ಶಹಾಬಾದನಲ್ಲಿ ಬೀದಿ ನಾಯಿಗಳ ಹಾವಳಿ

0
11

ಶಹಾಬಾದ: ನಗರದ ನಾನಾ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು,ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರವಾಗಿದೆ.ಇದಕ್ಕೆ ಉದಾಹರಣೆ ಎಂಬಂತೆ ನಗರದ ಹಳೆಶಹಾಬಾದನಲ್ಲಿ ಮಹಿಳೆಯ ಮೇಲೆ ನಾಯಿಗಳ ಗುಂಪು ಕೈ ಹಾಗೂ ಕಾಲುಗಳಿಗೆ ಕಚ್ಚಿ ಗಂಭೀರ ಗಾಯಗೊಳಿಸದಂತಹ ಘಟನೆ ನಡೆದಿದೆ.

ನಗರದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಎಲ್ಲೆಂದರಲ್ಲಿ ಓಡಾಡುತ್ತಿರುವ ಬೀದಿನಾಯಿಗಳ ಕಾಟದಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ಹರಸಾಹಸ ಪಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರಸಭೆ ಅಧಿಕಾರಿಗಳು ಮಾತ್ರ ಏನೂ ಗೊತ್ತಿಲ್ಲದವರಂತೆ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಬೆಳಿಗ್ಗೆ ಶಾಲೆಗಳು ತೆರೆಯುವ ಹಾಗೂ ಸಂಜೆ ಬಿಡುವ ವೇಳೆಯಲ್ಲಿ ಶಾಲಾ ಮಕ್ಕಳು ಆತಂಕದಿಂದ ಓಡಾಡುವಂತಾಗಿದೆ. ನಗರಸಭೆ ಆರೋಗ್ಯ ನಿರೀಕ್ಷಕರು ಕೇವಲ ನಗರದ ಸ್ವಚ್ಛತೆ ಜತೆಗೆ ನಗರದಲ್ಲಿ ನಿತ್ಯ ಎಗ್ಗಿಲ್ಲದೇ ಓಡಾಡುತ್ತಿರುವ ಬೀಡಾಡಿ ಹಸುಗಳು ಹಾಗೂ ಬೀದಿ ನಾಯಿಗಳ ಹಾವಳಿ ತಡೆಯುವಲ್ಲಿ ವಿಫಲರಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.

Contact Your\'s Advertisement; 9902492681

ಹಿಡಿಶಾಪ: ಬೀದಿ ನಾಯಿಗಳ ಹಾವಳಿ ತಪ್ಪಿಸುವಂತೆ ನಗರಸಭೆಗೆ ಸ್ಥಳೀಯರು ಅನೇಕ ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಸಾರ್ವಜನಿಕರು ನಗರಸಭೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದಾರೆ. ಪಟ್ಟಣದ ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಶಾಸ್ತ್ರಿ ವೃತ್ತ, ನೆಹರು ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಅನೇಕ ವೃತ್ತಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.ಬೀದಿ ನಾಯಿಗಳ ಹಾವಳಿ ತಪ್ಪಿಸಲು ಸಂತಾನ ತಡೆ ಚಿಕಿತ್ಸೆ ಮಾಡಬಹುದು.

ಆದರೆ, ಈ ಕಾರ್ಯಕ್ಕೆ ನಗರಸಭೆ ಮುಂದಾಗುತ್ತಿಲ್ಲ. ಆದ್ದರಿಂದ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಬೀದಿ ನಾಯಿಗಳ ಉಪಟಳಕ್ಕೆ ಜನ ಕಂಗಾಲಾಗಿದ್ದಾರೆ. ಶಾಲೆಗೆ ಬರುವ ಚಿಕ್ಕ ಮಕ್ಕಳ ಮೇಲೆ ಎರಗಿದರೇ ಹೇಗೆ ಎಂಬ ಆತಂಕ ಪೋಷಕರಲ್ಲಿ ಮನೆ ಮಾಡಿದೆ.ಕೂಡಲೇ ಬೀದಿ ನಾಯಿಗಳನ್ನು ನಿಯಂತ್ರಣ ಮಾಡಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

ನಗರದ ಗಲ್ಲಿ ಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳ ಹಿಂಡು ವಾಹನ ಸವಾರರ ಮೇಲೆ ದಾಳಿ ಮಾಡುತ್ತವೆ. ಕೆಲ ನಾಯಿಗಳು ಬೈಕ್, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ವಾಹನ ಸವಾರರು ಆತಂಕ ಪಡಬೇಕಾಗಿದೆ. ರಸ್ತೆಯಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರು ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. ರಾತ್ರಿ ವೇಳೆ ನಿದ್ದೆಗೆಡಿಸುತ್ತಿರುವ ಬಿಡಾಡಿ ನಾಯಿಗಳು ಉಪಟಳ ಹೆಚ್ಚಾಗಿದೆ – ಅನ್ವರ್ ಪಾಶಾ, ನಾಗಣ್ಣ ರಾಂಪೂರೆ, ಶರಣಗೌಡ ಪಾಟೀಲ ಸ್ಥಳೀಯ ನಿವಾಸಿಗಳು.

ಬೆಳಿಗ್ಗೆ ಶಾಲೆಗೆ ಹೋಗುವ ಸಂದರ್ಭದಲ್ಲಿ ನಾಯಿಗಳ ಗುಂಪೊಂದು ಮಹಿಳೆಯ ಕೈ ಹಾಗೂ ಕಾಲುಗಳಿಗೆ ಕಚ್ಚಿ ಗಂಭೀರ ಗಾಯಗೊಳಿಸದಂತಹ ಘಟನೆ ಬುಧವಾರ ನಗರದ ಹಳೆಶಹಾಬಾದನಲ್ಲಿ ನಡೆದಿದೆ.

ಹಳೆಶಹಾಬಾದ ನಿವಾಸಿ ಅಫ್‍ಸರ್ ಬೇಗಂ ಹಳೆಶಹಾಬಾದನ ಉರ್ದು ಶಾಲೆಯಲ್ಲಿ ಅಡುಗೆ ಸಹಾಯಕಿ.ಈಕೆ ಎಂದಿನಂತೆ ಬೆಳಿಗ್ಗೆ ಶಾಲೆಗೆ ಸಮೀಪ ಬಂದಾಗ ಆರೇಳು ನಾಯಿಗಳು ಗುಂಪು ಒಮ್ಮೆಲೆ ದಾಳಿ ನಡೆಸಿ, ಕೈ ಕಾಲುಗಳಿಗೆ ಕಚ್ಚಿ ಗಂಭೀರ ಗಾಯಗೊಳಿಸಿವೆ. ನಾಯಿಗಳ ಕಡಿತಕ್ಕೆ ಮಹಿಳೆ ಚೀರಾಡಿ, ಅಲ್ಲಿಂಗ ಓಡಿ ಹೋದರೂ, ನಾಯಿಗಳು ಅಟ್ಟಾಡಿಸಿ ಕಚ್ಚಿ ಘಾಸಿಗೊಳಿಸಿವೆ.ತಕ್ಷಣವೇ ಸಮೀಪದಲ್ಲಿದ್ದ ಜನರು ಓಡಿ ಬಂದು ನಾಯಿಗಳನ್ನು ಓಡಿಸಿದ್ದಾರೆ.ಅದೃಷ್ಟವಶ ನಾಯಿಗಳಿಂದ ಮಹಿಳೆ ಪಾರಾಗಿದ್ದಾಳೆ.ಮಹೀಲೆಯನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಗೆ ಕಳಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here