ವಚನ ಸಂವಿಧಾನದ ತಳಹದಿಯಲ್ಲೆ ಭಾರತದ ಸಂವಿಧಾನ ನಿರ್ಮಾಣ: ವಿಜಯಲಕ್ಷ್ಮೀ ಕೌಟಗೆ

0
253

ಕಲಬುರಗಿ: ಇಂದಿನ ದಿನಮಾನಗಳಲ್ಲಿ ಜ್ಞಾನ ಮತ್ತು ಕರಿಕ್ಯೂಲರ್ ಬೇಸ್ಡ್ ಕುರಿತಾಗಿ ಸಾಕಷ್ಟು ಮಾಹಿತಿ ಹೇಳಿಕೊಡಲಾಗುತ್ತಿದೆ. ಆದರೆ ಮಾನವೀಯತೆ ಬಗ್ಗೆ ಹೇಳಿಕೊಡುವುದು ಕಮ್ಮಿಯಾಗಿದೆ ಎಂದು ಕಲಬುರಗಿ ಜಿ.ಪಂ. ಸಿಇಒ ಡಾ. ಪಿ.ರಾಜಾ ಅಭಿಪ್ರಾಯಪಟ್ಟರು.

ಶಾಲಾ ಕಾಲೇಜುಗಳಲ್ಲಿ ಮಾನವೀಯ ಮೌಲ್ಯಗಳ ಕುರಿತು ಕಲಿಸಲಾಗುವುದಿಲ್ಲ. ಇವುಗಳು ನಮ್ಮ ಸಾಹಿತ್ಯದ ಮೂಲಕ ಕಲಿಯಬಹುದು. ಮಾನವೀಯ ಮೌಲ್ಯಗಳಿಂದ ಕೂಡಿದ  ವಚನ ಸಾಹಿತ್ಯದ ಅಧ್ಯಯನ ಮತ್ತು ಅಡವಳಿಕೆ ಅಗತ್ಯ ಎಂದು ಅವರು ಪ್ರತಿಪಾದಿಸಿದರು. ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ಶರಣರಾದ ಲಿಂಗಣ್ಣ ಸತ್ಯಂಪೇಟೆ ಹಾಗೂ ಸಿದ್ರಾಮಪ್ಪ ಬಾಲಪ್ಪಗೋಳ ಸ್ಮರಣಾರ್ಥ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮತತ್ವ  ಬಿತ್ತ ಬನ್ನಿ ಸರ್ವೋದಯಕ್ಕಾಗಿ ಮನಬೆಸೆದು ಮಾಡೋದಿದೆ ಮಾನವೀಕರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

‘ಮಾನವೀಯ ಚಿಂತನೆಯಲ್ಲಿ ವಚನ ಮತ್ತು ಸಂವಿಧಾನ ‘ ವಿಷಯ ಕುರಿತು ಶರಣ ಚಿಂತಕಿ ವಿಜಯಲಕ್ಷ್ಮೀ ಸಿ. ಕೌಟಗೆ ಮಾತನಾಡಿ, ಮನುಕುಲದ ಉದ್ದಾರಕ, ವಿಶ್ವಗುರು ಬಸವಣ್ಣನವರು, ಸಮಾಜದಲ್ಲಿ ಮಾನವೀಯ ಸಂಬಂಧವನ್ನು ಗಟ್ಟಿಗೊಳಿಸಿದರು ಎಂದು ತಿಳಿಸಿದರು. ವಚನ ಬಿಟ್ಟು ಸಂವಿಧಾನವಿಲ್ಲ. ಸಂವಿಧಾನ ಬಿಟ್ಟು ವಚನ ಸಾಹಿತ್ಯವಿಲ್ಲ.‌ ಆತ್ಮಗೌರವ, ಆತ್ಮವಿಶ್ವಾಸ, ಸ್ವಾಭಿಮಾನ ಕಲಿಸಿಕೊಡುವ ವಚನಗಳ ಆಶಯವನ್ನು ನಮ್ಮ ಭಾರತದ ಸಂವಿಧಾನದಲ್ಲಿ ಕಾಣಬಹುದು ಎಂದು ಹೇಳಿದರು.

