ಶಹಾಬಾದ: ಆಜಾಧಿಕಾ ಅಮೃತ್ ಮಹೋತ್ಸವದ ಅಂಗವಾಗಿ ನಗರಸಭೆಯ ವತಿಯಿಂದ ನಗರದ ವ್ಯಾಪಾರಸ್ಥರಿಗೆ ಧ್ವಜವನ್ನು ವಿತರಣೆ ಮಾಡಿದ್ದು, ಎಲ್ಲರ ಮನದಲ್ಲಿ ದೇಶಾಭಿಮಾನ ಮತ್ತು ಮನೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಗೌರವ ಸಲ್ಲಿಸಬೇಕೆಂದು ನಗರಸಭೆಯ ಆರೋಗ್ಯ ನಿರೀಕ್ಷಕ ಶಿವರಾಜಕುಮಾರ ಜೆಟ್ಟೂರ್ ಹೇಳಿದರು.
ಅವರು ರವಿವಾರ ನಗರದಲ್ಲಿ ನಗರಸಭೆಯಿಂದ ಹರ್ ಘರ್ ತಿರಂಗ ಅಭಿಯಾನದ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜವನ್ನು ಸಾರ್ವಜನಿಕರಿಗೆ ವಿತರಿಸಿ ಮಾತನಾಡಿದರು.
ಎಲ್ಲಾ ಸಾರ್ವಜನಿಕರ ಮನೆಗಳ ಮೇಲೆ ಆಗಸ್ಟ್ 13 ರಿಂದ 15 ರವರೆಗೆ ಧ್ವಜಾರೋಹಣ ಮಾಡಿ ಹಗಲು ರಾತ್ರಿ ನಿರಂತರವಾಗಿ ಧ್ವಜ ಹಾರಿಸಿ ಆಗಸ್ಟ್ 15 ರ ಸಂಜೆ ಸೂರ್ಯಾಸ್ತದ ವೇಳೆಗೆ ಇಳಿಸಬೇಕು. ನಂತರ ಗೌರವಪೂರ್ವಕವಾಗಿ ಧ್ವಜವನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕೆಂದು ತಿಳಿಸಿದರು.
ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಅವಿರತ ಹೋರಾಟ ಮಾಡಿ ದಾಸದ ಸಂಕೋಲೆಯಿಂದ ಬಿಡುಗಡೆಯಾಗಿ ಭಾರತ ಸ್ವಾತಂತ್ರ್ಯಕ್ಕೆ 76 ವರ್ಷ ಪೂರ್ಣಗೊಂಡಿದೆ.ಈ ಹಿನ್ನೆಲೆ ಕೇಂದ್ರ ಸರಕಾರ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಸಂಭ್ರಮದಿಂದ ಇಡೀ ದೇಶದ ಜನರು ಆಚರಿಸಲು ತಿಳಿಸಿದೆ.ಆದ್ದರಿಂದ ಎಲ್ಲರೂ ತಮ್ಮ ಮನೆಯ ಮೇಲೆ ಧ್ವಜವನ್ನು ಹಾರಿಸುವ ಮೂಲಕ ದೇಶಾಭಿಮಾನ ತೋರಬೇಕೆಂದು ಹೇಳಿದರು.ಅಲ್ಲದೇ ಪ್ರತಿ ಧ್ವಜಕ್ಕೆ 25 ರೂ. ನಿಗಪಡಿಸಿದ್ದು, ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಆರೋಗ್ಯ ನಿರೀಕ್ಷಕರಾದ ಮೈಹಿನೋದ್ದಿನ್, ರಾಜೇಶ, ಸಿಬ್ಬಂದಿಗಳಾದ ವಿಜಯಕುಮಾರ, ಅನೀಲ ಹೊನಗುಂಟಿಕರ್, ಹುಣೇಶ ದೊಡ್ಡಮನಿ, ಪ್ರವೀಣ, ನಿರಂಜನ್, ಇದ್ದರು.