ನೊಂದವರ ನೋವುಗಳು – ಒಂದು ಅನುಭವದ ಕಾವ್ಯ ಖಡ್ಗ

0
161

ನಾನು ಕಾಲೇಜು ಓದುವ ಸಮಯದಲ್ಲಿ ನನ್ನ ಅಣ್ಣ ಸಾಹಿತ್ಯ ಪ್ರೇಮಿಯಾಗಿದ್ದರು. ಬಂಡಾಯದ ಕವಿತೆಗಳು ಓದುತ್ತಿದ್ದರು. ಆ ಕಾಲಘಟ್ಟದಲ್ಲಿ ದಲಿತ ಸಂಘರ್ಷ ಸಮಿತಿಯ ಕೆಲಸಗಳು ಉಚ್ಛಾಯ ಸ್ಥಿತಿಯಲ್ಲಿದ್ದವು. ನಮ್ಮ ಮನೆಯಲ್ಲಿ ನನ್ನ ಅಣ್ಣನ ಪುಸ್ತಕಗಳ ಸಂಗ್ರಹದಲ್ಲಿ ಅತ್ಯಂತ ದೊಡ್ಡದೊಡ್ಡ ಸಾಹಿತಿಗಳ ಪುಸ್ತಕಗಳ ಸಂಗ್ರಹ ಗಮನಿಸಿದಾಗಲೇ ನನಗೂ ಸಾಹಿತ್ಯದ ಓದು ಪ್ರಿಯವಾಗಿದ್ದು ಸತ್ಯ.

ಮನೆಯಲ್ಲಿ ನನ್ನ ಅಣ್ಣ ಒಂದು ಅತೀ ಚಿಕ್ಕ ಪುಸ್ತಕವೊಂದನ್ನು ಹಿಡಿದು ಅತ್ಯಂತ ತದೇಕಚಿತ್ತದಿಂದ ಓದುತ್ತಿದ್ದ, ಇಷ್ಟು ದಿನ ದೊಡ್ಡ ಪುಸ್ತಕ ಓದುತ್ತಿದ್ದ ಅಣ್ಣ ಅದ್ಯಾವುದೊ ಬಹಳ ಚಿಕ್ಕ ಪುಸ್ತಕ ಓದುತ್ತಿದ್ದನು. ನನ್ನ ಕುತುಹಲ ಗಮನಿಸಿದ ಅಣ್ಣ “ಬಾ ಇಲ್ಲಿ ಕುಂದ್ರು ನಾನು ಓದುತ್ತೇನೆ ನೀನು ಕೇಳಿಸಿಕೊ” ಎಂದನು. ನೊಂದವರ ನೋವುಗಳು, ನನ್ನವರು ನುಂಗಿದ ನೋವುಗಳು, ನನ್ನೆದೆಗೆ ತಾಕಿದಾಗ, ಮದ್ದು ಗುಂಡುಗಳಾಗಿ ಸಿಡಿಯುತ್ತೇನೆ. ಭಂಡರಿಗೆ ಇಲ್ಲಿ ಗಂಡನಾಗಿ ಪುಂಡರ ಮೂಳೆ ಮುರಿಯುತ್ತೇನೆ.

Contact Your\'s Advertisement; 9902492681

ಇದು ಅವತ್ತಿನ ಕಾಲಘಟ್ಟಕ್ಕೆ ಅತ್ಯಂತ ಅವಶ್ಯಕ ಎನಿಸಿದ ಕವಿತೆಯೆನಿಸಿತು. ಪದ್ಯ ಪೂರ್ಣ ಓದುತ್ತಿದ್ದಂತೆ ಅಣ್ಣ ಭಾವುಕನಾಗಿ ಪುಸ್ತಕ ಕೆಳಗಿಟ್ಟು ಹೊರನಡೆದ. ನಾನು ಆ ಪುಸ್ತಕ ಕೈಗೆತ್ತಿಕೊಂಡೆ, ಇದು ರಾಜಶೇಖರ ಮಾಂಗ್ ಎನ್ನುವ ಸಣ್ಣ ಕಾಲೇಜು ವಯಸ್ಸಿನ ವಿಧ್ಯಾರ್ಥಿಯೇ ಬರೆದಿದ್ದರು. ಇಲ್ಲಿರುವ ಕವಿತೆಗಳು ನನ್ನ ಓದಿಸಿಕೊಂಡವು.
ನೊಂದವರ ನೋವುಗಳು ಎನ್ನುವ ಶಿರ್ಷಿಕೆಯೊಂದಿಗೆ ಪ್ರಾರಂಭವಾಗುವ ಕವಿತೆಗಳು ಅತ್ಯಂತ ಸೂಕ್ಷ್ಮವಾದ ವಿಚಾರಗಳನ್ನು ಬಂಡಾಯದ ಹಾದಿಯನ್ನು ಬಿಚ್ಚಿಕೊಳ್ಳುತ್ತಾ ಹೋಗುತ್ತಿದ್ದವು. ಈ ಪುಸ್ತಕ ನೋಡುವುದಕ್ಕೆ ಅತೀ ಚಿಕ್ಕದು ಅದರ ಪ್ರಭಾವ ಮಾತ್ರ ಅಘಾದವಾಗಿತ್ತು. ಅವತ್ತಿನ ದಲಿತರ ಸ್ಥಿತಿಯನ್ನು ಅವರ ಹಕ್ಕಿನ ಬಗೆಗಿನ ಕವಿತೆಗಳು ಬಿಚ್ಚಿಕೊಳ್ಳುತ್ತಾ ಮತ್ಯಾವುದೊ ಜಗತ್ತನ್ನು ಪರಿಚಯಿಸಿಕೊಟ್ಟವು.

