ಬಸವಣ್ಣನವರನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಮೌಢ್ಯದಿಂದ ಹೊರಬರಲು ಸಾಧ್ಯ

0
20

ಶಹಾಬಾದ: ಲಿಂಗಾಯತರು ಬಸವಣ್ಣನವರನ್ನು ಸರಿಯಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಮೌಢ್ಯದಿಂದ ಹೊರಬರಲು ಸಾಧ್ಯ ಎಂದು ಶಹಾಪೂರದ ಬಸವ ಮಾರ್ಗ ಪ್ರತಿಷ್ಠಾನದ ಶರಣ ಚಿಂತಕ ಹಾಗೂ ಬರಹಗಾರ ವಿಶ್ವರಾಧ್ಯ ಸತ್ಯಂಪೇಟೆ ಹೇಳಿದರು.

ಅವರು ತಾಲೂಕಿನ ಭಂಕೂರ ಗ್ರಾಮದ ಶಾಂತನಗರದ ಬಸವ ಸಮಿತಿಯಲ್ಲಿ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳ ಪರ್ಯಂತ ಆಯೋಜಿಸಲಾದ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಉದ್ಘಾಟಕರಾಗಿ ಮಾತನಾಡಿದರು.

Contact Your\'s Advertisement; 9902492681

ಇಂದಿಗೂ ಬಸವಣ್ಣನವರನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದರಿಂದ ಮೌಢ್ಯಕ್ಕೆ ಒಳಗಾಗಿ ಬದುಕಿನಲ್ಲಿ ಜಂಜಾಟವನ್ನು ಎದುರಿಸುತ್ತಾ ಜೀವನ ಕಳೆಯುತ್ತಿದ್ದೆವೆ. ಸಮಾಜ ಪರಿವರ್ತನೆಯ ಹರಕಾರ ಬಸವಣ್ಣನವರು ಪಟ್ಟಭದ್ರರರನ್ನು ಮಟ್ಟ ಹಾಕುವ ಮೂಲಕ ಸಮಾಜದಲ್ಲಿದ್ದ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿದರು. ಸ್ಥಾವರ ಗುಡಿಯಲ್ಲಿರುವ ದೇವರು ಕೇವಲ ಕೆಲವರ ಸ್ವತ್ತು ಎಂಬುದನ್ನು ಮನಗಾಣಿಸಿದರು. ಜನ ಸಾಮಾನ್ಯರಿಗೆ ಕಾಲೇಕಂಬ ದೇಹವೇ ದೇಗುಲ ಎಂಬ ಅರಿವನ್ನುಂಟು ಮಾಡಿ ಮನುಷ್ಯನನ್ನು ದೇವರ ಎತ್ತರಕ್ಕೆ ಏರಿಸಿದರು.

ಪಟ್ಟಭದ್ರ ಶಕ್ತಿಗಳು ಜೋತಿಷ್ಯ, ವಾಸ್ತು,ಪಂಚಾಂಗ, ಸ್ವರ್ಗ- ನರಕಗಳ ಭ್ರಾಮಕ ಲೋಕದಲ್ಲಿ ಇರುವಂತೆ ಹುನ್ನಾರ ಹೂಡಿ ಜನರನ್ನು ವಾಸ್ತವದತ್ತ ಮುಖ ಮಾಡದಂತೆ ತಡೆದರು. ನಿಜವಾದ ಧರ್ಮ ಜನತೆಯಲ್ಲಿ ನಿರ್ಭಯತೆಯನ್ನು ಬೆಳೆಸಬೇಕು. ವೈಚಾರಿಕತೆಯನ್ನು ವೈಜ್ಞಾನಿಕ ಮನೋಭಾವವನ್ನು ಉಂಟು ಮಾಡಬೇಕು. ಆದರೆ ಧರ್ಮದ ವಿಶಾಲಾರ್ಥ ಇಂದು ಮರೆಯಾಗಿ ಭಯವೇ ಧರ್ಮದ ಶಕ್ತಿ ಎನ್ನುವಂತಾಗಿದೆ ಎಂದು ವ್ಯಂಗ್ಯವಾಡಿದರು.

