ಶಹಾಬಾದ: ಬಸವ ಎಂಬ ಮೂರಕ್ಷರ ಹೃದಯದಲ್ಲಿ ನೆಲೆಗೊಂಡಿದ್ದೆಯಾದರೆ ಅಸಾಧ್ಯವಾದುದು ಸಾಧ್ಯವಾಗುತ್ತದೆ ಎಂದು ಬಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದೇವರು ಹೇಳಿದರು.
ಅವರು ಶುಕ್ರವಾರ ಭಂಕೂರ ಗ್ರಾಮದ ಶಾಂತನಗರದ ಬಸವ ಸಮಿತಿಯಲ್ಲಿ ಆಯೋಜಿಸಲಾದ ಶ್ರೀ ಬಸವೇಶ್ವರ ಮೂರ್ತಿ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಸವ ಎಂದರೆ ಶಕ್ತಿ, ಉತ್ಸಾಹ, ಭರವಸೆ.ಅವನೊಬ್ಬ ಲೋಕ ಸೂರ್ಯ.ಅವರ ವಚನಗಳಲ್ಲಿ ಇಡೀ ಬದುಕಿನ ಸಮಸ್ಯೆಗಳಿಗೆ ಪರಿಹಾರವಿದೆ.ಆದ್ದರಿಂದ ಬಸವಾಕ್ಷರವನ್ನು ನುಡಿದರೆ ಮಾಡಬೆಕೆಂಬ ಕಾರ್ಯ ಸಾಧ್ಯವಾಗುತ್ತದೆ.ಬಸವಣ್ಣ ಎಲ್ಲರನ್ನೂ ಅಪ್ಪಿಕೊಂಡ ಹಾಗೂ ಒಪ್ಪಿಕೊಂಡ ಮಹಾನ್ ಶರಣ. ಮಾದಾರ ಚೆನ್ನಯ್ಯ, ಸಮಗಾರ ಹರಳಯ್ಯ, ಡೋಹಾರ ಕಕ್ಕಯ್ಯ, ಹಡಪದ ಅಪ್ಪಣ್ಣ ಸೇರಿದಂತೆ ಎಲ್ಲರನ್ನು ಇವನಾರವ ಇವನಾರವ ಎನ್ನದೇ ಇವನಮ್ಮವ ಎಂದು ಒಪ್ಪಿಕೊಂಡ. ಬಸವ ತತ್ವದಲ್ಲಿ ಜಾತಿಬೇಧ, ವರ್ಣ ಬೇಧ, ಮೇಲು-ಕೀಳು, ಹೆಣ್ಣು-ಗಂಡು ಎನ್ನುವ ತಾರತಮ್ಮವಿಲ್ಲ. ಮೊದಲನೇದಾಗಿ ಪ್ರತಿಯೊಬ್ಬರೂ ಬಸವ ನಿಷ್ಠೆಯನ್ನು ಮೆರೆಯಬೇಕು.ಬಸವಣ್ಣನನ್ನು ಬಸವ ಗುರುವೆಂದು ದೃಢವಾಗಿ ನಂಬಬೇಕು.ಆತನನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಬೇಕು.
ಎರಡನೇಯದಾಗಿ ವಚನ ನಿಷ್ಠೆಯನ್ನು ಪಾಲಿಸಬೇಕು. ಬಸವಾದಿ ಶರಣರು ನೀಡಿದ ವಚನಗಳೇ ನಮಗೆ ಪ್ರಾಣ ಮತ್ತು ಜೀವಾಳ ಎಂಬುದು ತಿಳಿದುಕೊಳ್ಳಬೇಕು.ನಿತ್ಯ ಭಕ್ತಿ,ಶ್ರದ್ಧೆಯಿಂದ ಪಾರಾಯಣ ಮಾಡಬೇಕು.ಮೂರನೇದಾಗಿ ಶರಣರ ಸಂಗ ಮಾಡಬೇಕು. ಒಳ್ಳೆಯವರ ಸತ್ಸಂಗದಿಂದ ಜೀವನದಲ್ಲಿ ಬದಲಾವಣೆ ಕಾಣಬಹುದು. ಬದುಕಿನ ನೈಜ ಅನುಭವವನ್ನು ಪಡೆಯಬಹುದು.ಎಲ್ಲರೂ ಒಪ್ಪುವಂತ ನಿತ್ಯ ನೂತನ ಸರ್ವಕಾಲಿಕ ಸತ್ಯವಾಗಿರುವ ಬಸವ ತತ್ವವನ್ನು ಪಾಲಿಸುವ ಅಗತ್ಯತೆಯಿದೆ. ಅಂಗವೈಕಲ್ಯಕ್ಕೆ ಪೋಲಿಯೋ ಲಸಿಕೆ ಮದ್ದಾದರೆ, ಮಾನಸಿಕ ಅಂಗವಿಕಲತೆಗೆ ದೂರ ಮಾಡಲು ಬಸವ ತತ್ವವೇ ಪರಿಹಾರ.ಆದ್ದರಿಂದ ಈ ತತ್ವದ ಪ್ರಚಾರ, ಪ್ರಸಾರ ಮಾಡುವುದಕ್ಕಿಂತ ಪಾಲನೆ ಮಾಡುವುದು ಅತಿ ಮುಖ್ಯ ಎಂದು ಹೇಳಿದರು.
