ಕಲಬುರಗಿ: ಮುಂಗಾತು ಮಳೆ ಕೈಕೊಟ್ಟ ಕಾರಣ ಗ್ರಾಮೀಣ ಭಾಗದ ಜನರು ದೂರದ ಪುಣೆ, ಮುಂಬೈ ಕಡೆ ಗುಳೆ ಹೋಗುತ್ತಿದ್ದು, ಇದನ್ನು ತಪ್ಪಿಸಲು ಶುಕ್ರವಾರ ಅಫಜಲಪೂರ ತಾಲೂಕಿನ ಭೈರಾಮಡಗಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರೋಜಗಾರ ದಿನಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಭೈರಾಮಡಗಿ ಗ್ರಾಮದಲ್ಲಿ ನರೇಗಾ ಸಂಯೋಜಕಿ ಶೋಭಾ ಕಣಮಸ್ಕರ್ ಅವರು ಇತರೆ ಸಿಬ್ಬಂದಿಯೊಂದಿಗೆ
ಮನೆ ಮನೆಗೆ ಭೇಟಿ ನೀಡಿ, ನರೇಗಾ ಕೂಲಿ ಕೆಲಸ ಪಡೆಯಲು ಮಹಿಳೆಯರು-ಪುರುಷರು ಮುಂದಾಗಬೇಕು. ಒಂದು ದಿನಕ್ಕೆ ಗಂಡು ಮತ್ತು ಹೆಣ್ಣಿಗೆ ಸಮಾನ ಕೂಲಿ 316 ರೂ. ನೀಡಲಾಗುತ್ತಿದೆ ಎಂದು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು.
ಇದೇ ಸಂದರ್ಭದಲ್ಲಿ ವೈಯಕ್ತಿಕ ಕಾಮಗಾರಿಗಳಾದ ಕೃಷಿ ಹೊಂಡ, ಕ್ಷೇತ್ರ ಬದು, ಬಚ್ಚಲ ಗುಂಡಿ ಸಹ ತೆಗೆದುಕೊಳ್ಳಲು ಪಟ್ಟಿ ಮಾಡಿ ನಮೂನೆ 6ರಲ್ಲಿ ಮಾಹಿತಿಯನ್ನು ಪಡೆಯಲಾಯಿತು.
ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಹಣಮಂತ, ಪ್ರಭು, ಗ್ರಾಮ ಕಾಯಕ ಮಿತ್ರ ಗೌಷಿಯಾ ಮತ್ತಿತರರು ಇದ್ದರು.