ಮನುಷ್ಯ ತನ್ನ ಸ್ವಾರ್ಥಕ್ಕಾಗಿ ರಾಹು ಕಾಲ ಗುಳಿಕ ಕಾಲಗಳನ್ನು ಸೃಷ್ಟಿ ಮಾಡಿದ್ದಾನೆ ಹೊರತು ದೇವರು ಇದನ್ನು ಸೃಜಿಸಲಿಲ್ಲ. ಆಚಾರವೇ ಸ್ವರ್ಗ- ಅನಾಚಾರವೆ ನರಕ ಎನ್ನುವ ಮಾತುಗಳ ಮೂಲಕ ಶರಣರು ಇಂದಿನ ಬದುಕು ವಾಸ್ತವವಾದುದು. ಸತ್ತ ಮೇಲೆ ಸ್ವರ್ಗ ನರಕ ಕಲ್ಪನೆಯನ್ನು ಶರಣರು ಅಲ್ಲಗಳೆಯುತ್ತಾರೆ. ಆಚಾರ ವಿಚಾರ ಸದ್ಗುಣ ಸಂಪನ್ನ ವ್ಯಕ್ತಿತ್ವ ಸ್ವರ್ಗವನ್ನು ಉಂಟು ಮಾಡುತ್ತದೆ. ಕೆಟ್ಟವರ ಗೆಳೆತನ, ಅವಿಚಾರ, ಅಸಂಗತ ನಡವಳಿಕೆಗಳು ನರಕವನ್ನು ಸೃಷ್ಟಿಸುತ್ತವೆ ಎಂದವರು ವಚನಗಳೊಂದಿಗೆ ವಿವರಿಸಿದರು.

ರಾವೂರಿನ ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ, ಕಾಯಕ-ದಾಸೋಹ ತತ್ವವನ್ನು ಇಡೀ ಜಗತ್ತಿಗೆ ಸಾರುವ ಮೂಲಕ ಪ್ರತಿಯೊಬ್ಬರೂ ಕಾಯಕ ಜೀವಿಗಳಾಗಬೇಕೆಂದು ತಿಳಿಸಿದವರು ಬಸವಣ್ಣನವರು.ವೈಜ್ಞಾನಿಕತೆ,ವೈಚಾರಿಕತೆ, ಬೆಳೆಸುವ ಮೂಲಕ ಸಮಾಜದಲ್ಲಿನ ಜಿಡ್ಡುಗಟ್ಟಿದ್ದ ಮೌಢ್ಯವನ್ನು ತೊಲಗಿಸಿ ಸುಂದರ ಸಮಾಜದ ನಿರ್ಮಾಣ ಮಾಡಿದರು.ಅವರ ತತ್ವಗಳ ಅನುಕರಣೆ ಮಾಡುವ ಅವಶ್ಯಕತೆಯಿದೆ ಎಂದರು.

ಗದುಗಿನ ಪ್ರವಚನಕಾರರಾದ ಗಿರಿಜಕ್ಕ ಧರ್ಮರೆಡ್ಡಿ ಮಾತನಾಡಿದರು. ಕಸಾಪ ತಾಲೂಕಾಧ್ಯಕ್ಷ ಮತ್ತು ವೀರಶೈವ ಸಮಾಜದ ಅಧ್ಯಕ್ಷ ಶರಣಬಸಪ್ಪ ಕೋಬಾಳ, ಉದ್ಯಮಿ ಶಶಿಕಾಂತ ಪಾಟೀಲ ವೇದಿಕೆಯ ಮೇಲಿದ್ದರು.ಬಸವ ಸಮಿತಿ ಅಧ್ಯಕ್ಷ ನೀಲಕಂಠ ಮುದೋಳಕರ್ ಅಧ್ಯಕ್ಷತೆ ವಹಿಸಿದ್ದರು.

ಬಸವ ಸಮಿತಿಯ ಪದಾಧಿಕಾರಿಗಳಾದ ಅಮೃತ ಮಾನಕರ್,ರೇವಣಸಿದ್ದಪ್ಪ ಮುಸ್ತಾರಿ,ಶಿವಪುತ್ರ ಕುಂಬಾರ, ಅಮರಪ್ಪ ಹೀರಾಳ ಸೇರಿದಂತೆ ಶಾಲಾ ಶಿಕ್ಷಕರು, ಮಕ್ಕಳು ಸಾರ್ವಜನಿಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here