ಶಹಾಬಾದ: ಸಂಪೂರ್ಣ ಹದಗಟ್ಟಿರುವ ಶಹಾಬಾದ್ – ಜೇವರ್ಗಿ ರಸ್ತೆಯ ದುರಸ್ಥಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಕ್ಟೋಬರ್ 9ರಂದು ಬೆಳಿಗ್ಗೆ 10:30 ಗಂಟೆಗೆ ವಾಡಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಅನಿರ್ಧಿμÁ್ಟವಧಿ ಕಾಲ ಧರಣಿ ನಡೆಸಲು ಪ್ರಗತಿಪರ ಸಂಘಟನೆಗಳು ಹಾಗೂ ಪ್ರಗತಿಪರ ಒಕ್ಕೂಟ ನಿರ್ಧರಿಸಿದೆ ಎಂದು ಪ್ರಗತಿಪರ ಒಕ್ಕೂಟ ಸಮಿತಿಯ ಮುಖಂಡರು ಹಾಗೂ ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಒಕ್ಕೂಟ ಸಮಿತಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಹಾಬಾದ ತಾಲೂಕಾ ಕೇಂದ್ರವಾಗಿದ್ದರೂ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತಾಲೂಕಿನ ಪ್ರಗತಿ ಶೂನ್ಯವಾಗಿದೆ. ಹಲವು ಬಾರಿ ಶಹಾಬಾದ – ಜೇವರ್ಗಿ ನಡುವಿನ ರಸ್ತೆ ನಿರ್ಮಿಸಿದರೂ ಹಾಳಾಗುತ್ತಿದ್ದು, ಹೊಸ ರಸ್ತೆ ನಿರ್ಮಿಸುವಂತೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ವಾಡಿ ಕ್ರಾಸ್ನಿಂದ ಮರಗೊಳ ಕ್ರಾಸ್, ಜೇವರ್ಗಿ ಕ್ರಾಸ್ ವರೆಗೆ 17 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದೆ. ಕಳೆದ ಎರಡ್ಮೂರು ವರ್ಷಗಳಿಂದ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಅಕ್ಟೋಬರ್ 9 ರಂದು ನಡೆಯುವ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ತಾಲ್ಲೂಕಿನ ಸುಮಾರು ಎರಡು ಸಾವಿರ ಜನರು ಭಾಗವಹಿಸಲಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಬರುವವರೆಗೂ ಪ್ರತಿಭಟನೆ ಮುಂದುವರೆಯುತ್ತದೆ” ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎಸ್. ಎಚ್. ರಾಘವೇಂದ್ರ, ಪೂಜಪ್ಪಾ ಮೇತ್ರಿ,ನಾಗಣ್ಣ ರಾಂಪೂರೆ,ಬಾಕ್ರೋದ್ದಿನ್, ವಿಶ್ವನಾಥ ಫಿರೋಜಾಬಾದ್, ಮಲ್ಲಣ್ಣ ಮಸ್ಕಿ, ಕಿರಣ, ಯಲ್ಲಾಲಿಂಗ, ಗಣಪತರಾವ ಮಾನೆ,ಜಗನ್ನಾಥ.ಎಸ್.ಎಚ್, ರಮೇಶ ದೇವಕರ್ ಸೇರಿದಂತೆ ಇತರರಿದ್ದರು.