ನೇತಾಜಿ ಬೋಸ್ ಅಪ್ರತಿಮ ಕ್ರಾಂತಿಕಾರಿ: ಇಂಕ್ವಿಲಾಬ್ ಘೋಷಣೆ ಮೊಳಗಿಸಿದ ವಿದ್ಯಾರ್ಥಿಗಳು

0
30

ವಾಡಿ: ದೇಶದ ಅತ್ಯುನ್ನತ ಪದವಿಯಾದ ಐಸಿಎಸ್ ಪರೀಕ್ಷೆಯಲ್ಲಿ ನಾಲ್ಕನೇ ರ್ಯಾಂಕ್ ಪಡೆದ ನೇತಾಜಿ ಸುಭಾಷಚಂದ್ರ ಬೋಸ್ ಅವರು ಪ್ರಮಾಣಪತ್ರಗಳನ್ನು ಹರಿದು ಹಾಕುವ ಮೂಲಕ ದೊಡ್ಡ ಹುದ್ದೆಯ ಅವಕಾಶವನ್ನು ಧಿಕ್ಕರಿಸುವ ಮೂಲಕ ಅಪ್ರತಿಮ ಕ್ರಾಂತಿಕಾರಿಯಾಗಿ ಹೊರ ಹೊಮ್ಮಿದರು ಎಂದು ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಒ) ಜಿಲ್ಲಾಧ್ಯಕ್ಷೆ ಸ್ನೇಹಾ ಕಟ್ಟಿಮನಿ ಹೇಳಿದರು.

ಪಟ್ಟಣದಲ್ಲಿ ಬುಧವಾರ ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಒ) ಹಾಗೂ ಆಲ್ ಇಂಡಿಯಾ ಡೆಮಾಕ್ರೇಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಸಂಘಟನೆಗಳ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದ ನೇತಾಜಿ ಸುಭಾಷಚಂದ್ರ ಬೋಸ್ ಅವರ ಭಾವಚಿತ್ರ ಮೆರವಣಿಗೆ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಬ್ರಿಟೀಷರು ನೀಡುವ ಗುಲಾಮಿ ನೌಕರಿ ಮಾಡುವುದಕಿಂತ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಶೋಷಣೆ ದಬ್ಬಾಳಿಕೆಯಿಂದ ಕೂಡಿದ ಬ್ರಿಟೀಷ್ ವ್ಯವಸ್ಥೆಯ ಹೆಡೆಮುರಿ ಕಟ್ಟಬೇಕು ಎಂಬ ಪಣ ತೊಟ್ಟರು.

ಅನ್ಯಾಯಗಳನ್ನು ಕಂಡು ಸಿಡಿಯುತ್ತಿದ್ದ ನೇತಾಜಿಯವರು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ಸಮಾಜದ ಕನಸು ಕಂಡಿದ್ದರು. ಅವರ ಕನಸಿನ ಸಮಾಜವಾದ ವ್ಯವಸ್ಥೆ ಸ್ಥಾಪನೆಗೆ ಅಂದಿನ ಕೆಲ ಸಂಧಾನಪರ ಸ್ವಾತಂತ್ರ್ಯ ಹೋರಾಟಗಾರರು ಅಡ್ಡಗಾಲು ಹಾಕಿದ್ದರು ಎಂದು ದೂರಿದರು.

ಎಐಡಿಎಸ್‍ಒ ನಗರ ಸಮಿತಿ ಕಾರ್ಯದರ್ಶಿ ಗೋವಿಂದ ಯಳವಾರ ಮಾತನಾಡಿ, ಪ್ರಸಕ್ತ ನಮ್ಮ ದೇಶದ ಸಾಮಾಜಿಕ ವ್ಯವಸ್ಥೆ ಮತ್ತೊಂದು ಕ್ರಾಂತಿಗಾಗಿ ಕೂಗುತ್ತಿದೆ. ಜಾತಿ, ಧರ್ಮ, ಧ್ವಜಗಳ ಹೆಸರಿನಲ್ಲಿ ನಮ್ಮ ರಾಜಕಾರಣಿಗಳು ಯುವಜನರ ಐಕ್ಯತೆಯನ್ನು ಒಡೆದು ಹಾಕುತ್ತಿದ್ದಾರೆ.

ಕೋಮು ಸಂಘರ್ಷಗಳು ಸಾಮಾಜದ ಅಶಾಂತಿಗೆ ಕಾರಣವಾಗುತ್ತಿವೆ. ಭಾರತೀಯರು ಎಂಬ ಭಾವಕ್ಕೆ ಕೋಮುವಾದ ದೊಡ್ಡ ಪೆಟ್ಟು ನೀಡುತ್ತಿದೆ. ಕುವೆಂಪು ಸಾರಿದ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಿದ್ದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾಂಗೀಯ ಘರ್ಷಣೆಗಳು ಭುಗಿಲೇಳುತ್ತಿವೆ. ವಿದ್ಯಾರ್ಥಿ ಯುವಜನರು ಭ್ರಷ್ಟ ರಾಜಕೀಯ ಪಕ್ಷಗಳ ನಾಯಕರ ಬಾಲಂಗೋಚಿಗಳಾಗದೆ ವೈಜ್ಞಾನಿಕ ಚಿಂತನೆಗಳ ತಳಹದಿಯಲ್ಲಿ ಸಂಘಟಿತರಾಗುವ ಮೂಲಕ ನೇತಾಜಿ ಬೋಸ್ ಅವರ ಕನಸು ನನಸು ಮಾಡಲು ಮುಂದಾಗಬೇಕು ಎಂದರು.

ನಿವೃತ್ತ ಹಿರಿಯ ಶಿಕ್ಷಕ ಅನೀಲಕುಮಾರ ಕುಲಕರ್ಣಿ ನೇತಾಜಿ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸುವ ಮೂಲಕ ವಿದ್ಯಾರ್ಥಿಗಳ ಪ್ರಭಾತ್‍ಪೇರಿಗೆ ಚಾಲನೆ ನೀಡಿದರು. ಎಐಡಿವೈಒ ಕಾರ್ಯದರ್ಶಿ ಗೌತಮ ಪರ್ತೂಕರ, ಎಐಡಿಎಸ್‍ಒ ಅಧ್ಯಕ್ಷ ವೆಂಕಟೇಶ ದೇವದುರ್ಗ, ಶಿಕ್ಷಕರಾದ ಗೀತಾ ಠಾಕೂರ, ಯಾಸ್ಮೀನ್ ಬೇಗಂ, ರುಕ್ಮಿಣಿ, ಮುಖಂಡರಾದ ಗೋದಾವರಿ ಕಾಂಬಳೆ, ಶರಣುಕುಮಾರ ದೋಶೆಟ್ಟಿ, ಶರಣು ಹೇರೂರ, ದತ್ತಾತ್ರೇಯ ಹುಡೇಕರ, ಸಂಪತಕುಮಾರ, ಜೈಭೀಮ್ ದಾಸರ, ರಾಜು ಒಡೆಯರಾಜ, ಮಹೆಬೂಬ್ ಸೇರಿದಂತೆ ವಿವಿಧ ಪ್ರೌಢ ಶಾಲೆಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಿದ್ಧಾರ್ಥ ತಿಪ್ಪನೋರ ನಿರೂಪಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here