ಕಲಬುರಗಿ: ಮಕ್ಕಳಿಗೆ ವಿದ್ಯೆ ಕಲಿಸಿ, ಅವರು ಜವಾಬ್ದಾರಿ ನಾಗರಿಕರಾಗುವುದಕ್ಕೆ ಮಾರ್ಗದರ್ಶನ ಮಾಡುವ ಶಿಕ್ಷಕರು ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದಾರೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಬಸವವಂತರಾವ ತೀರ್ಥೆ ಪಡಸಾವಳಿ ಅವರ 21ನೇ ಸ್ಮರಣೋತ್ಸವ ನಿಮಿತ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 21 ಸಾಧಕರಿಗೆ ಅಪ್ಪ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಲ್ಲನ್ನು ಕಟೆದು ಅದಕ್ಕೆ ಮೂರ್ತಿಯ ರೂಪವನ್ನು ಕೊಡುವ ಶಿಲ್ಪಿಯಂತೆ, ತೀರ್ಥೆಯವರು ಅನೇಕ ವಿದ್ಯಾರ್ಥಿಗಳಿಗೆ ಆದರ್ಶ ಶಿಕ್ಷಕರಾಗಿದ್ದರು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಶಿಕ್ಷಕರು ಮಕ್ಕಳ ಕಣ್ಣಲ್ಲಿ ಕನಸು ಬಿತ್ತುವ ಮೂಲಕ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಕಾರಣರಾಗುತ್ತಾರೆ. ಅಂತಹ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಪ್ರಶಸ್ತಿಗಳು ಯಾರಿಗೆ? ಏಕೆ? ವಿಷಯ ಕುರಿತು ಮಾತನಾಡಿದ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್, ಪ್ರಶಸ್ತಿಗಾಗಿ ವಶೀಲಿಬಾಜಿ ಮಾಡುವ, ದುಂಬಾಲು ಬೀಳುವ ಈ ಕಾಲದಲ್ಲಿ ಪ್ರಾಮಾಣಿಕರನ್ನು ಗುರುತಿಸಿ ಗೌರವಿಸುವಿದು ಉತ್ತಮ ಕಾರ್ಯವಾಗಿದೆ ಎಂದರು.
ಪಡಸಾವಳಿ, ಉದಗೀರ್, ಡೋಣಗಾಂವ ಮಠದ ಡಾ. ಶಂಭುಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಚಿಂಚನಸೂರು ಸಿದ್ಧಮಲ್ಲ ಶಿವಾಚಾರ್ಯರು ನೇತೃತ್ವ ವಹಿಸಿದ್ದರು.
ಇದೇವೇಳೆಯಲ್ಲಿ ಸರಸ್ವತಿಪುರದ ಸಂತ ಕೃತಿ ಲೋಕಾರ್ಪಣೆ ಮಾಡಲಾಯಿತು. ಪತ್ರಕರ್ತ ಸಂಜಯ ಎಸ್. ಪಾಟೀಲ ಪುಸ್ತಕ ಪರಿಚಯ ಮಾಡಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಕಜಾಪ ಜಿಲ್ಲಾಧ್ಯಕ್ಷ ಸಿ.ಎಸ್. ಮಾಲಿಪಾಟೀಲ ಮುಖ್ಯ ಅತಿಥಿಯಾಗಿದ್ದರು. ಹಿರಿಯ ಸಾಹಿತಿ ಎ.ಕೆ. ರಾಮೇಶ್ವರ, ಲೇಖಕ ಡಾ. ಮೋನಪ್ಪ ಎಲ್. ಸುತಾರ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.
ಎಚ್.ಬಿ.ತೀರ್ಥೆ ಸ್ವಾಗತಿಸಿದರು. ಅಪ್ಪಾಸಾಬ ತೀರ್ಥೆ ಪ್ರಾಸ್ತಾವಿಕ ಮಾತನಾಡಿದರು. ಡಾ. ಕೆ.ಎಸ್. ಬಂಧು ಪರಿಚಯಿಸಿದರು. ಸತೀಶ ತುಕಾರಾಮ ತೀರ್ಥೆ ವಂದಿಸಿದರು.
ಕೇವಲ ಕುಟುಂಬಕ್ಕೆ ಮಾತ್ರ ಸೀಮಿತವಾಗಿರುವ ಹಿರಿಯರ ಸ್ಮರಣೋತ್ಸವ ಕಾರ್ಯಕ್ರಮವನ್ನು ಸಾರ್ವತ್ರಿಕರಣಗೊಳಿಸುವ ಮೂಲಕ ತೀರ್ಥೆ ಕುಟುಂಬ ಇತರರಿಗೆ ಮಾದರಿಯಾಗಿದೆ. -ಬಸವರಾಜ ದೇಶಮುಖ, ಕಲಬುರಗಿ