ಶಹಾಬಾದ: ರಸ್ತೆಯ ಮೆಲೆ ಮಲ ಮೂತ್ರ ವಿಸರ್ಜನೆ, ತಿಪ್ಪೆ ಗುಂಡಿಗಳ ರಾಶಿ,ಚರಂಡಿಯಲ್ಲಿ ತುಂಬಿಕೊಂಡಿರುವ ಹೂಳು,ಹದಗೆಟ್ಟ ಶೌಚಾಲಯಗಳು ಹೀಗೆ ಹತ್ತು ಹಲವಾರು ಸಮಸ್ಯೆಗಳು ನಗರದ ಬಹುತೇಕ ವಾರ್ಡಗಳಲ್ಲಿ ಗೋಚರಿಸುತ್ತಿವೆ.
ಒಂದು ಲಕ್ಷಕ್ಕಿಂತಕ್ಕಿಂತ ಹೆಚ್ಚು ಜನಸಂಖ್ಯೆಯಿದ್ದು, ಇಲ್ಲಿ ಬಹುತೇಕ ಕೂಲಿ ಕಾರ್ಮಿಕರು ಬಡವರು ಹೆಚ್ಚಾಗಿ ವಾಸ ಮಾಡುತ್ತಿದ್ದಾರೆ. ನಗರಸಭೆಗೆ ಸಾಕಷ್ಟು ಅನುದಾನ ಹರಿದು ಬಂದರೂ, ನಗರಕ್ಕೆ ಬೇಕಾಗುವ ಯಾವುದೇ ಮೂಲಭೂತ ಸೌಕರ್ಯ ಒದಗಿಸದೆ ಇರುವದು ದುರ್ದೈವದ ಸಂಗತಿ.
ತಿಪ್ಪೆಗುಂಡಿಯಾದ ರಸ್ತೆಗಳು : ನಗರದ ರಾಘವೇಂದ್ರ ಮಂದಿರದ ಪಕ್ಕದಲ್ಲಿಯೇ ಹರಡಿ ಬಿದ್ದಿರುವ ಕಸದ ರಾಶಿ ಗಬ್ಬೆದ್ದು ನಾರುತ್ತಿದೆ.
ಸಮೀಪದಲ್ಲಿಯೇ ಇರುವ ರೇಲ್ವೆ ನಿಲ್ದಾಣದಲ್ಲಿರುವ ಹೊಟೇಲ್, ಖಾನಾವಳಿ, ಬಾರಗಳಲ್ಲಿ ಬಳಸಿದ ತ್ಯಾಜ್ಯ ವಸ್ತುಗಳನ್ನು ಕಸ ಕಡ್ಡಿ ತಂದು ಎಸೆಯುವದರಿಂದ ಇಡಿ ರಸ್ತೆ ತಿಪ್ಪೆಗುಂಡಿಯಾಗಿ ಪರಿವರ್ತನೆಯಾಗಿದೆ.ಇದರಿಂದ ಹಂದಿ ಮತ್ತು ನಾಯಿಗಳ ಕಾಟ ಹೆಚ್ಚಾಗಿದೆ. ಅಲ್ಲದೇ ಹಗಲಿನಲ್ಲಿಯೇ ರಸ್ತೆಯ ಮೇಲೆ ಮಲಮೂತ್ರ ವಿಸರ್ಜನೆ ಮಾಡುವುದರಿಂದ ಮಹಿಳೆಯರು ರಸ್ತೆಯ ಮೇಲೆ ಕಾಲೀಡಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ.
ಇದೇ ರಸ್ತೆಯಿಂದ ಶಾಲಾ ಕಾಲೇಜು ಮಕ್ಕಳು ಶಾಲೆಗೆ ಹೋಗಬೇಕಾದರೆ ಮುಜುಗರ ಪಡಬೇಕಾದ ಪರಿಸ್ಥಿತಿ ಉಂಟಾಗಿದೆ. ದೇವಸ್ಥಾನದ ಹಾಗೂ ಶಾಲಾ ಕಾಲೇಜುಗಳ ಪಕ್ಕದಲ್ಲಿಯೇ ಇಷ್ಟೊಂದು ಕಲುಷಿತ ವಾತಾವರಣವಿದ್ದರೂ ಸ್ವಚ್ಛತೆ ಮಾಡಿಸುವಲ್ಲಿ ನಗರಸಭೆಯ ಅಧಿಕಾರಿಗಳು ಮುಂದಾಗುತ್ತಿಲ್ಲ.
ನಿತ್ಯ ಸಾವಿರಾರು ವಿದ್ಯಾರ್ಥಿಗಳು ಶಾಲಾ- ಕಾಲೇಜಿಗೆ ಹೋಗಬೇಕಾದರೆ ಮೂಗು ಮುಚ್ಚಿಕೊಂಡು ತಿರಗಾಡುವಂತಾಗಿದೆ. ಗಬ್ಬು ವಾಸನೆಯಿಂದ ರೋಗಗಳು ಹರಡುವ ಸಾಧ್ಯತೆಯಿದೆ. ಎಲ್ಲೆಂದರಲ್ಲಿ ನೊಣಗಳ ಹಾಗೂ ಸೊಳ್ಳೆಗಳ ಕಾಟ ಹೆಚ್ಚಾಗತೊಡಗಿದೆ. ಕನಿಷ್ಠ ಪಕ್ಷ ಕಸ ಬೀಳುವ ಪ್ರದೇಶದಲ್ಲಿ ಬ್ಲಿಚಿಂಗ್ ಪೌಡರ್ ಬಳಸುತ್ತಿಲ್ಲ.