ಬಸವಣ್ಣನವರ ‘ಕಳಬೇಡ, ಕೊಲಬೇಡ’ ವಚನ ಸಂವಿಧಾನವಾದರೆ, ಭಾರತದ ಸಂವಿಧಾನ ಅದನ್ನು ಕಾನೂನು ರೂಪದಲ್ಲಿ ಅಳವಡಿಸಿಕೊಂಡಿದೆ ಎಂದು ವಿವರಿಸಿದರು. ಜಗತ್ತಿನ ಮೊಟ್ಟ ಮೊದಲ ಪಾರ್ಲಿಮೆಂಟ್ ಎಂದು ಕರೆಯಲ್ಪಡುವ ಅನುಭವ ಮಂಟಪದಲ್ಲಿ ಸಮಾನತೆ, ಸ್ವಾತಂತ್ರ್ಯ ಕಲ್ಪಿಸಲಾಗಿತ್ತು. ಅದೇರೀತಿಯಾಗಿ ನಮ್ಮ ಸಂವಿಧಾನದಲ್ಲೂ ಈ ಅಂಶಗಳಿರುವುದನ್ನು ಗಮನಿಸಬಹುದು ಎಂದು ಅವರು ತಿಳಿಸಿದರು. ಆಧುನಿಕ ಜಗತ್ತಿನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಇದಕ್ಕೆ ಕಸಗುಡಿಸುವ ಸತ್ಯಕ್ಕನ ‘ಲಂಚ, ವಂಚನೆಗೆ ಕೈಯಾನದ ಭಾಷೆ’ ವಚನ ಸೂಕ್ತ ಪರಿಹಾರವಾಗಿದೆ. ಶರಣರು ಜಾತಿ ವ್ಯವಸ್ಥೆಯನ್ನು ನಿರಾಕರಿಸಿ ಸಮಾನತೆ ಒದಗಿಸಿದಂತೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಕಾನೂನು ಮೂಲಕ ಸಂವಿಧಾನ ಒದಗಿಸಿದರು ಎಂದು ವಿವರಿಸಿದರು.

ಪ್ರಾಸ್ತಾವಿಕ ಮಾತನಾಡಿದ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಶರಣರ ವೈಚಾರಿಕ, ವೈಜ್ಞಾನಿಕ ಚಿಂತನೆಗಳು ಭಾರತದ ಸಂವಿಧಾನದಲ್ಲಿ ಕಾಣಬಹುದು. ಭಾರತದ ಸಂವಿಧಾನಕ್ಕೆ ವಚನ ಸಾಹಿತ್ಯವೇ ತಳಹದಿಯಾಗಿದೆ ಎಂದು   ತಿಳಿಸಿದರು. ಕಾಲೇಜಿನ ಪ್ರಾಚಾರ್ಯ ಜಯಲಕ್ಷ್ಮೀ ಎಲ್.ಕೆ. ಅಧ್ಯತೆ ವಹಿಸಿದ್ದರು. ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಯುವ ಹೋರಾಟಗಾರ ಸಚಿನ್ ಫರಹತಾಬಾದ್ ಮುಖ್ಯ ಅತಿಥಿಯಾಗಿದ್ದರು. ಎ.ಜೆ. ಖತೀಬ್, ರುಕ್ಮಿಣಿ ವೇದಿಕೆಯಲ್ಲಿ ಇದ್ದರು.

ಶಿವರಾಜ ಅಂಡಗಿ ಪ್ರಾರ್ಥಿಸಿದರು. ಡಾ. ಕೆ.ಗಿರಿಮಲ್ಲ ನಿರೂಪಿಸಿದರು. ಶ್ರೀಕಾಂತಗೌಡ ಪಾಟೀಲ ತಿಳಗೂಳ, ಶಿವಾನಂದ ಮಠಪತಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here