯಿತಿಗೆ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪನೆ: ಸಚಿವ ಕೆ.ಎನ್.ರಾಜಣ್ಣ

0
22

ಕಲಬುರಗಿ: ರೈತಾಪಿ ವರ್ಗಕ್ಕೆ ಅನುಕೂಲವಾಗಲು ಪ್ರತಿ ಗ್ರಾಮ ಪಂಚಾಯಿತಿಗೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ (ಪಿಕೆಪಿಎಸ್) ಸಂಘಗಳನ್ನು ರಚಿಸುವುದಾಗಿ ರಾಜ್ಯದ ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.

ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಹಕಾರ ಇಲಾಖೆಯ ಕಲಬುರಗಿ ಪ್ರಾಂತ್ಯದ ಪ್ರಗತಿ ಪರಿಶೀಲನೆ ಸಭೆ ನಡೆಸಿದ‌ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವೈದ್ಯನಾಥನ್ ವರದಿ ಪ್ರಕಾರ ಪ್ರತಿ ಗ್ರಾಮ ಪಂಚಾಯತಿ ಕೇಂದ್ರಕ್ಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಇರಬೇಕೆಂದು ತಿಳಿಸಿದ್ದು, ಅದರಂತೆ ಸ್ಥಾಪಿಸಲಾಗುವುದು ಎಂದರು.

Contact Your\'s Advertisement; 9902492681

ಈಗ ಗ್ರಾಮ ಪಂಚಾಯಿತಿಗೊಂದು ಸಂಘಗಳಿಲ್ಲ. ಎಲ್ಲ ಗ್ರಾಮ ಪಂಚಾಯತಿ ಯಲ್ಲಿ ಸಂಘಗಳು ರಚನೆಯಾದಲ್ಲಿ ಎಲ್ಲ ರೈತರಿಗೆ ಸಮರ್ಪಕ ಸಹಾಯ ಕಲ್ಪಿಸಲು ಅನುಕೂಲವಾಗುತ್ತದೆ. ಹೊ‌ಸ ಸಂಘಗಳ ರಚನೆ ಕಾರ್ಯ ಆದಷ್ಟು ಬೇಗನೇ ಕೈಗೆತ್ತಿಕೊಳ್ಳಲಾಗುವುದು. ಇಂದಿನ ಸಭೆಯಲ್ಲಿ ಡಿಸೆಂಬರ್ ಒಳಗೆ ಗ್ರಾಮ ಪಂಚಾಯಿತಿವಾರು ಸಂಘಕ್ಕೆ ಗ್ರಾಮ ಪಂಚಾಯತಿವಾರು ಗಡಿ ಗುರುತಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ರಾಜ್ಯದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಅಥವಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಜತೆಗೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳನ್ನು ಸಹಕಾರ ಸಂಘದ 128( ಎ) ಅನ್ವಯ ಸೇವಾ ಭದ್ರತೆ ಕಲ್ಪಿಸಲು ಉದ್ದೇಶಿಸಲಾಗಿದೆ. ಪಿಕೆಪಿಸ್ ಆಡಳಿತ ಮಂಡಳಿ ಅವಕೃಪೆಗೆ ಒಳಗಾದರೆ ಕಾರ್ಯದರ್ಶಿ ಮನೆಗೆ ಹೋಗುವ ಪರಿಸ್ಥಿತಿ ಈಗಿದೆ. ಇದನ್ನು ತಪ್ಪಿಸಲು ಮತ್ತು ಅವರಿಗೆ ಸೇವಾ ಭದ್ರತೆ ಕಲ್ಪಿಸುವುದರ ಜತೆಗೇ ಕೆಲವು ಜವಾಬ್ದಾರಿಗಳನ್ನು ವಹಿಸಲು ರೂಪು ರೇಷೆ ಸಿದ್ಧಮಾಡಲಾಗುತ್ತಿದೆ ಎಂದು ಸಚಿವರು ಸ್ಪಷ್ಟ ಪಡಿಸಿದರು.

6,000 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಗಳು ಹಾಗೂ 15,500 ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳನ್ನು ಯಾವ ಮಾನದಂಡದ ಮೇಲೆ ಸೇವಾ ಭದ್ರತೆ ಕಲ್ಪಿಸಬೇಕೆಂಬುದನ್ನು ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಿ ಅಂತಿಮಗೊಳಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

ಕಲಬುರಗಿ ವಿಭಾಗದಲ್ಲಿ ಉಪನಿಬಂಧಕರು ಹಾಗೂ ಸಹಾಯಕ ಉಪ ನಿಬಂಧಕರು ಪ್ರಭಾರಿಯಲ್ಲೇ ಇದ್ದು, ಶೀಘ್ರದಲ್ಲೇ ಪೂರ್ಣ ಪ್ರಮಾಣದ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಅಲ್ಲದೆ ಇಲಾಖೆಯ ಕಚೇರಿಗೆ ಸ್ವಂತ ಕಟ್ಟಡ ಭಾಗ್ಯ ನೀಡಲಾಗುವುದು ಎಂದರು.

