ಕಲಬುರಗಿ: ಶಾಲಾ ಶಿಕ್ಷಣ ಮತ್ತು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಬಲವರ್ಧನೆಯ ಗ್ಯಾರಂಟಿ ಶೂನ್ಯವಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಶಿಕ್ಷಕರ ಘಟಕದ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ ತಿಳಿಸಿದರು.
ಬಿಜೆಪಿ ಮೋದಿ ಗ್ಯಾರಂಟಿ-2024 ಎಂಬ ಹೆಸರಿನಲ್ಲಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಶಿಕ್ಷಣ ಕ್ಷೇತ್ರಕ್ಕೆ ಬಹಳಷ್ಟು ಆದ್ಯತೆ ನೀಡದಿರುವುದರಿಂದ ಸಾಕಷ್ಟು ತೊಂದರೆ ಉಂಟಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸದ್ಯ 12 ಲಕ್ಷಕ್ಕೂ ಹೆಚ್ಚು ಹುದ್ದೆ ಖಾಲಿಯಿದ್ದು, ನವೋದಯ ಶಾಲೆಗಳಿಗೆ ಕಳೆದ 10 ವರ್ಷಗಳಿಂದ ನೇಮಕಾತಿ ಇಲ್ಲ. ಬಿಜೆಪಿ ಶಿಕ್ಷಣ ಕ್ಷೇತ್ರಕ್ಕೆ ಅಸಡ್ಡೆ ತೋರಿಸಿದೆ ಎಂದು ಆಪಾದಿಸಿದರು.
ಈ ಹಿಂದೆ ಯುಪಿಎ ಸರ್ಕಾರ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ತಂದಿದ್ದು, ಪಿಯುಸಿವರೆಗೆ ಅದನ್ನು ವಿಸ್ತರಿಸುವ ಪ್ರಣಾಳಿಕೆ ಕಾಂಗ್ರೆಸ್ ಪಕ್ಷದ್ದಾಗಿದೆ. ಬಿಜೆಪಿ ಜಾರಿಗೆ ತಂದಿಎಉವ ಎನ್ ಇಪಿ ಬಹಳಷ್ಟು ಗೊಂದಲವಿದ್ದು, ನಮ್ಮ ಸರ್ಕಾರ ಬಂದ ನಂತರ ಎನ್ ಇಪಿ ಪುನರ್ ಪರಿಶೀಲಿಸಲಾಗುವುದು ಎಂದರು.
ಖಾಸಗಿ ಕಾಲೇಜುಗಳಲ್ಲಿ ಶುಲ್ಕ ನಿಯಂತ್ರಣದ ಬಗ್ಗೆ ಸಮಿತಿ ರಚಿಸಿ ಕಡಿವಾಣ ಹಾಕಲಾಗುವುದು. ನವೋದಯ, ಕೇಂದ್ರೀಯ ವಿದ್ಯಾಲಯ ಶಾಲೆಗಳ ಸಂಖ್ಯೆ ಹೆಚ್ಚಿಸಿ ಶಿಕ್ಷಕರ ನೇಮಕಾತಿ ಕೂಡ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಗೆ ಈ ಬಾರಿ ಉತ್ತಮ ವಾತಾವರಣವಿದ್ದು, ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ಶಿಕ್ಷಕರ ಘಟಕದ ರಾಜ್ಯ ಸಂಚಾಲಕ ತಿಮ್ಮಯ್ಯ ಪುರ್ಲೆ, ಜಿಲ್ಲಾಧ್ಯಕ್ಷ ಡಾ. ಪಿ.ಎಸ್. ಕೋಕಟನೂರ, ಶಫಿ ಇದ್ದರು.