ಚಿತ್ತಾಪೂರದ ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ವಿಶ್ವದಲ್ಲಿ ಧ್ವನಿಯಿಲ್ಲದವರಿಗೆ ಧ್ವನಿಯನ್ನು ಕೊಟ್ಟವರೆಂದರೆ ವಿಶ್ವಗುರು ಬಸವಣ್ಣನವರು.ಕಲ್ಯಾಣದಲ್ಲಿ ಯಾರಿಗಾದರೂ ತೊಂದರೆಯಾಗಿದ್ದರೇ ಅವರಿಗೆ ಪರಿಹಾರ ಬಸವಣ್ಣನವರಿಂದಲೇ ಆಗುತ್ತಿತ್ತು. ಬಸವಣ್ಣನವರ ಮೂರ್ತಿಯನ್ನು ಅನಾವರಣ ಮಾಡಿದ್ದು ನೋಡಿದರೇ ಕೂಡಲಸಂಗಮಕ್ಕೆ ಬಂದಂತಾಗಿದೆ ಎನಿಸುತ್ತಿದೆ.ಬಸವ ಸಮಿತಿಯವರು ಬಸವ ತತ್ವದ ಅನೇಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನಮಾನಸದಲ್ಲಿ ಶರಣರ ವಚಾರಧಾರೆಗಳನ್ನು ಪಸರಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ.ಇಂತದೊಂದು ಕಾರ್ಯದಿಂದಲೇ ಬಸವ ಸಮಿತಿ ಸಂಸ್ಥೆ ಎತ್ತರವಾಗಿ ಬೆಳೆದು ನಿಂತಿದೆ.ಅದನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗಲಿ ಎಂದು ಆಶಿಸಿದರು.
ಗುರುಮಠಕಲ್ ಖಾಸಾಮಠದ ಶಾಂತವೀರ ಶರಣರು ಮಾತನಾಡಿ, ಬಸವಣ್ಣನವರ ಮೂತಿ ಅನಾವರಣ ಮಾಡಿರುವುದು ಸಂತೋಷದಾಯಕ ಆದರೆ ಮೂರ್ತಿ ಸ್ಥಾಪನೆ ಎಂಬುದು ನೇಮಿತ್ಯ.ಆದರೆ ಅವರ ತತ್ವದ ಅನುಷ್ಠಾನ ಮಾಡಿದೇ ಮಾತ್ರ ಬಸವಣ್ಣನ ಪುತ್ಥಳಿ ಅನಾವರಣಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಹೇಳಿದರು.
ಕಲಬುರಗಿಯ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್,ಶಿರಗುಪ್ಪಾದ ಬಸವ ಚಿಂತಕರಾದ ಬಸವರಾಜ ವೆಂಕಟಾಪೂರ, ಬಸವ ಸಮಿತಿ ಅಧ್ಯಕ್ಷ ನೀಲಕಂಠ ಮಾದುಗೋಳಕರ್ ಮಾತನಾಡಿದರು. ಅಮೃತ ಮಾನಕರ್ ನಿರೂಪಿಸಿದರು, ವೀರಣ್ಣ ಕುಂಬಾರ ಸ್ವಾಗತಿಸಿದರು, ರೇವಣಸಿದ್ದಪ್ಪ ಮುಸ್ತಾರಿ ವಂದಿಸಿದರು.