ವಾಡಿ: ಹಿಂದೂ ಅಂಧಾಭಿಮಾನದಲ್ಲಿರುವ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ್ದಾರೆ. ಆ ಮೂಲಕ ಕೋಮು ಉದ್ವಿಗ್ನತೆಗೆ ಪ್ರಚೋಧನೆ ನೀಡಿದ್ದಾರೆ ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್ಯುಸಿಐ) ಕಮ್ಯುನಿಸ್ಟ್ ಪಕ್ಷ ಆರೋಪಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡುವ ಮೂಲಕ ಪ್ರಧಾನಿ ಮೋದಿ ಹೇಳಿಕೆ ಖಂಡಿಸಿರುವ ಎಸ್ಯುಸಿಐ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ, ಭಾರತದಲ್ಲಿ ಮುಸ್ಲಿಂ ನಾಗರಿಕರು ನುಸುಳುಕೋರರಾಗಿದ್ದಾರೆ ಮತ್ತು ಅವರು ಹೆಚ್ಚಿ ಮಕ್ಕಳನ್ನು ಹೆರುತ್ತಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ದೇಶದ ಸಂಪತ್ತನ್ನು ಮುಸ್ಲೀಮರಿಗೆ ಹಂಚುತ್ತಾರೆ
ಎಂಬರ್ಥದಲ್ಲಿ ಹೇಳಿಕೆ ನೀಡಿರುವ ನರೇಂದ್ರ ಮೋದಿಯವರು ಹಿಂದೂ ಅಂಧಾಭೀಮಾನವನ್ನು ಪ್ರದರ್ಶಿಸಿದ್ದಾರೆ. ಈ ಹೇಳಿಕೆಯ ಹಿಂದೆ ಜನರ ಗಮನವನ್ನು ಬೇರೆಡೆ ಸೇಳೆಯುವ ತಂತ್ರ ಅಡಗಿದೆ. ಅಲ್ಲದೆ ಇದು ಕೋಮು ಧ್ರುವೀಕರಣವನ್ನು ಹುಟ್ಟುಹಾಕುವ ಪ್ರಯತ್ನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಅಖಂಡತೆ ಕಾಪಾಡುವ ಜತೆಗೆ ಜಾತಿ ಧರ್ಮ ಬೇಧ ಎಣಿಸದೆ ಸರ್ವಜನಾಂಗದ ಹಿತಕಾಯಬೇಕಾದ ಓರ್ವ ಪ್ರಧಾನಮಂತ್ರಿ ಇಂಥಹ ಕೋಮು ದ್ವೇಷದ ಹೇಳಿಕೆ ನೀಡಿರುವುದು ನಿಜಕ್ಕೂ ಪ್ರಜಾತಂತ್ರ ವ್ಯವಸ್ಥೆಯ ವಿರೋಧಿಯಾಗಿದೆ. ಇದು ಚುನಾವಣಾ ಮಾದರಿ ನೀತಿಸಂಹಿತೆಯ ಉಲ್ಲಂಘನೆಯಾಗಿದೆ. ಚುನಾವಣಾ ಆಯೋಗ ಮೌನಕ್ಕೆ ಶರಣಾಗದೆ ಪ್ರಧಾನಿ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ದೇಶದ ಪ್ರಜಾಸತ್ತಾತ್ಮಕ ಮನಸ್ಸಿನ ಜನರು ಪ್ರತಿಭಟನೆಯ ಧ್ವನಿ ಎತ್ತಬೇಕು ಎಂದು ವೀರಭದ್ರಪ್ಪಾ ಆರ್.ಕೆ ಕರೆ ನೀಡಿದ್ದಾರೆ.