ಶಹಾಬಾದ: ಹುಬ್ಬಳ್ಳಿಯ ಕಾಲೇಜಿನಲ್ಲಿ ದಾರುಣವಾಗಿ ಕೊಲೆಗೀಡಾದ ವಿದ್ಯಾರ್ಥಿನಿಯ ಸಾವಿನ ಬಗ್ಗೆ ರಾಜ್ಯ ಎಐಡಿವೈಓ ಸಮಿತಿಯು ತನ್ನ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸುತ್ತದೆ ಎಂದು ಎಐಡಿವೈಓ ಕಾರ್ಯದರ್ಶಿ ರಮೇಶ ದೇವಕರ್ತಿಳಿಸಿದ್ದಾರೆ.
ಹತ್ಯೆ ಮಾಡಿದ ಆರೋಪಿಯನ್ನು ತ್ವರಿತವಾಗಿ ಬಂಧಿಸಿರುವುದು ಅಲ್ಪ ಸಮಾಧಾನದ ವಿಷಯವಾಗಿದ್ದರೂ ಆ ಹತ್ಯೆಯ ಬರ್ಬರತೆ ಎದೆ ಝಲ್ಲೆನ್ನಿಸುವಂತಹದ್ದು. ಒಂದು ಅಮಾಯಕ ಜೀವವು ವಿಕೃತ ಸನ್ನಿವೇಶದಲ್ಲಿ ಇಲ್ಲಿ ಬಲಿಯಾಗಿದೆ. ಇಡೀ ಘಟನೆಯ ಸತ್ಯಾಂಶವು ಏನೇ ಇದ್ದರೂ ಸಹ ಅದನ್ನು ತ್ವರಿತವಾಗಿ ಹೊರಗೆ ಎಳೆದು ತರುವ ಕೆಲಸ ಆಗಬೇಕು. ಆರೋಪಿಯು ನಡೆಸಿರುವ ಅಪರಾಧವು ಬಹಳ ವೇಗವಾಗಿ ಸಾಬೀತಾಗಿ ಕಾನೂನಿನ ಅನ್ವಯ ಆತನಿಗೆ ಅತ್ಯುಗ್ರವಾದ ಹಾಗೂ ನಿದರ್ಶನೀಯವಾದ ಶಿಕ್ಷೆಯಾಗಬೇಕು.
ಈ ವಿಷಯದ ಸುತ್ತ ಎಲ್ಲರ ಗಮನವಿರಬೇಕು ಇಲ್ಲವಾದಲ್ಲಿ, ಪ್ರಸಕ್ತ ಚುನಾವಣೆ ಸಂದರ್ಭದಲ್ಲಿ, ಈ ದುರ್ಘಟನೆಯನ್ನು ರಾಜಕೀಯ ಕಾರಣಗಳಿಗೆ ದುರ್ಬಳಕೆ ಮಾಡಿಕೊಳ್ಳುವ ಎಲ್ಲಾ ಅವಕಾಶಗಳಿವೆ ಎಂಬುದನ್ನು ಸಹ ಜನತೆ ಮನಗಾಣಬೇಕು. ಇಡೀ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸಾವಿಗೀಡಾದ ವಿದ್ಯಾರ್ಥಿನಿಗೆ ಮತ್ತು ಆಕೆಯ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರವನ್ನು ಎಐಡಿವೈಒ ರಾಜ್ಯ ಸಮಿತಿಯು ಆಗ್ರಹಿಸುತ್ತದೆ ಎಂದರು.