ಕನ್ನಡ ಭಾಷೆ ಉಳಿವಿಗಾಗಿ ಶ್ರಮಿಸುವ ಮನಸ್ಸುಗಳು ಹೆಚ್ಚಾಗಲಿ

0
79

ಕಲಬುರಗಿ: ನಮ್ಮ ನೆಲದ ಭಾಷೆಯಾದ ಕನ್ನಡ ಭಾಷೆಗೆ ಮಹತ್ವ ಕೊಟ್ಟು ವಚನಗಳನ್ನು ಕನ್ನಡದಲ್ಲಿ ರಚಿಸಿ, ಕನ್ನಡಕ್ಕೆ ಮರುಜೀವ ನೀಡಿದವರು ಹನ್ನೇರಡನೆಯ ಶತಮಾನದ ಬಸವಾದಿ ಶರಣರು ಎಂದು ನೆಲೋಗಿ ವಿರಕ್ತ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ನುಡಿದರು.

ಸ್ನೇಹ ಜೀವಿ ಬಿ.ಎಂ.ಪಾಟೀಲ ಕಲ್ಲೂರ ಅವರಿಂದ ತಮ್ಮ ಅಜ್ಜಿ ಲಿಂಗೈಕ್ಯರಾದ ಲಕ್ಷ್ಮೀಬಾಯಿ ಗೌಡಗಿ ಹಾಗೂ ತಂದೆಯವರಾದ ಲಿಂ. ಮಲ್ಕಣ್ಣಗೌಡ ಪೊಲೀಸ್ ಪಾಟೀಲ ಕಲ್ಲೂರ ಅವರ ಸ್ಮರಣೆಯಲ್ಲಿ ನಗರದ ಕನ್ನಡ ಭವನದ ಪ್ರಾಂಗಣದಲ್ಲಿ ನಿರ್ಮಿಸಲ್ಪಟ್ಟಿರುವ `ಶ್ರೀವಿಜಯ ಸದನ’ ವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಕನ್ನಡಿಗರಾದ ನಾವೇ ನಮ್ಮ ಕನ್ನಡ ಭಾಷೆಯನ್ನು ಉಳಿಸದಿದ್ದರೆ ಮತ್ಯಾರು ಉಳಿಸಲು ಸಾಧ್ಯ. ಹಾಗಾಗಿ ಭಾಷೆಯ ಉಳಿವಿಗಾಗಿ ಶ್ರಮಿಸುವ ಮನಸ್ಸುಗಳು ಹೆಚ್ಚಾಗಲಿ ಎಂದ ಅವರು, ವಿಜಯಕುಮಾರ ತೇಗಲತಿಪ್ಪಿ ಅವರು ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ನಂತರ ಜಿಲ್ಲೆಯಲ್ಲಿ ನಿರಂತರವಾಗಿ ಸಾಹಿತ್ಯಿಕ ಚಟುವಟಿಕೆಗಳು ಸಾಮಾನ್ಯ ಜನರ ಹೃದಯವನ್ನು ತಟ್ಟಿವೆ ಎಂದು ಮನದುಂಬಿ ಮಾತನಾಡಿದರು.

ಕನ್ನಡದ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ತಮ್ಮ ಮಠಗಳಲ್ಲಿ ಆಯೋಜಿಸುವ ಮೂಲಕ ಕನ್ನಡ ಭಾಷೆಯನ್ನು ಬೆಳೆಸುವ ಬಹು ದೊಡ್ಡ ಜವಾಬ್ದಾರಿ ಇಂದಿನ ಮಠಾಧೀಶರ ಮೇಲಿದೆ. ಮುಂದಿನ ದಿನಗಳಲ್ಲಿ ಲೇಖಕಿಯರಿಗೂ ಕಸಾಪ ರಾಜ್ಯಾಧ್ಯಕ್ಷರಾಗಲು ಬೆಂಬಲಿಸಬೇಕು. ತತ್ವಪದಕಾರರ ನೆಲದವನಾದ ನಾನು ಇದೇ ಮೊದಲ ಬಾರಿಗೆ ಕಲಬುರಗಿಯ ಕನ್ನಡ ಭವನಕ್ಕೆ ಬಂದಿದ್ದೇನೆ. ಕನ್ನಡ ಭವನದ ಅಂದ-ಚೆಂದವನ್ನು ನೋಡಿ ಬಹಳ ಖುಷಿಯಾಯಿತು. ಕನ್ನಡದ ರಥವನ್ನು ಅವಿರತವಾಗಿ ಎಳೆಯುತ್ತಿರುವ ವಿಜಯಕುಮಾರ ತೇಗಲತಿಪ್ಪಿ ಅವರ ಶ್ರಮ ಸಾರ್ಥಕವಾದುದು. – ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ವಿರಕ್ತ ಮಠ, ನೆಲೋಗಿ.

ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ ಮಾತನಾಡಿ, ಭಾಷೆ, ನೆಲ, ಜಲ, ಗಡಿ ಸಮಸ್ಯೆಗಳು ಬಂದಾಗ ನಾವೆಲ್ಲರೂ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ. ಕನ್ನಡ ಭವನದ ಶ್ರೀವಿಜಯ ಸದನದ ನಿರ್ಮಾಣಕ್ಕೆ ದಾಸೋಹಗೈದ ಪರೋಪಕಾರಿ ಬಿ.ಎಂ.ಪಾಟೀಲ ಕಲ್ಲೂರ ಅವರ ಸೇವೆ ಅಮೋಘವಾದುದು. ಪ್ರತಿಯೊಬ್ಬರೂ ದಾಸೋಹ ಪ್ರಜ್ಞೆಯನ್ನು ಬೆಳೆಸಿಕೊಂಡು ಬಡವರು, ನಿರ್ಗತಿಕರು, ಶೋಷಿತರ ಪರವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ನಾಡಿನ ಅನೇಕ ಸಾಹಿತಿಗಳು, ಶರಣರು, ಸೂಫಿ-ಸಂತರು ನೀಡಿರುವ ಕೊಡುಗೆಯಿಂದಾಗಿ ನಮ್ಮ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆಯಾಗಿದೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದು ಪ್ರತಿಯೊಬ್ಬ ಕನ್ನಡಿಗನ ಮೇಲಿದೆ. ಈ ನಿಟ್ಟಿನಲ್ಲಿ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಾಂಸ್ಕøತಿಕ ಕಾರ್ಯಕ್ರಮಗಳ ಆಯೋಜನೆಯ ಜತೆಗೆ ಇಲ್ಲಿನ ಭೌತಿಕ ಕಟ್ಟಡಗಳಿಗೂ ಕೂಡ ದಾನಿಗಳ ಸಹಕಾರದೊಂದಿಗೆ ಹಂತ ಹಂತವಾಗಿ ಕನ್ನಡ ಭವನವನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕನ್ನಡ ಭವನಕ್ಕೆ ವಿಶೇಷ ಕೊಡುಗೆ ನೀಡಿದ ಮಾಜಿ ಅಧ್ಯಕ್ಷರ ಹೆಸರುಗಳನ್ನು ಇಲ್ಲಿನ ಕಟ್ಟಡಗಳಿಗೆ ಇಡುವ ಮೂಲಕ ಅವರ ಕೊಡುಗೆಯನ್ನು ಸ್ಮರಿಸುವ ಕಾರ್ಯ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಶಾಸಕ ಅಲ್ಲಮಪ್ರಭು ಪಾಟೀಲ ನೆಲೋಗಿ, ಮಾಜಿ ಸಚಿವ ರೇವೂನಾಯಕ್ ಬೆಳಮಗಿ, ಉದ್ಯಮಿ ನೀಲಕಂಠರಾವ ಮೂಲಗೆ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಎಸ್ ಪಾಟೀಲ, ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ, ಹಿರಿಯ ಮುಖಂಡ ರುದ್ರಗೌಡ ಪಾಟೀಲ ಕಲ್ಲೂರ, ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ಶರಣಕುಮಾರ ಬಿಲ್ಲಾಡ, ಸ್ನೇಹ ಜೀವಿ ಬಿ.ಎಂ.ಪಾಟೀಲ ಕಲ್ಲೂರ, ಸಂಶೋಧಕ ಮುಡುಬಿ ಗುಂಡೇರಾವ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಎಸ್ ಅಂಡಗಿ, ಯಶ್ವಂತರಾಯ ಅಷ್ಠಗಿ, ಕೋಶಾಧ್ಯಕ್ಷ ಶರಣರಾಜ್ ಛಪ್ಪರಬಂದಿ ಮಾತನಾಡಿದರು. ಪ್ರಮುಖರಾದ ಬೈಲಪ್ಪ ನೆಲೋಗಿ, ಜಗದೀಶ ಮರಪಳ್ಳಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ವಿನೋದಕುಮಾರ ಜೆ.ಎಸ್., ಶಕುಂತಲಾ ಪಾಟೀಲ ಜಾವಳಿ, ಸಂಗಣ್ಣಗೌಡ ಪಾಟೀಲ ಕಲ್ಲೂರ, ಬಾಬುರಾವ ಪಾಟೀಲ, ನಾಗಪ್ಪ ಸಜ್ಜನ್, ಸಂತೋಷ ಕುಡಳ್ಳಿ, ಮಂಜುನಾಥ ಕಂಬಾಳಿಮಠ, ಡಾ. ಬಾಬುರಾವ ಶೇರಿಕಾರ, ಡಾ. ರೆಹಮಾನ್ ಪಟೇಲ್, ಅಮೀತ್ ಛಪ್ಪರಬಂದಿ, ಶ್ರೀಕಾಂತ ಪಾಟೀಲ ತಿಳಗೂಳ, ನರಸಿಂಗರಾವ ಹೇಮನೂರ, ನಾಗರಾಜ ಜಮದರಖಾನಿ, ಡಾ. ಕೆ.ಎಸ್.ಬಂಧು, ಚಂದ್ರು ಗೌಡರ್, ನಾಗನ್ನಾಥ ಯಳಸಂಗಿ, ಸಂಗನಬಸಯ್ಯ ಸ್ವಾಮಿ, ಪದ್ಮಾವತಿ ನಾಯಕ್, ಶಿಲ್ಪಾ ಜೋಶಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here