ಕವಿಯ ಮೊದಲ ಸಂಕಲನವೇ ಆಗಿದ್ದರು ಅಲ್ಲಿರುವ ಆಕ್ರೋಶ ಕಲ್ಪನೆಯಿರಲಿಲ್ಲ ಬದಲಿಗೆ ಕಟುಸತ್ಯವಾಗಿತ್ತು. ಪ್ರಸ್ತುತ ಸಮಾಜದಲ್ಲಿ ಶೋಷಿತರ ಬಾಳಿನ ಮೇಲೆ ಬೆಳಕು ಚಲ್ಲುತ್ತಿತ್ತು. ದಲಿತರ ನೋವುಗಳ ಅನಾವರಣಗೊಳಿಸುತ್ತಿದ್ದವು. ಪ್ರತಿಯೊಂದು ಕವಿತೆ ಓದುತ್ತಿದ್ದಂತೆ ಮೈನವಿರೇಳಿಸುತ್ತಿದ್ದವು. ಕಾವ್ಯದೊಳಗಿನ ಅರ್ಥ ಮತ್ತು ಶಕ್ತಿ ಎರಡು ಕಣ್ಣಂಚಿನಲ್ಲಿ ನೀರು ತರುಸುತ್ತಿದ್ದವು. ಒಳಗೊಳಗೆ ಕೋಪ ಹುಟ್ಟಿಸಿದವು.

ಹಲವು ವರ್ಷಗಳ ನಂತರ ಅದೇ ಕವನ ಸಂಕಲನ ಇತ್ತೀಚೆಗೆ ಕೈಗೆತ್ತಿಕೊಂಡು ಓದಿದೆ. ಆಗಿನ ಅನುಭವ ಮತ್ತು ಈಗಿನ ಸ್ಥಿತಿಗತಿಯನ್ನು ಮೇಳೈಸುತ್ತಾ ಒಂದು ಚಿಕ್ಕ ಟಿಪ್ಪಣಿ ಹೊರಮೂಡಿತು. ಕವಿ ಕಾವ್ಯವನ್ನು ಕಟ್ಟಿಕೊಟ್ಟ ಬಗೆಯನ್ನು ಗಮನಿಸಿದಾಗ ಅದರ ಅದಮ್ಯವಾದ ಬಂಡಾಯ ಇವತ್ತಿಗೂ ಸತ್ಯವೆನಿಸುತ್ತದೆ. ಈ ಹಿಂದೆಯಿದ್ದ ದಬ್ಬಾಳಿಕೆ, ಜಾತಿಯತೆ ಈಗಲೂ ಪ್ರಸ್ತುತ ಚಾಲ್ತಿಯಲ್ಲಿದೆ ಆದರೆ ಅದರ ಮುಖಚರ್ಯೆ ಬದಲಾಗಿದೆ ಅಷ್ಟೆ.
ರಾಜಶೇಖರ್ ಮಾಂಗ್ ಅಂತಹ ಪ್ರಖರ ಬಂಡಾಯ ಕವಿಗಳು ಕಾವ್ಯದ ಮೂಲಕ ಸಮಸಮಾಜದ ನೈಜತೆ ಕೊಡುತ್ತಲೆಯಿರಬೇಕು ಎಂದೆನಿಸುತ್ತದೆ. ಈ ಕಾವ್ಯದ ನಂತರ ಅವರು ಮತ್ತೆ ಬರೆದರು ಪ್ರಕಟಿಸಿಲ್ಲ. ನಾನು ಅವರ ಕಾವ್ಯದ ಓದುಗನಾಗಿ ಮನವಿಯೇನೆಂದರೆ ದಯವಿಟ್ಟು ಅವರು ಬರೆಯಬೇಕು. ತಮ್ಮ ಕಾವ್ಯ ಖಡ್ಗವನ್ನು ಕೆಳಗಿಳಿಸದೇಯಿರಬೇಕು.

ನನ್ನ ಪ್ರಕಾರ ಕಾವ್ಯ ಸಕಲರಿಗೆ ಒಲಿಯುವ ಅಥವಾ ಒತ್ತಾಯವಾಗಿ ಒಲಿಸಿಕೊಳ್ಳುವ ಬಗೆಯಲ್ಲ ಬದಲಿಗೆ ಧ್ಯಾನ ಅದರ ಅನುಭವ ಅವಶ್ಯಕವಾಗುತ್ತದೆ. ಕಾಗೆ ಕಾವ್ ಎಂದಿತು, ಗುಬ್ಬಿ ಚಿವ್ ಎಂದಿತು ಎನ್ನುವ ಕಾವ್ಯ ಬರೆಯಬಹುದು ಆದರೆ ಬದುಕಿದ ಕಾವ್ಯ ಬರೆಯುವ ಶಕ್ತಿ ಅತೀ ಕಡಿಮೆ ಕವಿಗಳಿಗೆ ದೊರೆಯುತ್ತದೆ. ಕವಿ ರಾಜಶೇಖರ ಮಾಂಗ್ ತಮ್ಮ ಕಾವ್ಯವನ್ನು ಈ ನಾಡಿಗೆ ಮತ್ತೊಮ್ಮೆ ಕೊಡಬೇಕು. ಸಮಾನೆತಯ ಹಾಡು ಬರೆಯಬೇಕು. ನೊಂದವರ ನೋವುಗಳ ಈಗಿನ ವಾಸ್ತವ ತೆರೆಕಾಣಬೇಕೆಂದು ಆಶೆಯ ವ್ಯಕ್ತಪಡಿಸುತ್ತೇನೆ.


ಕೆ.ಎಂ.ವಿಶ್ವನಾಥ ಮರತೂರ. ಯುವ ಬರಹಗಾರರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here