ಕಲಬುರಗಿ: ಭ್ರಷ್ಟ ಹಾಗೂ ಯುವಜನ ವಿರೋಧಿ ಬಿಜೆಪಿಯನ್ನು ಸೋಲಿಸಿ ಇಂಡಿಯಾ ಒಕ್ಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಡಿವೈಎಫ್ಐ ಹಾಗೂ ಎಸ್ ಎಫ್ಐ ಮುಖಂಡರಾದ ಲವಿತ್ರ ವಸ್ತ್ರದ ಹಾಗೂ ಸುಜಾತಾ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಳೆದ 10 ವರ್ಷಗಳಲ್ಲಿ ದೇಶವನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಹಿಂದಕ್ಕೆ ತಳ್ಳಿದೆ. ಕಾರ್ಪೋರೆಟ್, ಶ್ರೀಮಂತರ ಪರವಾದ, ಆರ್ಥಿಕತೆ ಮತ್ತು ಮತೀಯ, ದ್ವೇಷದ ರಾಜಕಾರಣದಿಂದ ದೇಶದ ಭವಿಷ್ಯ ಹಾಳಾಗಿದೆ ಎಂದು ಹೇಳಿದರು.
ಮೋದಿ ಸರ್ಕಾರದ ಉದ್ಯೋಗ ಕೊಡಿಸುವ ಭರವಸೆಯಿಂದ ಉದ್ಯೋಗ ಸಿಗದೆ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಭಾರತೀಯ ಸೈನ್ಯದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿಯಿದ್ದರೂ ಅವುಗಳ ಭರ್ತಿಗೆ ಕ್ರಮ ಕೈಗೊಂಡಿರುವುದಿಲ್ಲ ಎಂದರು.
ಯುವಜನ, ಶಿಕ್ಷಣ, ಕ್ರೀಡೆ, ಮಹಿಳೆ, ರೈತ ಸೇರಿದಂತೆ ವಿವಿಧ ಕ್ಷೇತ್ರಗಳ ಅಸಡ್ಡೆ ನೀತಿಯಿಂದಾಗಿ ಎಲ್ಲರೂ ಹೈರಾಣಾಗಿದ್ದಾರೆ. ಶಿಕ್ಷಣ ರಂಗವನ್ನು ಕಾರ್ಪೋರೇಟೀಕರಣ, ಕೋಮುವಾದಿಕರಣಗೊಳಿಸುತ್ತಿರುವ ಬಿಜೆಪಿ ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ ಎಂದು ದೂರಿದರು.
ಆಕಾಶ, ನಾಗಮ್ಮ, ಮೇಘ, ಅರ್ಜುನ್ ಮತ್ತಿತರರಿದ್ದರು.