ಮೂತ್ರಾಲಯವಿಲ್ಲ : ಇನ್ನೂ ನಗರದಲ್ಲಿ ಒಂದು ಸಾರ್ವಜನಿಕ ಮೂತ್ರಾಲಯಗಳಿಲ್ಲದೇ ಇರುವುದರಿಂದ ಸಾರ್ವಜನಿಕರಿಗೆ ಎಲ್ಲಿಲ್ಲದ ತೊಂದರೆಯಾಗುತ್ತಿದೆ. ತುರ್ತು ಕರೆಗೆ ಯಾವುದೋ ಗೊಡೆಗೋ ಅಥವಾ ರಸ್ತೆಯ ಪಕ್ಕದಲ್ಲಿಯೇ ಪೂರೈಸಬೇಕಾದ ಸಂದಿಗ್ಧ ಪರಿಸ್ಥಿತಿ ಮೂಡಿದೆ.
ಈ ಸಂಭಂದ ನಗರಸಭೆಯ ಅಧಿಕಾರಿಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಅನೇಕ ಬಾರಿ ಸಂಘಟನೆಗಳು ಪ್ರತಿಭಟನೆ ನಡೆಸಿದರು ಯಾವುದೇ ಪ್ರಯೋಜನ ವಾಗಿಲ್ಲ. ಅನೇಕ ಮೂಲ ಭೂತ ಸಮಸ್ಯೆಗಳಿಂದ ನಗರ ನರಳುತ್ತಿದ್ದರೂ, ಅಧಿಕಾರಿಗಳು ಮಾತ್ರ ಗಮನ ನೀಡುತ್ತಿಲ್ಲ. ಈ ಬಗ್ಗೆ ಗಮನಹರಿಸಬೇಕಾದ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ. ಕೂಡಲೇ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ನಗರಕ್ಕೆ ಒಮ್ಮೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಅಗತ್ಯವಿರುವ ಮೂಲ ಸೌಕರ್ಯ ಒದಗಿಸಿ ಕೊಡುವಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ನಗರದ ssಸಮುದಾಯ ಆರೋಗ್ಯ ಕೇಂದ್ರದ ಪಕ್ಕದ ರಸ್ತೆಯಲ್ಲೇ ರಾಘವೇಂದ್ರ ಮಂದಿರ ಹಾಗೂ ಶಾಲಾ ಕಾಲೇಜುಗಳಿವೆ. ಇಂತಹ ಸ್ಥಳಗಳಲ್ಲಿ ರೇಲ್ವೆ ನಿಲ್ದಾಣದ ಸಮೀಪದ ಅಂಗಡಿ, ತಳ್ಳೋಗಾಡಿಯ ಕಸವನ್ನು ಇಲ್ಲೇ ಹಾಕುತ್ತಿದ್ದಾರೆ. ಸಾರ್ವಜನಿಕರು ಈ ರಸ್ತೆಯ ಪಕ್ಕದಲ್ಲಿ ಮಲ,ಮೂತ್ರ ಮಾಡುತ್ತಿರುವುದರಿಂದ ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನೀಯರಿಗೆ ಮುಜುಗುರ ಉಂಟಾಗುತ್ತಿದೆ. ಕೂಡಲೇ ನಗರಸಭೆ ಅಧಿಕಾರಿಗಳು ಇಲ್ಲಿ ಮಲ, ಮೂತ್ರ ಮಾಡದಂತೆ ಕಠಿಣ ಕ್ರಮ ಕೈಗೊಳ್ಳಬೇಕು. ಕಸವನ್ನು ನಿತ್ಯ ವಿಲೇವಾರಿ ಮಾಡಬೇಕು.- ಪ್ರವೀಣ ರಾಜನ್ ಉಪನ್ಯಾಸಕ.
ಮಂದಿರ, ಶಾಲಾ-ಕಾಲೇಜು, ಗ್ರಂಥಾಲಯ, ಕನ್ನಡ ಭವನ ಹೊಂದಿರುವ ಈ ರಸ್ತೆ ಸ್ವಚ್ಛತೆಯಿಂದ ಕೂಡಿರಬೇಕು.ಆದರೆ ಇಲ್ಲಿ ಒಂದು ಬಾರಿ ವೀಕ್ಷಣೆ ಮಾಡಿದರೇ ನಗರಸಭೆಯ ಅಧಿಕಾರಿಗಳಿಗೆ ಶಪಿಸದೇ ಇರಲಾರರು. ಅಷ್ಟೊಂದು ವಾತಾವರಣ ಹದಗೆಟ್ಟಿದೆ.ಆದ್ದರಿಂದ ದಿನನಿತ್ಯ ಇಲ್ಲಿ ಸ್ವಚ್ಛತೆ ಕೈಗೊಳ್ಳಬೇಕಾದ ಅನಿವಾರ್ಯತೆಯಿದೆ. – ಯಲ್ಲಾಲಿಂಗ ಹೈಯ್ಯಳಕರ್ ಅಧ್ಯಕ್ಷ ಕರವೇ ಶಹಾಬಾದ.