ಅವ್ಯವಹಾರ ತನಿಖೆಗೆ: ಸಹಕಾರ ಇಲಾಖೆಯಲ್ಲಿ ನಡೆದ ಅವ್ಯವಹಾರ ತನಿಖೆ ನಡೆಯುತ್ತವೆ. ಆದರೆ ಮುಂದೆ ಕ್ರಮ ಜರುಗುವುದಿಲ್ಲ ಎಂಬ ವ್ಯಾಪಕ ದೂರಿನ ಹಿನ್ನೆಲೆಯಲ್ಲಿ ಸಾಲ ಹಂಚಿಕೆಯಲ್ಲಿ ಎಸಗಿರುವ ಅವ್ಯಹಾರ ಅವ್ಯವಹಾರ ಹಗರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಅವ್ಯವಹಾರ ಹಣ ಅವ್ಯವಹಾರ ಎಸಗಿರುವ ಸಿಬ್ಬಂದಿಗಳ ಆಸ್ತಿ ಮುಟ್ಟುಗೋಲು ಹಾಕಿ ಹಣ ವಸೂಲಿ ಮಾಡಲಾಗುವುದು. ಯಾರೇ ಎಷ್ಟೇ ದೊಡ್ಡವರಿದ್ದರೂ ತಪ್ಪಿತಸ್ಥರನ್ನು ರಕ್ಷಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಜಂಟಿ ನಿಬಂಧಕರ ಕಚೇರಿ ಕಲಬುರಗಿಗೆ: ಸಹಕಾರ ಸಂಘಗಳ ಜಂಟಿ ನಿಬಂಧಕರ ( ವಿಭಾಗೀಯ ಅಧಿಕಾರಿಗಳು) ಕಚೇರಿ ಪ್ರಸ್ತುತ ರಾಯಚೂರು ಕಚೇರಿಯಲ್ಲಿದ್ದು, ಇದನ್ನು ಕಲಬುರಗಿಗೆ ಸ್ಥಳಾಂತರಿಸಿದಲ್ಲಿ ಇಲಾಖೆ ದೃಷ್ಠಿಯಿಂದ ಅನುಕೂಲವಾಗಲಿದೆ‌ ಎಂಬ ಸುದ್ದಿಗಾರರ ಸಲಹೆಗೆ ಸ್ಪಂದಿಸಿದ ಸಚಿವ ಕೆ.ಎನ್.ರಾಜಣ್ಣ ಅವರು ಕಲಬುರಗಿಗೆ ಶೀಘ್ರವಾಗಿ ಸ್ಥಳಾಂತರಿಸಲಾಗುವುದು ಎಂದರು.

ಬಡ್ಡಿ ಹಣ ಬಿಡುಗಡೆ: ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕಿಗೆ ರೈತರಿಗೆ ನೀಡಲಾದ‌ ಸಾಲದ‌ ಮೇಲಿನ ಬಡ್ಡಿ ಬಾಕಿ ಹಣ 22 ಕೋಟಿ ರೂ. ಎರಡ್ಮೂರು‌ ದಿನದಲ್ಲಿ ಬಿಡುಗಡೆ ಮಾಡುವುದರ ಜತೆಗೇ ಇತರ ಕ್ರಮಗಳ ಮೂಲಕ ಬ್ಯಾಂಕ್ ಪುನಶ್ಚೇತನಗೊಳಿಸಲಾಗುವುದು‌ ಎಂದು ತಿಳಿಸಿದರು.

ಅಲ್ಪವಾಧಿ ಮತ್ತು ದೀರ್ಘಾವಧಿ ಸಾಲದ ಮಿತಿ ಹೆಚ್ಚಳ:

ಡಿ.ಸಿ.ಸಿ. ಬ್ಯಾಂಕುಗಳಿಂದ ನೀಡಲಾಗುವ ಶೂನ್ಯ ಬಡ್ಡಿ ದರದಲ್ಲಿನ ಅಲ್ಪಾವಧಿ ಸಾಲ 3 ರಿಂದ 5 ಲಕ್ಷ ರೂ.ಗಳಿಗೆ ಮತ್ತು ಶೇ.3ರ‌ ಬಡ್ಡಿ ದರದ ದೀರ್ಘಾವಧಿ ಸಾಲ 10 ರಿಂದ 15 ಲಕ್ಷ ರೂ.ಗಳಿಗೆ ಹೆಚ್ಚಿಸಿದ್ದು, ಇದರಿಂದ ರೈತರು ಕೃಷಿಯೊಂದಿಗೆ ಉಪ ಕಸುಬು ಕೈಗೊಳ್ಳಲು ಸಹಕಾರಿಯಾಗಲಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಸಹಕಾರ ನಿಬಂಧಕ ಡಾ. ಕ್ಯಾಪ್ಟನ್ ಕೆ.ರಾಜೇಂದ್ರ, ಸಹಕಾರ ಸಂಘಗಳ ಅಪರ ನಿಬಂಧಕ ಕೆ.ಆಶಾ, ಪ್ರಕಾಶ ರಾವ್ ಹೆಚ್., ಬಾಲಶೇಖರ, ಲಿಂಗರಾಜು, ಜಂಟಿ ನಿಬಂಧಕರುಗಳಾದ ಎಸ್.ಮಹೇಶ, ಕಲ್ಲಪ್ಪ ಓಬಣ್ಣಗೋಳ, ಜಯಪ್ರಕಾಶ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here