ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 11,500 ಕೆ.ಜಿ ಅಡಿಕೆಯ 460 ಬ್ಯಾಗ್‍ಗಳ ವಶ

0
13

ಬೆಂಗಳೂರು, ಡಿಸೆಂಬರ್ 02; ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಜಾಗೃತಿ ವಿಭಾಗದ ಅಧಿಕಾರಿಗಳು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ 11,500 ಕೆ.ಜಿಗಳಷ್ಟು ಅಡಿಕೆಯ 460 ಬ್ಯಾಗ್‍ಗಳನ್ನು ವಶಪಡಿಸಿಕೊಂಡಿರುತ್ತಾರೆ. ವಶಪಡಿಸಿಕೊಂಡ ಸಮಯದಲ್ಲಿ ಈ ಅಡಿಕೆ ಸಾಗಣಿಕೆಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳು ಇಲ್ಲದಿರುವುದು ಕಂಡುಬಂದಿದ್ದು, ಸರಕುಗಳ ಮೂಲ ಸ್ಥಳದ ಬಗ್ಗೆ ಕೆಲ ಸಂಶಯಗಳನ್ನು ಉಂಟುಮಾಡಿರುತ್ತದೆ.

ಪ್ರಾಥಮಿಕ ತನಿಖೆಯಿಂದ ಸದರಿ ಸರಕುಗಳು ದೇಶದ ಈಶಾನ್ಯ ವಲಯದ ಭಾಗಗಳಾದ ಅಸ್ಸಾಂ ಮತ್ತು ಮಣಿಪುರದಿಂದ ಮಧ್ಯಪ್ರದೇಶ ಹಾಗೂ ಬೆಂಗಳೂರಿನ ಸ್ಥಳೀಯ ಅನೋಂದಾಯಿತ ವರ್ತಕರಿಗೆ ಸರಬರಾಜಾಗುತ್ತಿರುವುದನ್ನು ಗಮನಿಸಲಾಗಿರುತ್ತದೆ. ಏರ್‍ವೇ ಬಿಲ್ಲುಗಳಲ್ಲಿ ಬರೀ ವ್ಯಕ್ತಿಗಳ ಹೆಸರುಗಳು ಮತ್ತು ಮೊಬೈಲ್ ನಂಬರ್‍ಗಳನ್ನು ಉಪಯೋಗಿಸಿಕೊಂಡು ಸರಕುಗಳನ್ನು ರವಾನಿಸಲಾಗುತ್ತಿದ್ದು, ಅಸ್ಸಾಂ, ಮಣಿಪುರ ಮತ್ತು ಮಧ್ಯಪ್ರದೇಶದ ಜಿ.ಎಸ್.ಟಿ ಅಧಿಕಾರಿಗಳ ಸಹಯೋಗದೊಂದಿಗೆ ತನಿಖೆಯನ್ನು ನಡೆಸಲಾಗುತ್ತಿರುತ್ತದೆ.

Contact Your\'s Advertisement; 9902492681

ಪ್ರಗತಿಯಲ್ಲಿರುವ ಈ ತನಿಖೆಯಿಂದ ಅಡಿಕೆಯು ಮ್ಯಾನ್ಮರ್‍ನಿಂದ ಕಳ್ಳ ಸಾಗಣಿಕೆಯಾಗುತ್ತಿರುವ ಸಂಶಯ ಕಂಡುಬಂದಿರುತ್ತದೆ. ಈ ಕಳ್ಳ ಸಾಗಣಿಕೆಯ ಕಡಿಮೆ ಗುಣಮಟ್ಟ ಮತ್ತು ಕಡಿಮೆ ಮೌಲ್ಯದ ಅಡಿಕೆಯನ್ನು ಸ್ಥಳೀಯವಾಗಿ ಲಭ್ಯವಾಗುವ ಅಡಿಕೆಯೊಂದಿಗೆ ಬೆರೆಸಲು ಉಪಯೋಗಿಸುತ್ತಿರುವ ಸಾಧ್ಯತೆ ಇರುತ್ತದೆ. ಮಾರುಕಟ್ಟೆಯಲ್ಲಿ ಮಧ್ಯಮ ಗುಣಮಟ್ಟದ ಅಡಿಕೆಯು ಪ್ರತಿ ಕೆ.ಜಿಗೆ ಸುಮಾರು ರೂ.250 ರಿಂದ 300 ರೂಗಳಾಗಿರುತ್ತದೆ. ಆದರೆ, ಈ ರೀತಿ ಸಾಗಣಿಕೆಗೊಂಡ ಅಡಿಕೆಯನ್ನು ಪ್ರತಿ ಕೆ.ಜಿಗೆ ರೂ.25 ರಿಂದ 30 ಎಂದು ವಿಮಾನದ ಮೂಲಕ ಸಾಗಣಿಕೆ ಮಾಡುತ್ತಿರುತ್ತಾರೆ. ಇಲಾಖೆಯ ಈ ತನಿಖೆಯ ಪರಿಣಾಮದಿಂದ ಪ್ರಸ್ತುತ ಸರಕು ವಿಮಾನಗಳ ಮುಖಾಂತರ ಸಾಗಿಸುವ ಅಡಿಕೆ ಸರಕುಗಳಿಗೆ ಅಗತ್ಯ ದಾಖಲೆಗಳ ಸಹಿತ ವಹಿವಾಟು ನಡೆಸುತ್ತಿರುವುದು ಕಂಡು ಬಂದಿರುತ್ತದೆ.

ಅಡಿಕೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಇ-ವೇ ಬಿಲ್ಲನ್ನು ಮರುಬಳಕೆ ಮಾಡಿಕೊಂಡು ಸರಕನ್ನು ಸಾಗಿಸುತ್ತಿದ್ದ ವಾಹನವನ್ನು ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಜಾಗೃತಿ ವಿಭಾಗದ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿರುತ್ತಾರೆ. ಈ ಪ್ರಕರಣದಲ್ಲಿ ತೆರಿಗೆ ವಂಚಕರು ತಮ್ಮನ್ನು ರೈತರೆಂದು ಪ್ರತಿಬಿಂಬಿಸಿ ಕೊಂಡು ತಪ್ಪು ಹೇಳಿಕೆಗಳನ್ನು ನೀಡಿರುತ್ತಾರೆ. ಹಾಗೆಯೇ, ರೈತ ಮುಖಂಡರುಗಳಿಗೂ ತಪ್ಪು ಮಾಹಿತಿಯನ್ನು ನೀಡಿ ಪ್ರತಿಭಟನೆಯನ್ನು ನಡೆಸಿರುತ್ತಾರೆ. ಡಿಜಿಟಲ್ ಸಾಕ್ಷ್ಯಾಧಾರಗಳನ್ನು ಆಧರಿಸಿ ಈ ಪ್ರಕರಣದ ಸತ್ಯವನ್ನು ಹೊರಗೆಳೆಯಲಾಗಿರುತ್ತದೆ. ಅಂತಿಮವಾಗಿ ತೆರಿಗೆ ವಂಚಕರು ತಮ್ಮ ತಪ್ಪನ್ನು ಒಪ್ಪಿಕೊಂಡು ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ, 2017 ರನ್ವಯ ರೂ.24.26ಲಕ್ಷಗಳ ಜುಲ್ಮಾನೆ ಮತ್ತು ದಂಡವನ್ನು ಪಾವತಿಸಿರುತ್ತಾರೆ.

ಈ ಪ್ರಕರಣದ ಹಿನ್ನೆಲೆಯಲ್ಲಿ, ರೈತರು ತಾವು ಬೆಳೆದಂತಹ ತೆರಿಗೆದಾಯಕ ಕೃಷಿ ಉತ್ಪನ್ನಗಳನ್ನು ಸಾಗಣಿಕೆ ಮಾಡುವಾಗ, ಇ-ವೇ ಬಿಲ್ ಜಾಲತಾಣದಲ್ಲಿ ಲಭ್ಯವಿರುವ “ನಾಗರಿಕ ಇ-ವೇ ಬಿಲ್” ಸೌಲಭ್ಯವನ್ನು ಬಳಸಿಕೊಳ್ಳಬಹುದು ಮತ್ತು ಇಲಾಖೆಯ ಸ್ಥಳೀಯ ಕಛೇರಿಗಳು/ಸಹಾಯ ಪೀಠಗಳ ನೆರವನ್ನು ಸಹ ಪಡೆಯಬಹುದೆಂದು ಇಲಾಖೆಯು ತಿಳಿಸುತ್ತದೆ. ಹಾಗೆಯೇ, ಅಡಿಕೆ, ಕೊಬ್ಬರಿ, ಗೋಡಂಬಿ, ತಂಬಾಕಿನ ಎಲೆಗಳು, ಒಣ ಮೆಣಸಿನಕಾಯಿ, ಎಣ್ಣೆ ಬೀಜಗಳು, ಮಸಾಲೆ ಪದಾರ್ಥಗಳು ಮತ್ತು ಹತ್ತಿಯಂತಹ ಸರಕುಗಳನ್ನು ಸಾಗಿಸಲು ಇ-ವೇ ಬಿಲ್ಲಿನ ಜೊತೆಗೆ ಆರ್.ಟಿ.ಸಿಯನ್ನು ಸಹ ಬಳಸಿಕೊಳ್ಳಬೇಕಾಗಿರುತ್ತದೆ.

ತೆರಿಗೆ ವಂಚಿಸುವಂತಹ ಚಟುವಟಿಕೆಗಳನ್ನು ಕಡಿವಾಣ ಹಾಕುವ ಕ್ರಮಗಳಿಗೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯು ಧೃಡಸಂಕಲ್ಪವನ್ನು ತೊಟ್ಟಿದ್ದು, ಅಂತಹ ಪ್ರಕರಣಗಳಲ್ಲಿ ಕಡ್ಡಾಯವಾಗಿ ಶೋಧ ಮತ್ತು ತನಿಖಾ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುವುದು ಎಂದು ವಾಣಿಜ್ಯ ತೆರಿಗೆಗಳ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here